Updated News From Kaup

ಪಲ್ಸ್ ಪೋಲಿಯೋ : ರೋಟರಿ ಕಲ್ಯಾಣಪುರ ಅಧ್ಯಕ್ಷರಿಂದ ಚಾಲನೆ

Thumbnail
Posted On: 27 Feb 2022, 10:30 PM

ಉಡುಪಿ : ರೋಟರಿ ಕಲ್ಯಾಣಪುರದ ವ್ಯಾಪ್ತಿಯಲ್ಲಿ ನಡೆದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಂಭು ಶಂಕರ್ ಹಾಗೂ ನಿರಂತರವಾಗಿ 25ವರ್ಷಗಳಿಂದ ಈ ಸಂಸ್ಥೆಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಿರ್ದೇಶಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿರುವ ಗಿರಿಧರ್ ಬಾಳಿಗ ನೇತೃತ್ವದಲ್ಲಿ ಫೆಬ್ರವರಿ 27ರಂದು ಸರ್ಕಾರದ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಹೂಡೆ ಮತ್ತು ಕೊಳಲಗಿರಿಯ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇ.96 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. ಇನ್ನು ಉಳಿದ 2ದಿನಗಳಲ್ಲಿ ಬಾಕಿ ಇದ್ದಿರುವ ಎಲ್ಲಾ ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಕ್ರಮ ವಹಿಸಲಾಯಿತು. ರೋಟರಿ ಕಲ್ಯಾಣಪುರದ ಸದಸ್ಯರು 6 ತಂಡಗಳಲ್ಲಿ 2 ಪ್ರಾಥಮಿಕ ಆರೋಗ್ಯ ಕೇಂದ್ರದ 22 ಖಾಯಂ ಮತ್ತು 1 ವಿಶೇಷ ಪೋಲಿಯೋ ಲಸಿಕಾ ಕೇಂದ್ರಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ಗಳನ್ನು ಸರಬರಾಜು ಮಾಡಲಾಯಿತು. ಈ ಕೇಂದ್ರಗಳ 135 ಸಿಬ್ಬಂದಿಯವರು ಮತ್ತು ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವಲಯ ಸೇನಾನಿ ಬ್ರಯಾನ್ ಡಿಸೋಜ, ಕಾರ್ಯದರ್ಶಿ ಪ್ರಕಾಶ್ ಕುಮಾರ್, ಮತ್ತಿತರ ರೋಟರಿ ಪದಾಧಿಕಾರಿಗಳು, ಸದಸ್ಯರು ಹಾಗೂ ಯುವ ವಿಚಾರ ವೇದಿಕೆ ಉಪ್ಪೂರು ಇದರ ಸದಸ್ಯರು ಉಪಸ್ಥಿತರಿದ್ದರು.

ಇನ್ನಂಜೆ : 14ನೇ ಶತಮಾನದ ಶಿಲಾಶಾಸನ ಪತ್ತೆ

Thumbnail
Posted On: 27 Feb 2022, 10:00 PM

ಕಾಪು : ಇನ್ನಂಜೆ ಗ್ರಾಮದ ಕುಂಜಾರ್ಗ ಪ್ರಭು ಕುಟುಂಬದ ಬ್ರಹ್ಮಸ್ಥಾನದ ಪಶ್ಚಿಮದಲ್ಲಿರುವ ಗದ್ದೆಯಲ್ಲಿ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಶಿಲಾಶಾಸನವು ವಿಜಯನಗರದರಸರ ಕಾಲದ್ದು ಎನ್ನಲಾಗಿದ್ದು, ಪುರಾತತ್ವ ಶಾಸನಗಳ ಸಂಶೋಧಕ ಅಧ್ಯಯನ ತಜ್ಞರಾದ ಸುಭಾಸ್ ನಾಯಕ್ ಬಂಟಕಲ್ಲು ಅವರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಶಿಲಾಶಾಸನದಲ್ಲಿ 14ನೇ ಶತಮಾನದ (1356-1377)ಬುಕ್ಕರಾಯನ ಹೆಸರು ಉಲ್ಲೇಖಿತ ಆಗಿದೆ. ಕೊನೆಯಲ್ಲಿ 'ಅರಸಿಂಗೆ ಗದ್ಯಾಣ ನೂರು ಹೊನ್ನು' ಕೊಟ್ಟ ಉಲ್ಲೇಖ. ಕೊನೆಯಲ್ಲಿ ಶಾಪಾಶಯ ಶಾಸನ ಹಾಳು ಮಾಡಿದವನಿಗೆ ವಾರಣಾಸಿಯಲ್ಲಿ ಗೋವುಗಳನ್ನು ಕೊಂದ ಪಾಪ. ಅವರ ಮಗ, ಆತನ ಮಗ ಇತ್ಯಾದಿ ಉಲ್ಲೇಖಿತವಾಗಿದೆ. ಒಂದಿಷ್ಟು ಪದಗಳು ಸಿಕ್ಕರೂ ಅಕ್ಷರಗಳು ನಶಿಸಿ ಹೋಗಿರುವುದರಿಂದ ಸಂಪೂರ್ಣ ಓದಲು ಸಾಧ್ಯವಿಲ್ಲದಾಗಿದೆ.

ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯರಿಗೆ ವಿಶೇಷ ಸಾಧನಾ ಪ್ರಶಸ್ತಿ ಗೌರವ

Thumbnail
Posted On: 27 Feb 2022, 09:47 PM

ಮಂಗಳೂರು : ಕಾಸರಗೋಡು ಜಿಲ್ಲೆ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಇದರ ಹದಿನೇಳನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ, ಮಕ್ಕಳ ಯಕ್ಷಗಾನ ಬಯಲಾಟದ ವಾರ್ಷಿಕ ಕಲಾಪದಲ್ಲಿ ಫೆಬ್ರವರಿ 26ರಂದು ಜಾನಪದ ಸಂಶೋಧಕ,ಕಟೀಲಿನ ಯಕ್ಷಪ್ರಭಾ ಪತ್ರಿಕೆಯ ಸಂಪಾದಕ ಕೆ.ಎಲ್.ಕುಂಡಂತಾಯರಿಗೆ "ವಿಶೇಷ ಸಾಧನಾ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನಿಸಿದರು. ಶ್ರೀ ಕ್ಷೇತ್ರ ಮಲ್ಲ‌ ಮೊಕ್ತೇಸರ ವಿಷ್ಣು ಭಟ್,ನಿವೃತ್ತ ಐಎಎಸ್ ಅಧಿಕಾರಿ( ಕೇರಳ ಸರಕಾರದ ಸೆಕ್ರೆಟರಿ) ಕೆ.ಗೋಪಾಲಕೃಷ್ಣ ಭಟ್ ಎಡನೀರು, ಅಡ್ಯನಡ್ಕ ಅಮೃತಧಾರಾ ಕ್ಲಿನಿಕ್ ನ ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಪೆರ್ಲದ ಜ್ಯೋತಿ ಮೆಡಿಕಲ್ಸ್ ನ ಡಾ.ಎಸ್.ಎನ್.ಭಟ್ ಪೆರ್ಲ, ಪ್ರಸಿದ್ಧ ಭಾಗವತ ಡಾ.ಸತ್ಯನಾರಾಯಣ ಪಣಿಂಚಿತ್ತಾಯ, ಕೃಷ್ಣ ಭಟ್ ದೇವಕಾನ,ಹಾಗೂ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ ಮತ್ತು ಕೇಂದ್ರದ ನಾಟ್ಯಗುರು ಮತ್ತು ಅಧ್ಯಕ್ಷರಾದ ಸಬ್ಬಣಕೋಡಿ ರಾಮ ಭಟ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಟಿ ಪಿ ಮಂಜುನಾಥ್ ಅವರಿಗೆ ಬಿ ಅಪ್ಪಣ್ಣ ಹೆಗಡೆ ಜೀವಮಾನ ಸಾಧನ ಪ್ರಶಸ್ತಿ

Thumbnail
Posted On: 27 Feb 2022, 09:14 PM

ಕುಂದಾಪುರ: ಓಂ ಶಾಂತಿ ಪ್ರೊಡಕ್ಷನ್ ಕೋಟೇಶ್ವರ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಮಾಚ್೯ 1 ರಂದು ಸಂಜೆ 5:30 ಕ್ಕೆ ಹೊಡೆ ಹೋಬಳಿ ಹನುಮನ್ ಗ್ಯಾರೇಜ್ ಸಮೀಪದಲ್ಲಿರುವ ಪ್ರೆಸ್ ಕ್ಲಬ್ ವಠಾರದಲ್ಲಿ ಶಿವರಾತ್ರಿ ಆಧ್ಯಾತ್ಮ ಸಂದೇಶ, ತಾಲೂಕು ಪತ್ರಕರ್ತರ ಸಂಘದ ಮೂರನೇ ವಾರ್ಷಿಕ ಸಂಭ್ರಮ ಜರಗಲಿದೆ. ಈ ಸಂದರ್ಭ ಹಿರಿಯ ಪತ್ರಕರ್ತ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕ ಟಿ ಪಿ ಮಂಜುನಾಥ್ ರವರಿಗೆ ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ತದನಂತರ ಕುಂದಾಪುರ ಜಿಲ್ಲೆ ಹೋರಾಟ ಎತ್ತ ಸಾಗುತ್ತಿದೆ ಎಂಬ ವಿಷಯದ ಕುರಿತು ಚರ್ಚೆ, ಸಂವಾದ ಹಾಗೂ ಭಕ್ತಿಗಾನ ವೈಭವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಇನ್ ಸ್ಟಾಗ್ರಾಂ ಟ್ರೋಲ್ ಕಿಂಗ್ 193 ಪೇಜ್‌ ಅಡ್ಮಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

Thumbnail
Posted On: 27 Feb 2022, 03:54 PM

ಮಂಗಳೂರು : ಇನ್ ಸ್ಟಾಗ್ರಾಂ ಖಾತೆಯಲ್ಲಿ ವ್ಯಕ್ತಿಯೋರ್ವ ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿರುವುದನ್ನು ಕಂಡು ಈ ಪೇಜ್ ನ ವಿರುದ್ಧ ಮಂಗಳೂರಿನ ನಿವಾಸಿಯೋರ್ವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿದಂತೆ ಫೆಬ್ರವರಿ 24ರಂದು ಬೆಳಿಗ್ಗೆ ಸುಮಾರು 8ಗಂಟೆಗೆ ತನ್ನ ಸ್ನೇಹಿತರೊಂದಿಗೆ ಇನ್ ಸ್ಟಾ ಗ್ರಾಂ ಖಾತೆಯನ್ನು ಪರಿಶೀಲಿಸುತ್ತಿರುವಾಗ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯಾರೋ ವ್ಯಕ್ತಿಯು ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಮಾಡುತ್ತಿರುವುದು ಕಂಡು ಬಂದು ತಮ್ಮ ಮನಸ್ಸಿಗೆ ನೋವುಂಟಾಗಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಕೋಮು ಗಲಭೆ ನಡೆದು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಮಂಗಳೂರು ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2022 ಕಲಂ 66(ಸಿ)66(ಡಿ), ಐಟಿ ಕಾಯ್ದೆ ಮತ್ತು ಕಲಂ 153(ಎ), 505(2) ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕನೊಬ್ಬನನ್ನು ವಿಚಾರಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

ಬಂಟಕಲ್ಲು : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Thumbnail
Posted On: 27 Feb 2022, 12:14 PM

ಕಾಪು : ಬಂಟಕಲ್ಲು ಶಾಲೆಯಲ್ಲಿ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ಸಹಕಾರದೊಂದಿಗೆ ನಡೆದ ಪೋಲಿಯೋ ಲಸಿಕಾ ಶಿಬಿರಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ ಕೆ ಆರ್ ಪಾಟ್ಕರ್ ಚಾಲನೆ ನೀಡಿದರು. ಬೆಳಗ್ಗೆ 11 ಗಂಟೆ ಹೊತ್ತಿಗೆ ನೂರಕ್ಕೂ ಅಧಿಕ ಮಕ್ಕಳು ಲಸಿಕೆ ಪಡೆದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ಲಸಿಕಾ ಕೇಂದ್ರಗಳ ಸಿಬ್ಬಂದಿಯವರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ತಿಳಿಸಿದರು. ಲಯನ್ಸ್ ಕಾರ್ಯದರ್ಶಿ ಅನಿತಾ ಮೆಂಡೋನ್ಸಾ, ರೀನಾ, ಐರಿನ್, ಅಂಗನವಾಡಿ ಕಾರ್ಯಕರ್ತೆ ವಿನಯಾ, ಆಶಾ ಕಾರ್ಯಕರ್ತೆಯರಾದ ಸವಿತಾ, ಕಮಲ, ರೆಹಮತ್ ಉಪಸ್ಥಿತರಿದ್ದರು.

ಉಕ್ರೇನ್ನಲ್ಲಿ ಇರುವವರು, ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಮನವಿ

Thumbnail
Posted On: 24 Feb 2022, 10:10 PM

ಮಂಗಳೂರು: ರಷ್ಯಾ-ಉಕ್ರೇನ್ ಸಂಘರ್ಷವು ಸಮರದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಜನರು ನೆಲೆಸಿದ್ದರೆ ಅಥವಾ ಅಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ನೀಡುವಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನತೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಯಾರಾದರೂ ನಮ್ಮವರು ಅಲ್ಲಿ ಸಮಸ್ಯೆಗೆ ಸಿಲುಕಿದ್ದರೆ ಮಾಹಿತಿ ನೀಡಿ, ಅಲ್ಲಿ ಇರುವವರು ಹಾಗೂ ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ರವರು ಜಿಲ್ಲಾಧಿಕಾರಿಯವರ ಕಚೇರಿ, ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ 1077 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಭಾರತದ ದೂತಾವಾಸ ಮತ್ತು ಸರ್ಕಾರದ ಜೊತೆ ಸಂಪರ್ಕದಲ್ಲಿರಲು ವಿದೇಶಾಂಗ ಇಲಾಖೆಯ 1800118797 (Toll free), +91-11-23012113, +91-11 23014104, +91-11-23017905 ಸಂಪರ್ಕ ಸಂಖ್ಯೆಗೆ ಕರೆ Fax: +91-11-23088124, Email: situationroom@mea.gov.in ಮೂಲಕ ಮಾಹಿತಿ ನೀಡಲು ಸರ್ಕಾರ ಸೂಚಿಸಿದೆ.

ರಶ್ಮಿ ಸನಿಲ್ ರಿಗೆ ಚಂದನ ಸಾಹಿತ್ಯ ಜ್ಯೋತಿ ರಾಜ್ಯ ಪ್ರಶಸ್ತಿ

Thumbnail
Posted On: 24 Feb 2022, 05:24 PM

ಮಂಗಳೂರು : ಲೇಖಕಿ, ಬರಹಗಾರ್ತಿ, ನೃತ್ಯಪಟು, ನಿರೂಪಕಿ ರಶ್ಮಿ ಸನಿಲ್ ಇವರ ಗಣನೀಯ ಸೇವೆಯನ್ನು ಗುರುತಿಸಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ ಫೆಬ್ರವರಿ 20ರಂದು ಚಂದನ ಸಾಹಿತ್ಯ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ. ಕಾಮ್ ಪದವೀಧರೆಯಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆ ಮಾತಾದವರು, 70 ಕ್ಕೂ ಹೆಚ್ಚು ಅಂತರ್ಜಾಲ ಹಾಗೂ ನೇರ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 300 ಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವರು. ಯುವವಾಹಿನಿ, ರೋಟರಿ, ಮಹಿಳಾ ಮಂಡಳಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ಕಥಾಬಿಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ಪುತ್ತೂರು ಸಾಹಿತ್ಯ ವೇದಿಕೆ, ಚಂದನ ಸಾಹಿತ್ಯ ವೇದಿಕೆ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯೆ ಕೂಡ ಆಗಿದ್ದಾರೆ. ಈ ಸಂದರ್ಭದಲ್ಲಿ ಭೀಮರಾವ್ ವಾಷ್ಟರ್ , ನಾರಾಯಣ ಕುಕ್ಕುವಳ್ಳಿ , ವೈಲೇಶ್ ಪಿ. ಕೊಡಗು, ಹಾಜಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಭಾರತ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಬಸ್ರೂರು

Thumbnail
Posted On: 24 Feb 2022, 04:37 PM

ಉಡುಪಿ : ಸುದ್ದಿ ಕಿರಣ ಟಿವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕ್ರತ ಇಲಾಖೆಯ ವತಿಯಿಂದ ಕೊಡ ಮಾಡಲ್ಪಡುವ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಚಂದ್ರಶೇಖರ ಬಸ್ರೂರು ಇವರಿಗೆ ನೀಡಿ ಗೌರವಿಸಲಾಯಿತು. ಫೆಬ್ರವರಿ 20ರಂದು ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣ ಬೆಂಗಳೂರು ರಲ್ಲಿ ನಡೆದ ಸುದ್ದಿ ಕಿರಣ ಟಿ.ವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ೨೦೨೨ ನ್ನು ಚಂದ್ರಶೇಖರ ಬಸ್ರೂರು ಇವರಿಗೆ ನೀಡಿ ಗೌರವಿಸಲಾಯಿತು. ರಂಗಭೂಮಿ ಕಲಾವಿದರಾಗಿ, ನಾಟಕ ರಚನೆ ಹಾಗೂ ನಿದೇ೯ಶಕರು, ಸಿನಿಮಾ ನಟ, ನಿದೇ೯ಶಕ,ವನಿಮಾ೯ಪಕರಾಗಿ, ಸಾವ೯ಜನಿಕ ಹೋರಾಟದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಜಿಲ್ಲೆಯಲ್ಲಿ 73995 ಮಕ್ಕಳಿಗೆ ಪೋಲಿಯೋ ಲಸಿಕೆ : ಕೂರ್ಮಾರಾವ್ ಎಂ

Thumbnail
Posted On: 22 Feb 2022, 08:11 PM

ಉಡುಪಿ : ಫೆಬ್ರವರಿ 27 ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯ 0-5 ವರ್ಷದೊಳಗಿನ 73995 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 0-5 ವರ್ಷದೊಳಗೆ ಗ್ರಾಮೀಣ ಪ್ರದೇಶದ 61105 ಮತ್ತು ನಗರ ಪ್ರದೇಶದ 12890 ಸೇರಿದಂತೆ ಒಟ್ಟು 73995 ಮಕ್ಕಳಿಗೆ ಫೆಬ್ರವರಿ 27 ರಂದು ಪಲ್ಸ್ ಪೋಲಿಯೋ ಲಸಿಕೆ ನೀಡಲು, ಗ್ರಾಮೀಣ ಪ್ರದೇಶದಲ್ಲಿ 571 ಹಾಗೂ ನಗರ ಪ್ರದೇಶದಲ್ಲಿ 91 ಸೇರಿದಂತೆ ಒಟ್ಟು 662 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಇದಲ್ಲದೆ 6 ಮೊಬೈಲ್ ಟೀಮ್ ಮತ್ತು 36 ಟ್ರಾನ್ಸಿಟ್ ಬೂತ್ಗಳನ್ನು ಹಾಗೂ ಎಲ್ಲಾ ಟೋಲ್ಗೇಟ್ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುವುದು ಎಂದರು. ಲಸಿಕಾ ಕಾರ್ಯಕ್ರಮದಲ್ಲಿ 2794 ಲಸಿಕಾ ಸ್ವಯಂಸೇವಕರು ಮತ್ತು 125 ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದು, ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳು, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದರು. ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಉದ್ಘಾಟಣೆಯನ್ನು ಫೆಬ್ರವರಿ 27 ರಂದು ಬೆಳಗ್ಗೆ 8 ಗಂಟೆಗೆ ಸರಕಾರಿ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು, ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹಾಕಿಸಿ, ಮಕ್ಕಳನ್ನು ಪೋಲಿಯೋದಿಂದ ರಕ್ಷಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಮನವಿ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.