Updated News From Kaup

ಕಾಪು : ಜನತಾದಳದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರಿಗೆ ಅಭಿನಂದನಾ ಸಮಾರಂಭ

Thumbnail
Posted On: 13 Jan 2022, 10:37 PM

ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ)ಪಕ್ಷದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರಿಗೆ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಇತರೆ ವಾಡ್೯ಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಾಗರಿಕರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭವು ಜನವರಿ 12ರಂದು ಕೊಂಬಗುಡ್ಡೆ ವಾರ್ಡಿನಲ್ಲಿ ನಡೆಯಿತು. ಸಮಾರಂಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವರಾವ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ರಾಜ್ಯ ನಾಯಕರಾದ ಉದಯ ಹೆಗ್ಡೆ ಮತ್ತು ರಾಜ್ಯ ಯುವ ಜನತಾದಳದ ಉಪಾಧ್ಯಕ್ಷರಾದ ಸೈಯದ್ ಶಾಹಿದ್ ರವರು ಮಾತನಾಡಿದರು. ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರು ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ತನ್ನ ವಾರ್ಡಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ಬಗ್ಗೆ ಭರವಸೆ ನೀಡಿದರು. ತನ್ನನ್ನು ಚುನಾಯಿಸಿದ ಮತದಾರರೆಲ್ಲರಿಗೂ, ಕಾರ್ಯಕರ್ತರಿಗೂ, ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಮಾತನಾಡಿ ಜನತಾದಳ ಪಕ್ಷದ ಈವರೆಗಿನ ಸಾಧನೆ, ಮುಂದಿನ ಯೋಜನೆ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡರು ಈ ರಾಜ್ಯಕ್ಕೆ ಕೊಟ್ಟಂತಹ ಕಾರ್ಯಕ್ರಮಗಳು, ಪ್ರಾದೇಶಿಕ ಪಕ್ಷಗಳು ನಮಗೆ ಯಾವ ರೀತಿ ಅಗತ್ಯವಿದೆ ಎಂಬುದರ ಬಗ್ಗೆ ಮತ್ತು ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳು ಮತ್ತು ಕುಮಾರಸ್ವಾಮಿಯವರು 2023ಕ್ಕೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತನ್ನು ಹೇಳುತ್ತಾ, ಇನ್ನು ಮುಂದೆ ಕೊಂಬಗುಡ್ಡೆ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಉಮೇಶ್ ಕರ್ಕೇರರವರ ಒಟ್ಟಿಗೆ ತಾನು ಕೂಡ ಇದ್ದು ತಮ್ಮೆಲ್ಲರ ಕೆಲಸಮಾಡುತ್ತೇನೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಮತದಾರ ಬಾಂಧವರಿಗೆ, ಊರಿನವರಿಗೆ ಧನ್ಯವಾದಗಳನ್ನು ಸಲ್ಲಿಸಿ ಯಾವತ್ತೂ ನಿಮ್ಮೆಲ್ಲರ ಸಹಕಾರ ನಮ್ಮ ಪಕ್ಷಕ್ಕೆ ಇರಲಿ ನಾವು ನಿಮ್ಮೊಂದಿಗಿದ್ದೇವೆ ಮುಂದಿನ ದಿನಗಳಲ್ಲಿ ಕಾಪು ಪುರಸಭೆಯ 23 ವಾರ್ಡ್ ಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಷ್ಟೇ ಅಲ್ಲದೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಅಧಿಕಾರ ತರುವಲ್ಲಿ ನಾವು ಪ್ರಯತ್ನ ಮಾಡುತ್ತೇವೆ ನಮಗೆ ವಿಶ್ವಾಸ ಇದೆ ಎಂದರು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿರಿಸಿ ಪ್ರಾದೇಶಿಕ ಪಕ್ಷಕ್ಕೆ ಮತದಾರರು ಮನ್ನಣೆ ಕೊಡುತ್ತಾರೆ. ನಮಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಹಿರಿಯರು, ಪಕ್ಷದ ರಾಜ್ಯ, ಜಿಲ್ಲಾ ನಾಯಕರುಗಳು ಉಡುಪಿ ಜಿಲ್ಲೆಯ ವೀಕ್ಷಕರಾದ ಸುಧಾಕರ ಶೆಟ್ಟಿ, ಕಾಪು ಬ್ಲಾಕ್ ಕಾರ್ಯಾಧ್ಯಕ್ಷರಾದ ರಾಜು ಆರ್ ಪುತ್ರನ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಯರಾಮ ಆಚಾರ್ಯ ವಂದಿಸಿದರು.

ಉದ್ಯಾವರ : ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದ 77ನೇ ವಾರ್ಷಿಕ ಮಂಗಲೋತ್ಸವ

Thumbnail
Posted On: 13 Jan 2022, 08:50 PM

ಉದ್ಯಾವರ : ಇಲ್ಲಿನ ಬಿಲ್ಲವ ಮಹಾಜನ ಸಂಘ (ರಿ.) ಇದರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ 77ನೇ ವಾರ್ಷಿಕ ಮಂಗಲೋತ್ಸವವು ಜರಗಲಿದೆ. ಜನವರಿ 3ರಿಂದ ಮೊದಲ್ಗೊಂಡು 12ರ ತನಕ ನಗರಭಜನೆ, 13ರಂದು ಮಧ್ಯಾಹ್ನ ಗಂಟೆ 12-15ಕ್ಕೆ ಕಲಶ ಪ್ರತಿಷ್ಠೆಯಾಗಿ ಮರುದಿನ 14, ಶುಕ್ರವಾರ ಪೂರ್ವಾಹ್ನ ಗಂಟೆ 9ರ ಪರ್ಯಂತ ನಡೆಯಲಿರುವ ಸಪ್ತಝಾಮದ ಶ್ರೀ ದೇವಿ ಭಜನಾ ಸಪ್ತಾಹ ಮಹೋತ್ಸವ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ‌.

ಮಕರ ಸಂಕ್ರಮಣ ಆಧ್ಯಾತ್ಮಿಕ ಪುಣ್ಯಕಾಲ - ದೇವಯಾನದ ಆರಂಭ

Thumbnail
Posted On: 13 Jan 2022, 06:39 PM

ಸಾಂಸ್ಕೃತಿಕ ಸಂಭ್ರಮಗಳಿಗೆ ಕಾಂತಿ ಹೆಚ್ಚುವ, ಧಾರ್ಮಿಕ ಆಚರಣೆಗಳಿಗೆ ಪ್ರಶಸ್ತವೆನಿಸುವ, ಆಧ್ಯಾತ್ಮಿಕವಾಗಿ ’ಪುಣ್ಯಕಾಲ’ ಎಂದು ನಂಬಲಾಗುವ ’ಉತ್ತರಾಯಣ’ವು ಮಕರ ಸಂಕ್ರಮಣದಿಂದ ಆರಂಭವಾಗುತ್ತದೆ. ಮಿಥುನ ಮಾಸ ಕಳೆದು ಕರ್ಕಾಟಕ ಮಾಸ ಪ್ರಾರಂಭವಾಗುವಾಗ ದಕ್ಷಿಣಾಯನ ಮೊದಲಿಡುತ್ತದೆ. ಆರು ತಿಂಗಳ ಬಳಿಕ ಧನುರಾಶಿಯಿಂದ ಸೂರ‍್ಯ ಮಕರ ರಾಶಿಗೆ ಪ್ರವೇಶಿಸುತ್ತಿರುವಂತೆಯೇ ಉತ್ತರಾಯಣ ಸನ್ನಿಹಿತವಾಗುತ್ತದೆ. ದಕ್ಷಿಣಾಯನವು ’ಪಿತೃಯಾನ’ವೆಂದೂ, ಉತ್ತರಾಯಣವು ’ದೇವಯಾನ’ವೆಂದೂ ವಿಭಾಗಿಸಲ್ಪಟ್ಟಿವೆ. ಉಪನಿಷತ್ತು, ಭಗವದ್ಗೀತೆ, ಮಹಾಭಾರತಗಳಲ್ಲಿ ದೇವಯಾನದ ಉಲ್ಲೇಖವಿದೆ. ಪ್ರಾಶಸ್ತ್ಯದ ವಿವರಣೆ ಇದೆ. ಭೀಷ್ಮರಂತಹ ಮಹನೀಯರು ಶರಶಯ್ಯೆಯಲ್ಲಿ ಮಲಗಿಯೇ ತನ್ನ ನಿಷ್ಕ್ರಮಣಕ್ಕೆ ಉತ್ತರಾಯಣವನ್ನು ನಿರೀಕ್ಷಿಸುತ್ತಾ ಕಾಲ ಕಳೆದರು. ಪ್ರಕೃತಿಯ ರಮ್ಯಾದ್ಭುತ ಸ್ಥಿತ್ಯಂತರಗಳನ್ನು ಗಮನಿಸುತ್ತಲೇ ತನ್ನ ಬದುಕಿಗೊಂದು ಸುಂದರ ಸಂವಿಧಾನವನ್ನು ರೂಪಿಸಿಕೊಂಡ ಮಾನವ ಈ ನಿಷ್ಕರ್ಷೆಗೆ ಶತಮಾನ ಶತಮಾನಗಳಷ್ಟು ದೀರ್ಘ ಅವಧಿಯಲ್ಲಿ ಅಧ್ಯಯನ (ಗಮನಿಸಿ ಪಡೆದ ಅನುಭವ) ನಡೆಸಿರಬೇಕು, ಕೊನೆಗೊಂದು ನಿರ್ಧಾರಕ್ಕೆ ಬಂದಿರಬೇಕು. ಆದರೆ ಕಾಲಗಣನೆಗೆ ವ್ಯವಸ್ಥೆ ಒದಗಿದರೂ ಕಾಲದ ಗತಿಯನ್ನು ನಿರ್ಧರಿಸಲಾಗದೆ, ಪಥವನ್ನು ನಿಖರವಾಗಿ ನಿರೀಕ್ಷಿಸಲಾಗದೆ, ’ಕಾಲಯ ತಸ್ಮೈ ನಮಃ’ ಎಂದಿರಬೇಕು. ಎಲ್ಲ ಕಾಲವು ಸಂದರ್ಭಾನುಸಾರ, ಸಂಭವ ವಿಧಾನದಿಂದ ಪ್ರಶಸ್ತವೇ ಆದರೂ ಕೆಲವು ತಿಂಗಳು, ಪರ್ವ ದಿನಗಳು, ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮೆಗಳು ಹೆಚ್ಚು ಪ್ರಶಸ್ತವೆಂದು ನಮ್ಮ ಪೂರ್ವಸೂರಿಗಳು ನಿರ್ಧರಿಸಿದ ಆಚರಣೆಗಳಿರುತ್ತವೆ ಅಥವಾ ಸಂಭ್ರಮದ ಹಬ್ಬಗಳಿರುತ್ತವೆ. ಭೂಮಿ, ಆಕಾಶ ಈ ನಡುವೆ ಹೇಗೆ ಪ್ರಕೃತಿಯನ್ನು ಅನುಸರಿಸುತ್ತಾ ಮಾನವನು ಭೂಮಿಯನ್ನು ವಾಸಯೋಗ್ಯವಾಗುವಂತೆ ಬಳಸಿಕೊಂಡನೊ ಅಂತೆಯೇ ಆಕಾಶವನ್ನು ಗಮನಿಸುತ್ತಾ ನಿತ್ಯ ಉದಯಿಸಿ ಅಸ್ತಮಿಸುವ ಸೂರ‍್ಯನನ್ನು ತಲೆಎತ್ತಿ ನೋಡುತ್ತಲೆ ಖಗೋಳ ಜ್ಞಾನವನ್ನು ಪಡೆದ. ಈ ನಿರಂತರ ಅಧ್ಯಯನವೇ ಆದಿಮದಿಂದ ಶಿಷ್ಟದವರೆಗೆ ಸಾಗಿ ಬಂದು ಮನುಕುಲದ ವ್ಯವಸ್ಥಿತ ಜೀವನ ವಿಧಾನ ಸ್ಥಾಯಿಯಾಯಿತು ಎನ್ನಬಹುದು. ಕಳೆ ಏರುವುದು : ದೀಪಾವಳಿಯಿಂದ ಆಚರಣೆಗಳು ಆರಂಭವಾಗುತ್ತದೆ. ಕೋಲ-ನೇಮಗಳು, ಉತ್ಸವ ಮಹೋತ್ಸವಗಳು, ನಾಗ-ದೈವಗಳ ಪೂಜೆಗಳು ವೈಭವದಿಂದ ಪ್ರಾರಂಭವಾಗುತ್ತವೆ. ಆದರೆ ಮಕರ ಸಂಕ್ರಮಣದ ಬಳಿಕ ಮಳೆ ಆರಂಭದ ತನಕ (ಬೇಶದ ೧೦ನೇ ದಿನದ ಪತ್ತನಾಜೆಯವರೆಗೆ) ಈ ಆಚರಣೆಗಳಲ್ಲಿ ಹೆಚ್ಚಿನ ಉತ್ಸಾಹ ಎದ್ದು ಕಾಣುತ್ತದೆ. ಶುಭ್ರ ಆಕಾಶ, ವಾತಾವರಣದ ಪೂರಕ ಪ್ರೋತ್ಸಾಹ, ಕೃಷಿಯ ಧಾವಂತಕ್ಕೆ ಸ್ವಲ್ಪ ವಿರಾಮವೂ ಇರುವುದರಿಂದ ಕರಾವಳಿಯ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಸಂಭ್ರಮಗಳಿಗೆ ಕಳೆ ಏರುವುದೇ ಮಕರಸಂಕ್ರಮಣದಿಂದ. ಮದುವೆ, ನೂತನಗೃಹ ಪ್ರವೇಶ, ದೇವಾಲಯಗಳಲ್ಲಿ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ, ಹೊಸತಾಗಿ ನಿರ್ಮಿಸಲಾಗುವ ದೈವಸ್ಥಾನಗಳ ಒಕ್ಕಲು, ದೈವಸಾನ್ನಿಧ್ಯ ವಿಜೃಂಭಣೆಗೆ ಉತ್ತರಾಯಣ ಪ್ರಶಸ್ತವೆಂಬುದು ಪ್ರಾಚೀನ ಒಡಂಬಡಿಕೆ. ಈಗ ಗಮನಿಸಿದರೆ ದಕ್ಷಿಣಾಯನದಲ್ಲಿ ಒಂದು ಕಾಲಕ್ಕೆ ನಿಷಿದ್ದವಾಗಿದ್ದ ಎಲ್ಲ ಶುಭ ಶೋಭನಾದಿಗಳು, ಸತ್ಕಾರ್ಯಗಳು ನೆರವೇರುತ್ತದೆ. ಮಾನವ ಸ್ವೀಕರಿಸಿದ ವೇಗದ ಜೀವನ ಶೈಲಿಗೆ, ಆಧುನಿಕ ಚಿಂತನೆಗೆ ಎಲ್ಲವೂ ಸಕಾಲ. ಬೇಕು ಎನ್ನಿಸಿದಾಗ ಪಡೆಯುವುದು ಅಥವಾ ಆಚರಿಸುವುದು. ನಿಧಾನವಾದರೆ ಏನೋ ಆದೀತೆಂಬ ಆತಂಕ ಅಥವಾ ಅಂತಹ ಚಿಂತನೆಗಳ ಅಗತ್ಯವೇ ಇಲ್ಲದಿರುವುದು ಇಂದಿನ ಬದುಕು. ಆದರೂ ಉಳಿದು ಬಂದಿವೆ ಕೆಲವು ಆಚರಣೆಗಳು, ನೆನಪುಗಳು, ಪೂರ್ವ ನಿರ್ಧರಿತ ಕಟ್ಟುಪಾಡುಗಳು, ಮಕರ ಸಂಕ್ರಮಣ ಅಂತಹ ಒಂದು ನೆನಪಾಗಿ ಉಳಿದಿದೆ, ಆಚರಿಸಲ್ಪಡುತ್ತಿದೆ. ತೀರ್ಥಸ್ನಾನ , ಸಪ್ತೋತ್ಸವ : ಕದ್ರಿಯ ಗೋ ಮುಖದಲ್ಲಿ ವಿಶೇಷ ತೀರ್ಥಸ್ನಾನಕ್ಕೆ ಮಕರಸಂಕ್ರಮಣ ಪುಣ್ಯಕಾಲ. ನಿತ್ಯೋತ್ಸವದ ದೇವಾಲಯಗಳ ನಗರ ಉಡುಪಿಯಲ್ಲಿ ಸಪ್ತೋತ್ಸವದ ಭವ್ಯ ಅನಾವರಣ. ಉಡುಪಿಯ ರಥಬೀದಿ ನಿಜ ಅರ್ಥದ ನಡೆ ದೇಗುಲಗಳು ಗಂಭೀರವಾಗಿ ಹಾದುಹೋಗುವ ದೃಶ್ಯಾವಳಿಗೆ ಸಾಕ್ಷಿಯಾಗುತ್ತದೆ. ಎಳ್ಳು-ಬೆಲ್ಲ ಬೀರುವ ಸಂಪ್ರದಾಯ ಮೂಲತಃ ತುಳು ನಾಡಿನಲ್ಲಿಲ್ಲ, ಆದರೆ ಈಗ ಈ ಶಿಷ್ಟಾಚಾರವೂ ರೂಢಿಯಲ್ಲಿದೆ. ಮಕರಸಂಕ್ರಮಣದಿಂದ ಮುಂದೆ ಧರೆಗಿಳಿಯುವ ದೇವ ದೇವರುಗಳು, ನೆಲದ ಸತ್ಯಗಳು ಎದ್ದು ಬರುವ ದೈವಲೋಕದ ಅನಾವರಣ, ನಾಗ-ಬ್ರಹ್ಮರ ಅಲೌಕಿಕ ಸೃಷ್ಟಿಗಳಿಗೆಲ್ಲ ಅಮಿತ ಉತ್ಸಾಹ. ಕಾರಣ ಪರಿಸರ; ಮಾವು, ಗೇರು ಮುಂತಾದ ಮರಗಳು ಹೂ ಬಿಡುತ್ತವೆ; ವಾತಾವರಣ ’ಪ್ರಚೋದಕವಾಗಿರುತ್ತದೆ. ಹೊಸ ಹರುಷ ತುಂಬಿರುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಶಬರಿಮಲೆ ಯಾತ್ರೆ ಜನಪ್ರಿಯವಾಗುತ್ತಿದೆ. ಪ್ರತಿ ಮನೆಯಿಂದಲೋ ಒಂದು ಕುಟುಂಬದಿಂದಲೋ ಓರ್ವ ಭಕ್ತ ವ್ರತಸ್ಥನಾಗಿ ’ಸ್ವಾಮಿ’ ಎನಿಸಿ ಅಯ್ಯಪ್ಪ ದರ್ಶನಕ್ಕೆ ಸಾಗಿ ಮಕರ ಸಂಕ್ರಮಣದ ದಿನ ಗೋಚರಿಸುವ ’ಮಕರಜ್ಯೋತಿ’ಯನ್ನು ಕಂಡು, ಧನ್ಯತಾಭಾವದೊಂದಿಗೆ ಮರಳಿ ಬಂದು ಪ್ರಸಾದ ಹಂಚುವ ಧಾರ್ಮಿಕ ಮನೋಭಾವ ಈ ಕಾಲದಲ್ಲಿ ಪ್ರತಿ ಊರಿನಲ್ಲೂ ಕಾಣುತ್ತೇವೆ. ಒಂದು ಸ್ಥಿತ್ಯಂತರ ಉತ್ಕರ್ಷಗಾಮಿಯಾಗಿ ಸಾಗಬೇಕು.ಹಾಗೆ ಮಕರಸಂಕ್ರಮಣ ಸ್ವೀಕರಿಸಲ್ಪಡುತ್ತಿದೆ. ಬಡಕಾಯಿ ಪೋಪಿನಿ : ತುಳುವರಿಗೆ ಈ ಪರ್ವಕಾಲ ಪ್ರಾಕೃತಿಕ ಸ್ಥಿತ್ಯಂತರದ ಜ್ಞಾನವಿದೆ ಎಂಬ ನೆನಪಾಗಿ ಮಾತ್ರ ಇರುತ್ತದೆ. ಸಂಭ್ರಮದ ಆಚರಣೆಗಳಲ್ಲಿ ಸುಮಾರು ಮೂಲ್ಕಿ ಹೊಳೆಯವರೆಗೆ ರೂಢಿಯಲ್ಲಿರುವ ಒಂದು ವಿಧಿಯಾಚರಣೆ ಮಾರಣಕಟ್ಟೆಗೆ ಹೋಗುವುದು ಅಥವಾ ’ಬಡಕಾಯಿ ಪೋಪಿನಿ’. ಅಲ್ಲಿ ಹೂ ಒಪ್ಪಿಸುವುದು, ಹರಿವಾಣ ನೈವೇದ್ಯ ಸಮರ್ಪಿಸುವುದು. ಪ್ರಸಾದ ತಂದು ಮನೆಯಲ್ಲಿ ’ಗಡಿ ಆಹಾರ’ ಕೊಡುವ ಒಂದು ವಿಶೇಷ ಪದ್ಧತಿ ರೂಢಿಯಲ್ಲಿದೆ. ’ಎಡೆಬಡಿಸಿ’ ಇಟ್ಟು ಕುಟುಂಬಸ್ಥರು, ನೆಂಟರಿಷ್ಟರು ಸೇರಿ ನಡೆಯುವ ಈ ಆಚರಣೆ ಇಂದಿಗೂ ಶ್ರದ್ಧೆ ಭಕ್ತಿಯಿಂದ ವಾರ್ಷಿಕವೆಂಬಂತೆ ನೆರವೇರುತ್ತದೆ. ಇದಕ್ಕೆ ಮಕರ ಸಂಕ್ರಮಣ ಪ್ರಶಸ್ತಕಾಲ. ಮಾರಣಕಟ್ಟೆಯ ಹೆಸರು ಹೇಳಿ ಯಾರೂ ಶಾಪ ಹಾಕಲಾರರು. ವಾಕ್‌ದೋಷ ನಿವಾರಣೆ ಈ ಸಂದರ್ಭದಲ್ಲಿ ಮಾಡಿಸಿಕೊಳ್ಳುವ ಪರಿಪಾಠವಿದೆ. ಲೇಖನ :ಕೆ.ಎಲ್.ಕುಂಡಂತಾಯ

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

Thumbnail
Posted On: 13 Jan 2022, 06:29 PM

ಶಿರ್ವ: ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ ಸಂಸ್ಥೆ(ಗ್ಲೋಟಚ್ ಟೆಕ್ನಾಲಜೀಸ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್),ಬಿಇ(ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ(ಸಿಎಸ್),ಎಂಎಸ್ಸಿ (ಸಿಎಸ್), ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ,ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ವತಿಯಿಂದ ಜನವರಿ 13 ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು. ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆಯಲು ಹಾಗೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ದಿಯ ಸಿಸ್ಟಮ್ಸ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಇಂದು ಸಂವಹನ ಕೌಶಲ್ಯಗಳ ಮಹತ್ವವನ್ನು ಅಭ್ಯರ್ಥಿಗಳು ಅರಿತುಕೊಂಡು ಇಂತಹ ಸಂದರ್ಶನಕ್ಕೆ ಭಾಗವಹಿಸಿ ಉದ್ಯೋಗ ಪಡೆಯಬೇಕು ಎಂದು ಶುಭ ಹಾರೈಸಿದರು. ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು - ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಸಂದರ್ಶನಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬೇಕಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಶ್ರೀ ಲೆಫ್ಟಿನೆಂಟ್ ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ ಸಂಸ್ಥೆಯ ಸೀನಿಯರ್ ಅನಲಿಸ್ಟ್ ಎಚ್.ಆರ್ ಶೀತಲ್ ಭಂಡಾರಿ, ಅನಲಿಸ್ಟ್ ಎಚ್.ಆರ್ ಸುರೇಶ್, ತನುಜ ಎನ್ ಸುವರ್ಣ, ಉಪನ್ಯಾಸಕರಾದ ಸುಷ್ಮಾ, ಪ್ರಕಾಶ್ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ್, ದೀಕ್ಷಾ ಪಿಜಿ, ದ್ಯುತಿಶ್ರೀ, ಹಾರ್ದಿಕ್ ಸಾಲಿಯಾನ್, ಸನತ್ ಕುಮಾರ್ ಶೆಟ್ಟಿ ಸಹಕರಿಸಿದರು. ದೀಪಿಕಾ ಮತ್ತು ಬಳಗ ಪ್ರಾರ್ಥಿಸಿ, ಪ್ರಿಯಾಂಕ ಸ್ವಾಗತಿಸಿ, ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ರಮಿಜಿಯಾ ವಂದಿಸಿದರು.

ವರುಣ ಆಳ್ವರನ್ನು ಅಭಿನಂದಿಸಿದ ಕಮಿಷನರ್

Thumbnail
Posted On: 13 Jan 2022, 05:05 PM

ಮಂಗಳೂರು : ಮೊಬೈಲ್ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರುಣ ಆಳ್ವ ARSI ಇವರು ಬೆನ್ನಟ್ಟಿ, ಆರೋಪಿಗಳನ್ನು ಪತ್ತೆ ಹಚ್ಚಿ ಅವರಲ್ಲಿದ್ದ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಶ್ಲಾಘನೀಯ ಕರ್ತವ್ಯವನ್ನು ನಿರ್ವಹಿಸಿರುವ ಹಿನ್ನೆಲೆಯಲ್ಲಿ ಪೋಲಿಸ್ ಕಮಿಷನರ್ ಶಶಿಕುಮಾರ್ ಅಭಿನಂದಿಸಿದರು. ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳ್ಳನನ್ನು ಸೀನಿಮಿಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಮಂಗಳೂರು ಪೊಲೀಸ್

Thumbnail
Posted On: 13 Jan 2022, 12:43 PM

ದಿನಾಂಕ 12/01/2022 ರಂದು ಮಧ್ಯಾಹ್ನದ ಸಮಯದಲ್ಲಿ ನೆಹರೂ ಮೈದಾನದ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಬೊಬ್ಬೆ ಹೊಡೆದು ಓಡುತ್ತಾ ಪರಿಸರದ ಸಾರ್ವಜನಿಕರಿಗೆ ಆತಂಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾ ಪರಾರಿಯಾಗಲು ಯತ್ನಿಸಿದಾಗ ಪೊಲೀಸ್ ಕಮಿಷನರ್ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಬಿಹಾರಿ ಮೂಲದ ವ್ಯಕ್ತಿಯ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಮೂವರು ವ್ಯಕ್ತಿಗಳು ದರೋಡೆ ಮಾಡಿ ಪರಾರಿಯಾಗಿರುತ್ತಾರೆ ಎಂದು ತಿಳಿಸಿದಾಗ ಅಲ್ಲೇ ಇದ್ದ ಆರೋಪಿ ಶಮಂತ್‌ (20 ವರ್ಷ) ನನ್ನು ವಶಕ್ಕೆ ಪಡೆದು, ಅವನ ಮುಖಾಂತರ ಆತನ ಇತರ ಸಹಚರರ ಮಾಹಿತಿ ಪಡೆದು, ತಕ್ಷಣವೇ ರೈಲ್ವೇ ನಿಲ್ದಾಣ ಹಾಗೂ ಹಂಪನಕಟ್ಟೆ ಪರಿಸರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇನ್ನೊಬ್ಬ ಆರೋಪಿ ಹರೀಶ್ ಪೂಜಾರಿ (32 ವರ್ಷ) ನನ್ನು ವಶಕ್ಕೆ ಪಡೆಯಲಾಯಿತು. ಆತನ ಜೊತೆ ಇದ್ದ ಇನ್ನೊಬ್ಬ ಆರೋಪಿ ರಾಜೇಶ್ ಎಂಬವನು ಪರಾರಿಯಾಗಿರುತ್ತಾನೆ. ಪರಾರಿಯಾಗಿರುವ ಆರೋಪಿಯ ಬಗ್ಗೆ ಮಾಹಿತಿ ಲಭ್ಯವಾಗಿರುತ್ತದೆ. ದರೋಡೆ ನಡೆಸಿದ ಸೊತ್ತುಗಳಾದ ಸ್ಯಾಮ್‌ಸಂಗ್ ಮೊಬೈಲ್ ಫೋನನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿರುತ್ತದೆ. ಆರೋಪಿಗಳು 1) ಹರೀಶ್ ಪೂಜಾರಿ (32 ವರ್ಷ), ಪಾಲನೆ, ನೀರುಮಾರ್ಗ, ಕುಡುಪು, ಮಂಗಳೂರು. 2) ಶಮಂತ್‌ (20 ವರ್ಷ), ಅತ್ತಾವರ, ಬಾಬುಗುಡ್ಡೆ, ಮಂಗಳೂರು.

ಹೊಸಮಾರಿಗುಡಿ ನವನಿರ್ಮಾಣ : ಆರ್ಥಿಕ ಕ್ರೋಡಿಕರಣಕ್ಕೆ ಆರ್ಥಿಕ ಸಮಿತಿಯ ಸಮಾಲೋಚನಾ ಸಭೆ

Thumbnail
Posted On: 12 Jan 2022, 10:11 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಆರ್ಥಿಕ ಸಮಿತಿಯ ಪದಾಧಿಕಾರಿಗಳ ಮತ್ತು ಒಂಬತ್ತು ತಂಡಗಳ ಸಂಚಾಲಕರ ಸಭೆಯು ಜನವರಿ 11ರಂದು ಜರುಗಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿಯವರು ದೇವಿಯ ಅಭಯ ವಾಕ್ಯದಂತೆ ಪ್ರತಿಯೊಬ್ಬರ ಮನೆ- ಮನಗಳಿಗೆ ಸುದ್ದಿ ತಲುಪಿಸುವುದು ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವೆಲ್ಲರೂ ಐಕ್ಯ ಮತದಿಂದ ಪ್ರತಿಯೊಬ್ಬ ಭಕ್ತರನ್ನು ಸಂಪರ್ಕಿಸಿ ಸುದ್ದಿ ತಲುಪಿಸಿ ದೇಗುಲದ ನವನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ಗೌರವಾಧ್ಯಕ್ಷರಾದ ಮನೋಹರ್ ಶೆಟ್ಟಿ, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕೊಲ್ಯ, ಸಂದೀಪ್ ಶೆಟ್ಟಿ ಮುಂಬೈ (ಶಿರ್ವ), ರವಿರಾಜ್ ಶೆಟ್ಟಿ ಮತ್ತು ಒಂಬತ್ತು ತಂಡಗಳ ಮುಖ್ಯ ಸಂಚಾಲಕರು ಹಾಗೂ ಸಂಚಾಲಕರುಗಳು ಉಪಸ್ಥಿತರಿದ್ದರು.

ಉಡುಪಿ : ರಾಷ್ಟ್ರೀಯ ಯುವ ದಿನಾಚರಣೆ

Thumbnail
Posted On: 12 Jan 2022, 08:59 PM

ಉಡುಪಿ :- ಸ್ವಾಮಿ ವಿವೇಕಾನಂದರ ಆದಶ೯ಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ .ಮನೋಬಲ, ದೇಹಬಲ ಅದೇ ರೀತಿ ಶಿಸ್ತು ಅವಕಾಶ ಹಾಗೂ ಸೇವಾ ಮನೋಭಾವ ಗಳ ಬಗ್ಗೆ ಸ್ವಾಮೀಜಿಯವರು ನಮಗೆ ಹೇಳಿದ್ದಾರೆ ಅದನ್ನು ಅಳವಡಿಸಿಕೊಳ್ಳಿ ಎಂದು ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಡಾII ವಿಜಯ್ ನೆಗಳೂರು ಹೇಳಿದರು. ಅವರು ಜನವರಿ 12 ರಂದು ಕ್ರಿಶ್ಚಿಯನ್ ಪ.ಪೂ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದ ಜಯಂತಿ ಕಾಯ೯ಕ್ರಮದಲ್ಲಿ ಮಾತನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ವಹಿಸಿದ್ದರು. ಈ ಸಂದಭ೯ದಲ್ಲಿ ವಿದ್ಯಾಥಿ೯ಗಳಿಗೆ ಭಾಷಣ ಸ್ಪರ್ಧೆ ನಡೆಯಿತು. ವೇದಿಕೆಯಲ್ಲಿ ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕವಾ೯ಲು, ಕಿರಣ್ ಭಟ್, ಸಂದೀಪ್ ಕುಮಾರ್, ವೀಕ್ಷಿತ್ ಪೂಜಾರಿ, ಡಾII ಸಮದುಡು ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ನಾಗರಾಜ್ ನಿರೂಪಿಸಿ, ವಂದಿಸಿದರು.

ಶಿರ್ವ : ಎಮ್ ಎಸ್ ಆರ್ ಎಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

Thumbnail
Posted On: 12 Jan 2022, 08:52 PM

ಶಿರ್ವ : ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಇಲ್ಲಿಯ ವಿದ್ಯಾರ್ಥಿ ಸಂಘವನ್ನು ಉಡುಪಿ ಜಿಲ್ಲೆ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ, ಕಾಪು ಉದ್ಘಾಟಿಸಿ, ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಯನಾ ಎಂ.ಪಕ್ಕಳ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಹೇಮಲತಾ ಶೆಟ್ಟಿ, ವಿದ್ಯಾರ್ಥಿಗಳಾದ ಗಣೇಶ್, ಆಕಾಶ್ ಶೆಟ್ಟಿ, ವಿಜಯಲಕ್ಷ್ಮಿ, ಆಡಳಿತ ಮಂಡಳಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

25 ಸಾವಿರ ಮೌಲ್ಯದ ಹಸುವೊಂದನ್ನು ಯಶೋಧ ಆಚಾರ್ಯರಿಗೆ ನೀಡಿದ ದಾನಿಗಳು

Thumbnail
Posted On: 12 Jan 2022, 07:47 PM

ಕಾರ್ಕಳ : ಕಾರ್ಕಳ ಮಿಯಾರು ಕಜೆ ಎಂಬಲ್ಲಿಯ ಯಶೋಧ ಆಚಾರ್ಯ ಕುಟುಂಬಕ್ಕೆ ಸೇರಿದ 16 ಗೋವುಗಳನ್ನು ಒಂದುವರೆ ವರುಷದ ಅವಧಿಯಲ್ಲಿ ಗೋ ಕಳ್ಳರು ಕದ್ದೊಯ್ದಿದ್ದು, ಸಂಕಷ್ಟದಲ್ಲಿರುವ ಮಹಿಳೆಯ ಕುಟುಂಬಕ್ಕೆ ಸ್ಪಂದಿಸಿ ಹಲವರು ಗೋವು,ಮೇವುಗಳನ್ನು ನೀಡಿ ಸ್ಪಂದಿಸುತ್ತಿದ್ದಾರೆ. ಗುರುವಾರ ಕಾಪು ತಾಲೂಕು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಆಚಾರ್ಯ ಓಂ ಸಾಯಿ ಪಾಂಗಾಳ ಅವರು ಸುಮಾರು 25 ಸಾವಿರ ಕ್ರಯದ ಹಸುವೊಂದನ್ನು ದಾನವಾಗಿ ನೀಡಿದರು. ಜತೆಗೆ ಮೇವು, ಹಿಂಡಿಗಳನ್ನು ನೀಡಿ ಸಹಕರಿಸಿದರು. ಗೋವುಗಳನ್ನೇ ಆಧಾರವಾಗಿರಿಸಿಕೊಂಡು ಬದುಕು ಕಟ್ಟಿಕೊಂಡ ಬಡ ಮಹಿಳೆ ಗೋವುಗಳನ್ನು ಕಳೆದುಕೊಂಡು ತೀರಾ ಸಂಕಷ್ಟದಲ್ಲಿದೆ. ಇಂತಹ ಕುಟುಂಬಕ್ಕೆ ನೆರವು ನೀಡುವಲ್ಲಿ ನಾವೆಲ್ಲರು ಕೈ ಜೋಡಿಸಬೇಕಿದೆ ಎಂದು ಹೇಳಿ ಹಾರೈಸಿದರು. ಈ ಸಂದರ್ಭ ಪ್ರವೀಣ್ ಶೆಟ್ಟಿ ಕಾರ್ಕಳ, ರಾಘವೇಂದ್ರ ಅಮೀನ್, ಅಜಿತ್ ಮೆಂಡನ್, ಪ್ರಸಾದ್ ಪೂಜಾರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು ಮೊದಲಾದವರು ಉಪಸ್ಥಿತರಿದ್ದರು.