ಕಲ್ಯಾಣಪುರ ರೋಟರಿ ಕ್ಲಬ್ ಪ್ರಾಯೋಜಿತ ರೊಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ ಸಮಾರಂಭ
ಉಡುಪಿ : ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಹೈಸ್ಕೂಲು ಕೆಮ್ಮಣ್ಣು ಇಲ್ಲಿ ನ ರೊಟರಾಕ್ಟ್ ಹಾಗೂ ಇಂಟರಾಕ್ಟ್ ಕ್ಲಬ್ ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು. ಈ ಎರಡು ಸಂಸ್ಥೆಗಳ ನೂತನ ಅಧ್ಯಕ್ಷರುಗಳಾದ ಆಕಾಶ್ ಕೋಟ್ಯಾನ್, ತಸ್ರೀನ್ ಹಾಗೂ ಕಾರ್ಯದರ್ಶಿಗಳಾದ ಶಾಂತ, ಪ್ರಜ್ಞಾ ರವರುಗಳಿಗೆ ರೋಟರಿ ಕ್ಲಬ್ಬಿನ ಅಧ್ಯಕರಾದ ಶಂಭು ಶಂಕರ್ ರವರು ಪದಪ್ರದಾನ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿಯವರಾದ ಅಲೆನ್ ಲೂವಿಸ್ ರವರು ರೋಟರಿ ಸಂಸ್ಥೆಯ ಸೇವೆ ಮತ್ತು ಯೋಜನೆಗಳ ಕುರಿತು ಮಾತನಾಡಿ, ರೊಟರಾಕ್ಟ್ ಮತ್ತು ಇಂಟರಾಕ್ಟ್ ಸಂಸ್ಥೆಯ ಧ್ಯೇಯ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಸದಸ್ಯರ ಸಕ್ರೀಯ ಪಾಲ್ಗೊಳ್ಳುವಿಕೆಯ ಅವಕಾಶ ಮತ್ತು ಪ್ರಯೋಜನಗಳ ಬಗ್ಗೆ ತಿಳಿ ಹೇಳಿ ನೂತನ ಪದಾಧಿಕಾರಿಗಳನ್ನು ಹಾಗು ಅವರ ತಂಡವನ್ನು ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಜೇವಿಯರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು. ಮತ್ತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಾಮುಖ್ಯತೆ ಕುರಿತು ತಿಳಿಸಿದರು.
ಕಾರ್ಯದರ್ಶಿಗಳಾದ ಪ್ರಕಾಶ್, ರೊಟರಾಕ್ಟ್ ಸಭಾಪತಿ ವಿಜಯ್ ಮಯ್ಯಾಡಿ, ರಾಮ ಪೂಜಾರಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರು ರೊಟರಾಕ್ಟ್ ಸಂಯೋಜಕರೂ ಆದ ವಿನಯ ದೇವಾಡಿಗ ಅವರು ಸಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
