Updated News From Kaup
ಓಮಾನ್ ಲ್ಲಿ ರಸ್ತೆ ಅಪಘಾತ : ಕಾಪುವಿನ ಕಳತ್ತೂರು ನಿವಾಸಿ ಚೇತನ್ ಸಾವು
Posted On: 10 Feb 2026, 07:33 PM
ಕಾಪು : ದುಡಿಮೆ ಅರಸಿ ಗಲ್ಪ್ ರಾಷ್ಟ್ರದ ಓಮನ್ ನಲ್ಲಿದ್ದ ಕಳತ್ತೂರಿನ ಚೇತನ್ ಕುಲಾಲ್ ಭೀಕರ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ.
ಎರಡು ದಿನದಲ್ಲಿ ಚೇತನ್ ಪಾರ್ಥಿವ ಶರೀರ ಕಳತ್ತೂರು ಮನೆಗೆ ಬರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಚೇತನ್ ಕುಲಾಲ್ ಎಳವೆಯಲ್ಲಿಯೇ ತಾಯಿಯನ್ನು ಕಳೆದು ಕೊಂಡು ದೊಡ್ಡಮ್ಮನ ಆಸರೆಯಲ್ಲಿ ಬೆಳೆದವರು. ಸಹೋದರಿ ಮತ್ತು ಕುಟುಂಬವರ್ಗ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಉಡುಪಿ : ಜೇಸಿ ವಲಯ 15 ಘಟಕಾಧಿಕಾರಿಗಳ ತರಬೇತಿ ಕಮ್ಮಟ ಸಂಪನ್ನ
Posted On: 10 Feb 2026, 07:30 PM
ಉಡುಪಿ : ಜೆಸಿಐ ಭಾರತ ವಲಯ ಹದಿನೈದು ಇದರ ವತಿಯಿಂದ ಜೆಸಿಐ ಉಡುಪಿ ಸಿಟಿ ಇದರ ಆಥಿತ್ಯದಲ್ಲಿ ಘಟಕಾಧಿಕಾರಿಗಳ ತರಬೇತಿ ಕಮ್ಮಟ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಫೆ.7 ಮತ್ತು 8ರಂದು 2 ದಿನಗಳ ಕಾಲ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಲಯ್ಯಾಧ್ಯಕ್ಷ ಸಂತೋಷ್ ಶೆಟ್ಟಿ, ಜೆಸಿ ಸಂಸ್ಥೆಯು ತರಬೇತಿಯ ಮೂಲಕ ವ್ಯಕ್ತಿತ್ವದಲ್ಲಿ ಬದಲಾವಣೆ ತರುವಲ್ಲಿ ಅಪೂರ್ವವಾವಾಗಿ ಕಾರ್ಯನಿರ್ವಹಿಸುತ್ತಿದೆ. ಜಗತ್ತಿನಲ್ಲಿ ವಿವಿಧ ಸಂಸ್ಥೆಗಳು ಇದ್ದರೂ ವ್ಯಕ್ತಿತ್ವ ವಿಕಸನಕ್ಕಾಗಿ ಇರುವ ಏಕೈಕ ಸಂಸ್ಥೆ ಜೆ ಸಿ ಐ. ಘಟಕ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಈ ತರಬೇತಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಲಯ ಆಡಳಿತ ವಿಭಾಗದ ನಿರ್ದೇಶಕ ಸುಹಾಸ್ ಮರಿಕೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ತರಬೇತುದಾರರಾದ ಅಂತರಾಷ್ಟ್ರೀಯ ತರಬೇತಿದಾರ ಪ್ರಮೋದ್ ಕುಮಾರ್, ಸಹ ತರಬೇತಿದಾರರಾದ ರಾಕೇಶ್ ಹೊಸಬೆಟ್ಟು, ಸುಧಾಕರ್ ಕಾರ್ಕಳ, ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ, ನಿಕಟ ಪೂರ್ವ ವಲಯ ಅಧ್ಯಕ್ಷ ಅಭಿಲಾಶ್, ವಲಯ ಕಾರ್ಯದರ್ಶಿ ಪ್ರಶಾಂತ್, ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಕಾರ್ಯಕ್ರಮ ನಿರ್ದೇಶಕ ಕಿರಣ್ ಭಟ್ ಮುಂತಾದವರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ತರಬೇತಿಯಲ್ಲಿ ವಿವಿಧ ಘಟಕದ ಸುಮಾರು 200 ಘಟಕ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಯಕ್ಷಗಾನ: ಸಾಂಸ್ಕೃತಿಕ ಪಲ್ಲಟ ಮತ್ತು ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ಕಲೆ
Posted On: 10 Feb 2026, 07:25 PM
ಯಕ್ಷಗಾನವು ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರಕಲೆ ಎಂಬ ನಾಲ್ಕು ಪ್ರಧಾನ ಕಲಾಮಾಧ್ಯಮಗಳ ಸಮನ್ವಯದಿಂದ ರೂಪುಗೊಂಡಿರುವ ಒಂದು ಅಪರೂಪದ ಸಮ್ಮಿಶ್ರ ಕಲೆ. ಇದರಲ್ಲಿ ಪ್ರತಿಯೊಂದು ಅಂಶವೂ ಪರಸ್ಪರ ಅವಲಂಬಿತವಾಗಿದ್ದು, ಒಂದು ಅಂಶ ಕುಂದಿದರೂ ಸಂಪೂರ್ಣ ಕಲೆಯ ಸೌಂದರ್ಯ, ಮೂಲತತ್ವ ಮತ್ತು ಗುಣಮಟ್ಟಕ್ಕೆ ಧಕ್ಕೆ ಉಂಟಾಗುತ್ತದೆ. ಯಕ್ಷಗಾನ ಕೇವಲ ಮನರಂಜನೆಗಾಗಿ ಹುಟ್ಟಿದ ಕಲೆಯಲ್ಲ; ಅದು ಭಕ್ತಿ, ನೀತಿ ಮತ್ತು ಧರ್ಮಬೋಧನೆಯ ಜೀವಂತ ವೇದಿಕೆಯಾಗಿದೆ.
ಓರ್ವ ಅನಿವಾಸಿ ಭಾರತೀಯನಾಗಿ, ಹವ್ಯಾಸಿ ಮೇಳಗಳ ಯಕ್ಷಗಾನದ ತುಣುಕುಗಳನ್ನು ಆಗಾಗ ಯೂಟ್ಯೂಬ್ನಲ್ಲಿ ನೋಡುತ್ತಿದ್ದರೂ, ಇತ್ತೀಚಿಗೆ ಊರಿಗೆ ಹೋದಾಗ ಹಲವು ಹರಕೆಯ ಯಕ್ಷಗಾನ ಪ್ರಸಂಗಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಒಟ್ಟಾರೆಯಾಗಿ, ನನಗೆ ಬಾಲ್ಯದಲ್ಲಿ ನೋಡಿದ್ದ ಯಕ್ಷಗಾನಕ್ಕೂ, ಈಗಿನ ಯಕ್ಷಗಾನಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬಂದು ನಿರಾಸೆಯಾಯಿತು.
ಒಂದು ಕಾಲದಲ್ಲಿ ರಾತ್ರಿಯಿಡೀ ಜರುಗುವ ಜಗತ್ತಿನ ಏಕೈಕ ಕಲೆಯೆಂದು ಹೆಗ್ಗಳಿಕೆ ಗಳಿಸಿದ್ದ ಕರಾವಳಿಯ ಈ ಪುರಾತನ ಕಲೆ, ಇತ್ತೀಚಿನ ಪರ್ವದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಸಂದೇಹ ಸವಾಲಾಗುತ್ತಿದೆ. ಹಿಂದೆ ಅತಿರಥ-ಮಹಾರಥಿ ಪಾತ್ರಧಾರಿಗಳು ತಮ್ಮ ಅಪೂರ್ವ ಅಭಿನಯ,ತರ್ಕಬದ್ಧ ವಾಗ್ವದ ಹಾಗೂ ಚೆಂಡೆಯ ಅಬ್ಬರದೊಂದಿಗೆ ಪ್ರೇಕ್ಷಕರನ್ನು ಯಕ್ಷಲೋಕದ ಮಾಯಾಲೋಕದಲ್ಲಿ ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಆದರೆ ಇತ್ತೀಚಿನ ಪ್ರದರ್ಶನಗಳಲ್ಲಿ ಕಲೆಗಿಂತ ವ್ಯಾವಹಾರಿಕತೆ ಮೇಲುಗೈ ಸಾಧಿಸುತ್ತಿದೆ. ರಂಗಸ್ಥಳದ ಮೇಲೆ ಕಲಾವಿದ ತೋರಬೇಕಾದ ಗಾಂಭೀರ್ಯದ ಬದಲು ನೀರಸತನ ಮತ್ತು ಆತುರ ಎದ್ದು ಕಾಣುತ್ತಿದೆ.
ಕರಾವಳಿಯ ಈ ಜೀವಂತ ಕಲೆಗೆ ಹೊಸ ಮೇಳಗಳು ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹವಾದರೂ, ಮುಖ್ಯವಾಗಿ ಯುವ ಕಲಾವಿದರಲ್ಲಿ ಅಭಿನಯ, ನೃತ್ಯ ಮತ್ತು ಸಂಭಾಷಣೆಗಳ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಹಾಡುಗಾರಿಕೆಯಲ್ಲಿ ಹಾಗೂ ವೇಷಭೂಷಣಗಳಲ್ಲಿ ಸಕಾರಾತ್ಮಕ ವಿಭಿನ್ನತೆ ಬದಲಾವಣೆಗಳಾಗುತ್ತಿದ್ದರೂ, ಮಾತುಗಾರಿಕೆ, ಸಂಭಾಷಣೆಯ ಶುದ್ಧತೆ ಮತ್ತು ಮುಖವರ್ಣಿಕೆಯಲ್ಲಿ ಕಳಪೆತನ ಕಾಣಿಸುತ್ತಿದೆ. ಇತ್ತೀಚಿಗೆ ಸಮಾಜದಲ್ಲಿ ಧಾರ್ಮಿಕ ಅರಿವು ಮೂಡಿಸುವುದಕ್ಕಿಂತ, ತೋರಿಕೆಯ ಆಡಂಬರದ ಆಚರಣೆಗಳ ವಾಡಿಕೆ ಹೆಚ್ಚಾಗುತ್ತಿದೆ. ಸ್ಥಳೀಯ ನಂಬಿಕೆಯಾದ ಭೂತಾರಾಧನೆಗೆ ಪ್ರಚಾರದ ಅಗತ್ಯವಿಲ್ಲದಿದ್ದರೂ, ಸಿನಿಮೀಯ ಪ್ರಭಾವದ ವ್ಯಾವಹಾರಿಕ ದೃಷ್ಟಿಯಿಂದ ದುರುಪಯೋಗಕ್ಕೊಳಗಾಗುವಂತೆ ಯಕ್ಷಗಾನಕ್ಕೂ ಇಂತಹ ಪರಿಸ್ಥಿತಿ ಒದಗಬಾರದು.
ಅಪಮೌಲ್ಯಗೊಳ್ಳುತ್ತಿರುವ ಪೌರಾಣಿಕ ಹಿನ್ನೆಲೆ: ಇಂದಿನ ಪ್ರದರ್ಶನಗಳಲ್ಲಿ ದೇವತೆಗಳನ್ನು ಅಥವಾ ಧಾರ್ಮಿಕ ಮೌಲ್ಯಗಳನ್ನು ಚಿತ್ರಿಸುವ ರೀತಿ ಆತಂಕಕಾರಿಯಾಗಿದೆ. ವಿಶೇಷವಾಗಿ ರಾಕ್ಷಸ ಪಾತ್ರಗಳ ಮೂಲಕ ದೇವತೆಗಳನ್ನು, ಬ್ರಾಹ್ಮಣರನ್ನು ಹಾಗೂ ಸನಾತನ ಧರ್ಮವನ್ನೇ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಸಂಭಾಷಣೆಗಳಲ್ಲಿ ಇತರ ಪಾತ್ರಧಾರಿಗಳ ಸಂಭಾವನೆ, ವೃತ್ತಿ ಅಥವಾ ಸಮುದಾಯಗಳ ನಿಂದನೆಯನ್ನು ಕೇವಲ ಅಗ್ಗದ ಶಿಳ್ಳೆಗಾಗಿ ತುರುಕಲಾಗುತ್ತಿದೆ. ಪೌರಾಣಿಕವಾಗಿ ರಾಕ್ಷಸರು ಧರ್ಮವಿರೋಧಿಗಳಾದರೂ, ಅವರು ಶಿವಭಕ್ತರಾಗಿರುತ್ತಿದ್ದರು ಮತ್ತು ಅವರ ತರ್ಕವು ತಾತ್ವಿಕವಾಗಿರುತ್ತಿತ್ತು. ಆದರೆ ಈಗ ತಾತ್ವಿಕತೆ ಕಣ್ಮರೆಯಾಗಿ, ಕೇವಲ ಅಗ್ಗದ ಹಾಸ್ಯ ಹಾಗೂ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಸಂಭಾಷಣೆಗಳು ಇಳಿದಿವೆ. ಸತ್ಯಯುಗದ ಕಥೆಗಳಲ್ಲಿ ತ್ರೇತಾಯುಗದ ಘಟನೆಗಳನ್ನು ಬೆರೆಸುವುದು, ಪುರಾಣಗಳ ಮೂಲ ಜ್ಞಾನವಿಲ್ಲದೆ ಮಾತನಾಡುವುದು ಕಲಾವಿದರ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ನಿರ್ಬಂಧ ಮತ್ತು ಗುಣಮಟ್ಟದ ಕುಸಿತ: ಧ್ವನಿವರ್ಧಕ ಬಳಕೆಯ ಮೇಲಿನ ನಿರ್ಬಂಧಗಳಿಂದಾಗಿ ಯಕ್ಷಗಾನದ ಅವಧಿಯನ್ನು ಕಡಿತಗೊಳಿಸಲಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಬಯಲಾಟಗಳು ಈಗ ಕಾಲಮಿತಿಯ ಪ್ರದರ್ಶನಗಳಾಗಿವೆ. ಅನ್ಯರ ಧ್ವನಿವರ್ಧಕದ ಅಬ್ಬರವನ್ನು ತಡೆಯಲು ಹೋಗಿ, ನಮ್ಮ ಸಂಸ್ಕೃತಿಯ ಭಾಗವಾದ ಯಕ್ಷಗಾನವನ್ನೇ ಅರ್ಧಗೊಳಿಸಿರುವುದು ಬೇಸರದ ವಿಷಯ. ಆದರೂ, ಕಳಪೆ ಗುಣಮಟ್ಟದ ಸಂಭಾಷಣೆ ಮತ್ತು ಅಸಂಬದ್ಧ ಹಾಸ್ಯವನ್ನು ರಾತ್ರಿಯಿಡೀ ಸಹಿಸಿಕೊಳ್ಳುವುದಕ್ಕಿಂತ ಸಂಕ್ಷಿಪ್ತ ಪ್ರದರ್ಶನವೇ ಲೇಸು ಎಂಬ ಮನಸ್ಥಿತಿಗೆ ಪ್ರೇಕ್ಷಕರು ಬರುತ್ತಿದ್ದಾರೆ. ಸಂಪೂರ್ಣ ಯಕ್ಷಗಾನವನ್ನು ನೋಡಿ ಧನ್ಯತಾ ಭಾವದಿಂದ ಮರಳುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಲೆ, ಧರ್ಮ ಹಾಗೂ ನಂಬಿಕೆಯ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಕಲಾವಿದರ ಕಡೆಗಣನೆ ಮತ್ತು ಸರ್ಕಾರದ ನಿರ್ಲಕ್ಷ್ಯ: ಸಮಾಜದ ಸ್ವಾಸ್ಥ್ಯ ಕೆಡಿಸುವ ಧಾರಾವಾಹಿ ಅಥವಾ ಚಲನಚಿತ್ರ ಕಲಾವಿದರಿಗೆ ಸಿಗುವ ಸಂಭಾವನೆ ಮತ್ತು ಗೌರವ, ಅಪಾರ ವಾಕ್ಚತುರ್ಯ ಹೊಂದಿರುವ ಯಕ್ಷಗಾನ ಕಲಾವಿದರಿಗೆ ಸಿಗುತ್ತಿಲ್ಲ. ಬಹುತೇಕ ಮೇಳಗಳು ದೇವಸ್ಥಾನಗಳಿಗೆ ಸೇರಿವೆ. ಭಕ್ತರು ನೀಡುವ ಕಾಣಿಕೆ ಸರ್ಕಾರಕ್ಕೆ ಸೇರುತ್ತಿದೆಯೇ ಹೊರತು, ಅದು ಭಕ್ತರ ಸವಲತ್ತಿಗಾಗಲಿ ಅಥವಾ ಕಲಾವಿದರ ಶ್ರೇಯೋಭಿವೃದ್ಧಿಗಾಗಲಿ ಬಳಕೆಯಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಿಗುವಂತೆ ಕಲಾವಿದರಿಗೂ ಗೌರವಯುತ ಸಂಭಾವನೆ, ಪಿಂಚಣಿ, ಜೀವವಿಮೆ ಮತ್ತು ಆರೋಗ್ಯ ಸವಲತ್ತುಗಳು ಸಿಗುವಂತಾಗಬೇಕು. ಇದರಿಂದ ಹೊಸ ತಲೆಮಾರಿನ ಪ್ರತಿಭಾವಂತರು ಯಕ್ಷಗಾನದತ್ತ ಒಲವು ತೋರಿ, ಶಿಸ್ತುಬದ್ಧವಾಗಿ ಸಾಂಪ್ರದಾಯಿಕತೆಯನ್ನು ಕಲಿತು ಕಲೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.
ಯಕ್ಷಗಾನ ಉಳಿಯಬೇಕೆಂದರೆ ಅದು ಕೇವಲ ವೇದಿಕೆಯ ಮೇಲಲ್ಲ, ಮೌಲ್ಯಗಳಲ್ಲಿ ಉಳಿಯಬೇಕು. ಧರ್ಮವನ್ನು ಪ್ರಶ್ನಿಸುವುದು ತಪ್ಪಲ್ಲ, ಆದರೆ ಯಾರನ್ನೂ ಅವಮಾನಿಸುವುದು ಕ್ಷಮಾರ್ಹವಲ್ಲ. ಮತ್ತು ಅದನ್ನು ಕೇವಲ ವ್ಯಾಪಾರಕ್ಕಾಗಿ ಬಳಸುವುದು ಯಕ್ಷಗಾನದ ಹಾಗೂ ಧರ್ಮದ ಅವನತಿಗೆ ನಾಂದಿಯಾಗುತ್ತದೆ. ಸನಾತನ ಧರ್ಮದ ನೀತಿಗಳನ್ನು ಜನರಿಗೆ ತಲುಪಿಸುವ ಈ ಕಲೆ 'ಅಗ್ಗದ ಮನರಂಜನೆ'ಯಾಗದಂತೆ ತಡೆಯಬೇಕಾದ ಜವಾಬ್ದಾರಿ ಸಂಘಟಕರು, ಕಲಾವಿದರು ಮತ್ತು ಭಕ್ತರ—ಎಲ್ಲರ ಮೇಲೂ ಇದೆ. ಇದು ಕೇವಲ ಕಲೆಯ ಪ್ರಶ್ನೆಯಲ್ಲ, ನಮ್ಮ ಸಂಸ್ಕೃತಿಯ ಧರ್ಮದ ಅಸ್ತಿತ್ವದ ಪ್ರಶ್ನೆ.
ಕಾಪು : ಪುಣ್ಯಗಳ ಪರ್ವತದ ಮಾಸ, ರಮಝಾನ್ ಮಾಸ
Posted On: 08 Feb 2026, 11:29 PM
ಕಾಪು : ಪುಣ್ಯಗಳ ಪರ್ವತವನ್ನೇ ಹೊತ್ತು ಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ದವಾಗಿರುವ ಪವಿತ್ರ ಪುಣ್ಯ ರಮಝಾನ್ ಮಾಸ ನಮ್ಮ ಮನೆಬಾಗಿಲಿನ ಬಳಿ ಬರುತ್ತಿದ್ದು, ಅದನ್ನು ಅಷ್ಟೇ ಸಂಭ್ರಮದಿಂದ ಸ್ವಾಗತಿಸಲು ನಾವು ಸಿದ್ಧರಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್ ನ ಖತೀಬ್ ವ ಇಮಾಮ್ ಆಗಿರುವ ಮೌಲಾನ ಅಬ್ದುಲ್ ಘನಿ ಜಾಮಾಯಿ ಯವರು ಹೇಳಿದರು.
ಅವರು ಕಾಪು ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆ ಯಲ್ಲಿ ಕಾಪು ಜಮಾ ಅತೆ ಇಸ್ಲಾಮೀ ಹಿಂದ್ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಒರ್ಗನೈಜೆಷನ್ (ಎಸ್. ಐ. ಓ) ಹಮ್ಮಿಕೊಂಡಿದ್ದ ರಮಝಾನ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತಾಡಿದರು.
ನಮ್ಮ ಎಲ್ಲಾ ಆರಾಧನೆಗಳು ಅಲ್ಲಾಹನಿಗಾಗಿಯೇ ಇರಬೇಕು. ಸದಾ ನಮ್ಮ ಹೃದಯವನ್ನು ಸ್ವಚ್ಚವಾಗಿರಿಸಬೇಕು. ಸಂಬಂಧಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು. ನಮ್ಮಿಂದ ಆಗಿರುವ ತಪ್ಪನ್ನು ಅವಲೋಕನ ಮಾಡಿ, ಅಲ್ಲಾಹನ ಮುಂದೆ ಮನಸ್ಸಿನಾಳದಿಂದ ಕ್ಷಮೆಯಾಚಿಸಬೇಕು. ನಮ್ಮ ಗರಿಷ್ಠ ಸಮಯ ಕುರ್ ಆನ್ ಅಧ್ಯಯನಕ್ಕೆ ಮೀಸಲಾಗಿಡಬೇಕು. ಇದರಿಂದ ನಮಗೆ ಅಲ್ಲಾಹನ ಸಂಪ್ರೀತಿ ದೊರಕುವುದು. ಈ ಎಲ್ಲಾ ಗುಣಗಳನ್ನು ಮೈಗೂಡಿಸಿ ಕೊಳ್ಳಲು ರಮಝಾನ್ ಮಾಸ ಸೂಕ್ತವಾಗಿದೆ. ಹೀಗೆ ನಾವು ಮಾಡಿದರೆ ರಮಝಾನ್ ಮಾಸದ ಪುಣ್ಯಗಳನ್ನು ಪಡೆದು ಕೊಳ್ಳಬಹುದು. ಅದಕ್ಕಾಗಿ ಈ ಮಾಸದ ಸ್ವಾಗತಕ್ಕಾಗಿ ನಾವು ಸಿದ್ದರಾಗಿರಬೇಕು ಎಂದು ಹೇಳಿದರು.
ಎಸ್. ಐ. ಓ. ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರ್ ರವರು ಮಾತನಾಡಿ, ಕುರ್ ಆನ್ ದೇವನ ವತಿಯಿಂದ ಬಂದ ಗ್ರಂಥವಾಗಿದ್ದು, ಅದು ಜನರಿಗೆ ದೀಪಸ್ತಂಭದಂತೆ ಕತ್ತಲೆಯಲ್ಲಿ ಇರುವವರಿಗೆ ದಾರಿ ತೋರಿಸುವ ಕೆಲಸ ಮಾಡುತ್ತದೆ.
ಇದರ ಸದುಪಯೋಗ ಪಡೆದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.
ಈ ಕುರ್ ಆನ್ ಅವತ್ತೀರ್ಣಗೊಂಡದ್ದು ರಮಝಾನ್ ಮಾಸದಲ್ಲಿ ಆಗಿದ್ದು, ರಮಝಾನ್ ಮಾಸ ಜನರನ್ನು ಒಳಿತಿನತ್ತ ಕೊಂಡೊಯ್ಯುತ್ತದೆ. ಕುರ್ ಆನ್ ನೊಂದಿಗೆ ಗಾಢ ಸಂಬಂಧ ಇಟ್ಟುಕೊಳ್ಳಬೇಕು. ಅದಕ್ಕಾಗಿಯೇ ಸಮಯ ಸೂಚಿ ಸಿದ್ದಪಡಿಸಿ ಅದರ ಪಠಣ, ಅನುವಾದ, ವ್ಯಾಖ್ಯಾನದ ಅಧ್ಯಯನ ಮಾಡಬೇಕು. ಇಂದಿನ ದಿನಗಳಲ್ಲಿ ಮೊಬೈಲ್ ಹಾವಳಿ ಜಾಸ್ತಿ ಆಗಿದ್ದು, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಮಾಸದಲ್ಲಿ ಪಣ ತೊಡಬೇಕು ಎಂದು ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಮಾತನಾಡಿ, ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ಎಸ್. ಐ. ಓ. ನ ಧ್ಯೇಯೋದ್ದೇಶ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಕಾರ್ಯ ಯೋಜನೆಯ ಬಗ್ಗೆ ಮತ್ತು ರಮಝಾನ್ ಮಾಸದ ಸ್ವಾಗತ ಯಾಕಾಗಿ ಎಂದು ವಿವರಿಸುತ್ತಾ ಪ್ರಾಸ್ತವಿಕವಾಗಿ, ಸ್ವಾಗತಿಸಿದರು.
ವೇದಿಕೆಯಲ್ಲಿ ಜಾಮಿಯ ಮಸ್ಜಿದ್ ಜದೀದ್ ಕಲಾನ್ ನ ಅಧ್ಯಕ್ಷರು ಜನಾಬ್ ಶಭಿ, ಅಹಮದ್ ಕಾಝಿ ಉಪಸ್ಥಿತರಿದ್ದರು.
ಹಾಫಿಜ್ ಎ ಕುರ್ ಆನ್ ಒಬಾದ ಜರ್ರಾರ್ ರವರ ಕುರ್ ಆನ್ ಪಠನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಎಸ್. ಐ.ಓ. ಸದಸ್ಯ ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.
ಏ.23 - ಮೇ 4 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
Posted On: 08 Feb 2026, 11:20 PM
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಹಾಗೂ ಭಕ್ತರ ಸಭೆಯಲ್ಲಿ 2026ರ ಏ.23 ರಿಂದ ಮೊದಲ್ಗೊಂಡು ಮೇ 3 ರ ಪರ್ಯಂತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುನಃ ಪ್ರತಿಷ್ಣೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಿಸುವುದೆಂದು ನಿಶ್ಚಯಿಸಲಾಗಿದೆ.
ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ಮಾರ್ಗದರ್ಶನದಂತೆ ಏ. 29ರಂದು ಶ್ರೀಮಹಾಲಿಂಗೇಶ್ವರ ದೇವರ ಪುನ: ಪ್ರತಿಷ್ಠೆ ಮತ್ತು ಏ.30ಕ್ಕೆ ಶ್ರೀ ಮಹಾಗಣಪತಿ ದೇವರ ಪುನ: ಪ್ರತಿಷ್ಠೆ ಹಾಗೂ ಮೇ 2 ರಂದು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶಾಭಿಷೇಕ, ಮೇ. 3 ರಂದು ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ. ಮೇ 4ರಂದು ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಶ್ರೀದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಕಿನ್ಯಕ್ಕ ಬಳ್ಳಾಲ್, ಪೇಟೆ ಮನೆ ಭವಾನಿ ಶಂಕರ ಹೆಗ್ಡೆ ಮತ್ತು ಕೊರ್ನಾಯ ಶ್ರೀಪತಿ ರಾವ್ ಉಪಸ್ಥಿತರಿದ್ದರು.
ಉಡುಪಿ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನೂತನ 51 ನೇ ಶಾಖೆ ಉದ್ಘಾಟನೆ ; ಸಾಧಕರಿಗೆ ಸನ್ಮಾನ
Posted On: 08 Feb 2026, 11:18 PM
ಉಡುಪಿ : ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನೂತನ 51 ನೇ ಶಾಖೆಯು ಪಾಂಡುರಂಗ ಟವರ್ ಫಸ್ಟ್ ಫ್ಲೋರ್ ಡಯಾನ ಸರ್ಕಲ್ ಕೋರ್ಟ್ ರೋಡ್ ಉಡುಪಿ ಇಲ್ಲಿ ಶುಭಾರಂಭಗೊಂಡಿತು.
ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ಅಖಿಲ ಭಾರತ ದೈವರಾಧಕರ ಒಕ್ಕೂಟದ (ರಿ.) ಕೇಂದ್ರೀಯ ಉಡುಪಿ ಜಿಲ್ಲೆ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ವಿಎಸ್ ಗ್ರೂಪ್ ನಮ್ಮ ಉಡುಪಿ ಟಿವಿ ನಿರ್ದೇಶಕರು, ತುಳುನಾಡು ವಾರ್ತೆ ವರದಿಗಾರರಾದ ವಿನೋದ್ ಶೆಟ್ಟಿ, ಜಹೀರ್ ಅಲಿ, ರಂಜಿತಾ ಶೇಟ್ ಜೊತೆಗೂಡಿ ಉದ್ಘಾಟಿಸಿದರು.
ಸನ್ಮಾನ : ಸದಾ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ನಿತ್ಯಾನಂದ ಒಳಕಾಡುರವರಿಗೆ ಹಾಗೂ
ಸಮಾಜ ಸೇವೆ, ದೈವಾರಾಧನೆ ಕ್ಷೇತ್ರ, ಸಹಕಾರಿ ಕ್ಷೇತ್ರ, ಮಾಧ್ಯಮ ಕ್ಷೇತ್ರ, ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ, ಬೆಂಗಳೂರಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರಾದ ವಿನೋದ್ ಶೆಟ್ಟಿವರಿಗೆ ಹಾಗೂ ರಂಜಿತಾ ಶೇಟ್, ಜಹೀರ್ ಅಲಿ ಮತ್ತಿತರ ಪ್ರಮುಖ ಸಾಧಕರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ, ಆಪೋಲಿನ ಡಿಸಿಲ್ವಾ, ಸುಶಾಂತ್, ಸೀನಿಯರ್ ಮ್ಯಾನೇಜರ್ ವಿರೇಶ್ ಬಿ ಸ್, ಉಡುಪಿ ಬ್ರಾಂಚ್ ಮ್ಯಾನೇಜರ್ ರೋಯಿಸ್ ಡಿಸಿಲ್ವಾ, ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಸುಭಾಷ್,
ಸಿಬ್ಬಂದಿ ವರ್ಗ ಉಪಸ್ಥಿತಿಯಿದ್ದರು.
ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಗೌರವ ಪುರಸ್ಕಾರಕ್ಕೆ ಯಶೋದಾ ಕೇಶವ್ ಆಯ್ಕೆ
Posted On: 08 Feb 2026, 11:10 PM
ಉಡುಪಿ : ತುಳುನಾಡ ಧ್ವನಿ ಸುದ್ದಿ ಜಾಲತಾಣದ ಮುಖ್ಯಸ್ಥೆಯಾದ ಯಶೋದಾ ಕೇಶವ್ ಇವರು ಪ್ರತಿಷ್ಠಿತ ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.
ABRSM-KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿಸಿರುವ “ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ” ಕಾರ್ಯಕ್ರಮದ ಅಂಗವಾಗಿ ಈ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ.
ಸಮಾಜಮುಖಿ ಕಾರ್ಯಗಳು ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಯಶೋದಾ ಕೇಶವ್ ಇವರಿಗೆ ತುಳು ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಅನನ್ಯ ಸೇವೆ, ಸಾಧನೆಗಾಗಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಬರುವ ಫೆಬ್ರವರಿ 16 ತಾರೀಕಿನಂದು ಪುತ್ತೂರು ನೆಹರು ನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯಲಿರುವ ರಾಣಿ ಅಬ್ಬಕ್ಕ 500 ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ 100 ನೇ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ನಡೆಯಲಿರುವ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಬಹುಮುಖ ಪ್ರತಿಭೆ
ಯಶೋದಾ ಕೇಶವ್ ಇವರು ತುಳುನಾಡ ಧ್ವನಿ ಸುದ್ದಿ ಜಾಲತಾಣ ಹಾಗೂ ಯುಟ್ಯೂಬ್ ಚಾನೆಲ್ ಮೂಲಕ ತುಳು ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಮಹಿಳೆ. ತುಳು ಭಾಷೆಗೆ ಯಾವುದೇ ರೀತಿಯ ಧ್ವನಿ ಎತ್ತಲು ಹಿಂಜರಿಯದೆ ನೇರವಾಗಿ ಪ್ರಶ್ನಿಸುವ ಸ್ವಭಾವ ಇವರದಾಗಿದೆ. ಯಾವುದೇ ದೊಡ್ಡ ವೇದಿಕೆ ಇರಲಿ ಇವರು ಮೊದಲು ಪ್ರಾಶಸ್ತ್ಯ ಕೊಡುವುದು ತುಳು ಭಾಷೆಗೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಸಮಾಜಸೇವೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಸಿರಿ ತುಳುವ ಚಾವಡಿ, ತುಳುಕೂಟ ಉಡುಪಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ, ತುಳು ವರ್ಲ್ಡ್ ಫೌಂಡೇಶನ್, ರೋಟರಿ, ಬಿಎನ್ ಐ, ಸಂಸ್ಥೆ, ಸರ್ವದಾ ಯುವ ಸಂಘ, ಮೊಗವೀರ ಯುವ ಸಂಘಟನೆ, ಗಣೇಶೋತ್ಸವ ಸಮಿತಿ, ಹಾಗೆಯೇ ಹಲವಾರು ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಹಲವಾರು ತುಳು ನಾಟಕಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ. ಇವರು ತುಳು ಭಾಷೆಯ ಉತ್ತಮ ನಿರೂಪಕಿಯೂ ಆಗಿದ್ದಾರೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಉಡುಪಿ ಭಾಗದಲ್ಲಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇವರ ಕಾರ್ಯವೈಖರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವ ಇನ್ನಷ್ಟು ಉತ್ತುಂಗಕ್ಕೆ ಏರಲು ಅನುವು ಮಾಡಿಕೊಟ್ಟಿದೆ.
ಪಡುಬಿದ್ರಿ : ವಾಡ್೯ ಸಭೆ ; ಸಮಸ್ಯೆ ಹಲವು ಫಂಡಿಲ್ಲ ಫಂಡಿಲ್ಲ ; ಪಿಡಿಒ ಗೈರು
Posted On: 08 Feb 2026, 02:48 PM
ಪಡುಬಿದ್ರಿ : ವಾಡ್೯ ಸಭೆಗೆ ಪಿಡಿಒರವರ ಗೈರು ಹಾಗೂ ಅನುಮತಿ ನೀಡುವಾಗ ಸ್ಥಳ ಪರಿಶೀಲಿಸದೆ ಅನುಮತಿ ನೀಡುವ ಬಗ್ಗೆಯೂ ಗ್ರಾಮಸ್ಥರ ಜೊತೆಗೆ ಪಂಚಾಯತ್ ಸದಸ್ಯರ ಅಸಮಾಧಾನಕ್ಕೆ ಕಾರಣವಾದ ಪಡುಬಿದ್ರಿ ಗ್ರಾಮ ಪಂಚಾಯತ್ ನ ವಾಡ್೯ 5 ಮತ್ತು 6ನೇ ಸಭೆಯು ಶನಿವಾರ ಸಂಜೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಪಡುಹಿತ್ಲುಗೆ ಸಾಗುವ ರಸ್ತೆಯಲ್ಲಿ ಸರಿಯಾದ ಪ್ಯಾಚ್ ವಕ್೯ ನಡೆಸದ ಬಗ್ಗೆ, ಹಲವಾರು ಕುಟುಂಬಗಳ ಬಿಪಿಎಲ್ ಕಾಡ್೯ ರದ್ಧತಿ, ಮೆಸ್ಕಾಂರವರು ತಂತಿಗೆ ತಗುಲಿದ ಗೆಲ್ಲನ್ನು ಮಳೆಗಾಲಕ್ಕೂ ಮುನ್ನ ಕಡಿಯಬೇಕೆಂದು, ಸದಸ್ಯರಿಗೆ ಗೊತ್ತಾಗದೆ ಪಿಡಿಒರವರು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ಜೊತೆಗೆ ರಸ್ತೆಯನ್ನು ಆಕ್ರಮಿಸಿ ಕೌಂಪೌಂಡ್ ಕಟ್ಟಿ ಹೂವಿನ ಗಿಡಗಳನ್ನು ಮಾಡಿದರೂ ಪಂಚಾಯತ್ ಗಮನವಹಿಸುತ್ತಿಲ್ಲ.
ವಾಡ್೯ 5ರಲ್ಲಿರುವ ಲೇ ಔಟ್ ನವರಿಂದ ದಾರಿ ಮುಚ್ಚಿದ ಬಗ್ಗೆ ಮತ್ತು ಕಸವನ್ನು ಪಂಚಾಯತ್ ಕಸ ವಿಲೇವಾರಿಗೆ ನೀಡದಿರುವ ಬಗ್ಗೆ, ನದಿಯ ಹೂಳೆತ್ತುವ ಕಾರ್ಯ ಮಾಡಿ ನೆರೆಯನ್ನು ಕಡಿಮೆ ಮಾಡಿ, ನೀರಿನ ಪೈಪ್ ಒಡೆದು ನೀರು ಪೋಲು, 6ನೇ ವಾಡ್೯ ನಲ್ಲಿ ಕೆಸರು ನೀರು ಬಂದು ಕುಡಿಯಲು ಯೋಗ್ಯವಾಗಿಲ್ಲ ಎಂದು, ನಂದಿಕೂರಿನಲ್ಲಿ ಕಾರ್ಯಚರಿಸುವ ಎಂ 11 ಕಂಪನಿಯಿಂದ ಬೆಳಗ್ಗೆ, ಸಂಜೆ ಸಮಯ ವಾಸನೆ ಬರುತ್ತಿದೆ ಎನ್ನುವುದರ ಬಗ್ಗೆ ಗ್ರಾಮಸ್ಥರಿಂದ ಪಂಚಾಯತ್ ಗಮನಕ್ಕೆ ತರಲಾಯಿತು.
ಗ್ರಾಮಸಭೆಯಲ್ಲಿ ಪಂಚಾಯತ್ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಸಮ್ಮುಖ ಪರಿಹಾರ ನೀಡುವ ಬಗ್ಗೆ, ಪಡುಬಿದ್ರಿಯಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಿ ನೀರಿನ ಸಮಸ್ಯೆ ಹೋಗಲಾಡಿಸುವ ಬಗ್ಗೆ, ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ತಪ್ಪಿಸಿ ಎಂದು ಪಂಚಾಯತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ವಾಡ್೯ 5 ರ ಸದಸ್ಯರಾದ ಮಹೇಂದ್ರ, ಯಶೋಧ, ವಾಡ್೯ 6 ರ ಸದಸ್ಯರಾದ ವಿಜಯಲಕ್ಷ್ಮಿ, ಗಣೇಶ್ ಕೋಟ್ಯಾನ್, ಪಂಚಾಯತ್ ಕಾರ್ಯದರ್ಶಿ ರೂಪಲತಾ, ಗ್ರಾಮಸ್ಥರು ಉಪಸ್ಥಿತರಿದ್ದರು.
ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ "ಬೆಲ್ಲದ ಗಟ್ಟಿ" ತುಳು ಚಲನಚಿತ್ರ
Posted On: 08 Feb 2026, 02:34 PM
ಬರಹ : ಪಿ.ಎಸ್.ರಂಗನಾಥ ಮಸ್ಕತ್, ಒಮಾನ್ ರಾಷ್ಟ್ರ
ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳೊನ್ನಳೊಗೊಂಡ ತುಳು ಚಲನಚಿತ್ರ "ಬೆಲ್ಲದ ಗಟ್ಟಿ" ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ಫೆ.6, ಶುಕ್ರವಾರದಂದು ಪ್ರೀಮಿಯರ್ ಶೋದಲ್ಲಿ ತುಳು ಚಿತ್ರ ಪ್ರೇಮಿಗಳಿಂದ ಚಿತ್ರಮಂದಿರ ಭರ್ತಿಯಾಗಿ ಅದ್ಭುತ ಪ್ರದರ್ಶನ ಕಂಡು ಬಂತು.
ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದಲ್ಲಿ, ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ತುಳುನಾಡಿನ ಸುಂದರ ಬದುಕು, ಕರಾವಳಿ ದೈವಗಳು, ಕೌಟುಂಬಿಕ ಜೀವನ, ಕರಾವಳಿಯ ಸುಂದರ ಪ್ರಕೃತಿ, ಎಲ್ಲವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಮತ್ತು ಸುಮಧುರ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಪ್ರಮುಖ ಘಟನೆಗಳ ಸನ್ನಿವೇಶಗಳಲ್ಲಿ ಬರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕರಾವಳಿಯ ಸುಂದರ ದೃಶ್ಯಗಳು ಚಿತ್ರದ ಛಾಯಾಗ್ರಹಣವೂ ಇನ್ನೊಂದು ಪ್ಲಸ್ ಪಾಯಿಂಟ್. ಊರಿನಿಂದ ದೂರ ಇರುವ ಜನರು, ಆ ದೃಶ್ಯಗಳನ್ನು ನೋಡುವಾಗ ತಮ್ಮ ಹುಟ್ಟೂರನ್ನು ನೆನಪಿಸುವಂತೆ ಮಾಡುವಲ್ಲಿ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ.
ಚಿತ್ರದ ಚಿತ್ರಕಥೆ ಬಹಳ ಗಟ್ಟಿಯಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವಂತಿದೆ. ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಸಿನಿಮಾ, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ನಡೆಯುವ ಅನಿರೀಕ್ಷಿತ ಘಟನಾವಳಿಗಳನ್ನು ಅನಾವರಣಗೊಳಿಸುತ್ತದೆ. ಕರಾವಳಿ ಸಿಹಿ ತಿನಿಸು ‘ಬೆಲ್ಲದಗಟ್ಟಿ’ ಈ ಕಥೆಯ ತಿರುವು. ಗರ್ಭಿಣಿ ಜಾನಕಿ ಹಸಿವಾದಾಗ ಆಸೆಯಿಂದ ತಿಂದ ಆ ಒಂದು ಬೆಲ್ಲದಗಟ್ಟಿ ಇಡೀ ಮನೆಯ ಶಾಂತಿಯನ್ನು ಕದಡುತ್ತದೆ. ಮಾವನ ತಪ್ಪು ಕಲ್ಪನೆ ಹಾಗೂ ಸೊಸೆ ಜಲಜಾಳ ನಡುವಿನ ಮಾತಿನ ಚಕಮಕಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಮುಂಚಿನಿಂದಲೂ ಸೊಸೆ ಜಲಜಾಳ ಬಗ್ಗೆ ಮಾವನಿಗೆ ಅಸಹನೆ ಇರುತ್ತದೆ.
ದೈವದ ಹೆಸರಿನಲ್ಲಿ ಮಾವ ಮಾಡಿದ ಒಂದು ಸಣ್ಣ ತಪ್ಪು, ಇಡೀ ಮನೆಯ ವಾತಾವರಣವನ್ನೇ ಬದಲಿಸಿ ಬಿಡುತ್ತದೆ. ಈ ಘಟನೆಯ ನಂತರ ಜಾನಕಿಯ ವರ್ತನೆಯಲ್ಲಿ ವಿಪರೀತ ಬದಲಾವಣೆಗಳಾಗುತ್ತವೆ. ಅವಳ ವಿಚಿತ್ರ ನಡವಳಿಕೆಯಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತದೆ. ನಂತರ ನಡೆಯುವ ಘಟನೆಗಳು ಕಥೆಗೆ ಹೊಸ ಆಯಾಮ ನೀಡುತ್ತವೆ. ಕೊನೆಗೆ, ತನ್ನ ತಪ್ಪಿನ ಅರಿವಾಗುವ ಮಾವನಿಗೆ "ಮಗಳು ಮತ್ತು ಸೊಸೆ ಇಬ್ಬರೂ ಒಂದೇ" ಎಂಬ ಸತ್ಯ ದರ್ಶನವಾಗುತ್ತದೆ. "ಪರರ ಮನೆಯಿಂದ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು, ಅವಳ ತವರು ಮನೆಯನ್ನು ಹೀಯಾಳಿಸುವುದು ತಪ್ಪು" ಎಂಬ ಉದಾತ್ತ ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.
ಥ್ರಿಲ್ಲರ್ ಜತೆಗೆ, ಚಿತ್ರದಲ್ಲಿ ಲಘು ಹಾಸ್ಯವೂ ಇದೆ. ಹದಿ ಹರೆಯದ ಯುವಕ ಯುವತಿಯರ ಸನ್ನಿವೇಶ ಮತ್ತು ನಿರ್ದೇಶಕ ರಾಜಾ ಕಟಪಾಡಿ ಯವರು, ಮಾತು ಬರದ ಮೂಗನಂತೆ ನಟಿಸಿರುವ ದೃಶ್ಯಗಳು ಹಾಸ್ಯದ ಹೊನಲನ್ನು ಹರಿಸುತ್ತವೆ. ಹಾಡುಗಳು ಸಹ ಸುಮಧರವಾಗಿ ಮೂಡಿ ಬಂದಿದೆ. ಚಿತ್ರದ ನಟ ನಟಿಯರು, ಪೋಷಕ ಕಲಾವಿದರು ಎಲ್ಲರೂ ಸ್ಥಳೀಯ ಕಲಾವಿದರು ಎನ್ನುವುದು ವಿಶೇಷ, ಪ್ರತಿಯೊಬ್ಬರೂ ಚಿತ್ರದಲ್ಲಿ ಮನಮುಟ್ಟುವಂತೆ ನಟಿಸಿದ್ದಾರೆ, ತೆರೆ ಮೇಲೆ ಪ್ರತಿ ಪಾತ್ರವು ತುಂಬಾ ಸರಳವಾಗಿ ನೈಜವಾಗಿ ಮೂಡಿ ಬರಲು ನಿರ್ದೇಶಕರು ಚಿತ್ರದ ಪ್ರಮುಖ ಪಾತ್ರದಾರಿಗಳಿಂದ ಕಥೆಗೆ ಬೇಕಾದ ನಟನೆಯನ್ನು ತೆಗೆಸಿದ್ದಾರೆ. ಪ್ರಮುಖ ಪಾತ್ರಧಾರಿಗಳ ಪ್ರಭುದ್ದತೆಯನ್ನು ಪ್ರತಿ ದೃಶ್ಯಗಳಲ್ಲಿ ಕಾಣಬಹುದು. ನಿರ್ಮಾಪಕ ರಾಮಕೃಷ್ಣ ಸುಜೀರ್ ಬಾರ್ದಿಲ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಮಾತ್ರವಲ್ಲದೆ, ಭಟ್ಟರ ಪಾತ್ರದಲ್ಲಿ ಅನುಭವ ನಟರಂತೆ ಅದ್ಭುತವಾಗಿ ನಟಿಸಿದ್ದಾರೆ.
ವಿದ್ಯಾವಂತ ಯುವಕರು ಊರಿನಲ್ಲಿ ದುಡಿಯಲು ಸಾಧ್ಯವಿಲ್ಲ ಎಂದು ಹುಟ್ಟಿದ ಊರನ್ನ ಬಿಟ್ಟು ಮುಂಬಯಿಗೆ ಹೋಗಿ, ಅಲ್ಲಿ ಹೋಟೆಲ್ ಬಾರ್ ಗಳಲ್ಲಿ ದುಡಿದು ಉತ್ತಮವಾಗಿ ಹಣ ಸಂಪಾದಿಸುತ್ತಾರೆ. ಅವರ ಜೀವನವನ್ನು ನೋಡಿ ಬೇರೆಯವರು ಸಹ ಊರನ್ನು ಬಿಟ್ಟು ಮುಂಬಯಿಗೆ ಹೋಗಿ ಹಣ ಸಂಪಾದಿಸಲು ಪ್ರೇರೆಪಿಸುತ್ತದೆ, ಆದರೆ ಸ್ವಂತ ಊರಿನಲ್ಲಿ ರಾಜನಂತೆ ಬದುಕುವ ನೆಮ್ಮದಿ ಪರ ಊರಿನಲ್ಲಿ ಇಲ್ಲ ಎನ್ನುವ ಸ್ಮೂಕ್ಷ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ. ಒಟ್ಟಾರೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸದಸ್ಯರಿಂದ ಶ್ರಮದಾನ
Posted On: 08 Feb 2026, 02:28 PM
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಇದರ 374 ನೇ ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ಪಡುಬಿದ್ರಿ ಬೀಚ್ ರಸ್ತೆ ಮತ್ತು ಪಡುಬಿದ್ರಿ ಬ್ರಹ್ಮಸ್ಥಾನ ರಸ್ತೆ ಕೂಡುವ ತಿರುವಿನಲ್ಲಿ ರಸ್ತೆಯ ಬದಿಯಲ್ಲಿ ದಟ್ಟವಾಗಿ ಬೆಳೆದ ಹುಲ್ಲುಗಳು ಅಪಾಯದ ಮುನ್ಸೂಚನೆ ನೀಡುತ್ತಿತ್ತು ಅದನ್ನು ಮನಗಂಡ ಸಂಸ್ಥೆಯ ಸದಸ್ಯರು ಶ್ರಮದಾನದ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ಶ್ರಮದಾನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
