ಬೆರಳು ಮುದ್ರೆ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕ ಅಸ್ವಸ್ತಗೊಂಡು ಕುಸಿದು ಸಾವು
Thumbnail
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಿಪ್ಪಣ್ಣ ನಾಗವ್ವ ಮಾದರ (37) ಅಸ್ವಸ್ತಗೊಂಡು ಕುಸಿದಿದ್ದ ಇವರನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವ ಘಟನೆ ಮಾಚ್೯ 4ರ ಸಂಜೆ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ತಿಪ್ಪಣ್ಣ ನಾಗವ್ವ ಮಾದರ ಪಾಂಡೇಶ್ವರದಲ್ಲಿರುವ ಜಿಲ್ಲಾ ಎಸ್. ಪಿ. ಕಛೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಬರುತ್ತಿರುವಾಗ ಎ.ಬಿ . ಶೆಟ್ಟಿ ಸರ್ಕಲ್ ಬಳಿ ಅಸ್ವಸ್ತಗೊಂಡು ಕುಸಿದು ಬಿದ್ದವರನ್ನು ಸಿ. ಎ. ಆರ್. ಸಿಬ್ಬಂದಿ ರಮೇಶ್ ರವರು ಕೂಡಲೇ ಉಪಚರಿಸಿ ಎಂ. ವಿ. ಶೆಟ್ಟಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಕೂಡಲೇ ಅಂಬುಲೇನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕೆ. ಎಂ.ಸಿ. ಜ್ಯೋತಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ. ಇವರು 2011 ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ (FPB) ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಾಗಲಕೋಟೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದವರು ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳುಗಳಿಂದ ಎ.ಎಸ್.ಐ. (ಎಫ್.ಪಿ.ಬಿ.) ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪತ್ನಿ ದೀಪಾ ತಿಪ್ಪಣ್ಣ ಮಾದರ್ ಮತ್ತು ಮಕ್ಕಳಾದ ನಿಹಾರಿಕಾ (ಆರು ವರ್ಷ) ಅನ್ವಿತಾ (ಮೂರುವರೆ ವರ್ಷ) ಹಾಗೂ ನಿಶಾಂತ್ (ಒಂದೂವರೆ ವರ್ಷ) ಎಂಬ ಮೂರು ಮಕ್ಕಳನ್ನು ಅಗಲಿರುತ್ತಾರೆ.
04 Mar 2022, 10:50 PM
Category: Kaup
Tags: