ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಚೌತಿಗೊಂದು ಚಿಂತನೆ ಬಂದು ಹೋಗುವ ಗಣಪತಿ

Posted On: 22-08-2020 08:25AM

| ಆರಾಧನೆಯ ಪೂರ್ವಾಪರ | ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ ಅಥವಾ ಆಹ್ವಾನಿಸಿ , ಆವಾಹಿಸಿ , ಪೂಜಿಸಿ ವಿಸರ್ಜಿಸುವ ದೇವರುಗಳಲ್ಲಿ "ಗಣಪತಿ" ಒಬ್ಬ . ಋತುಮಾನಕ್ಕೆ ಅನುಗುಣವಾಗಿ ನಿರ್ದಿಷ್ಟ ದಿನಗಳಲ್ಲಿ‌ ಬಂದು ಹೋಗುವ ಈ ದೇವರುಗಳ ಆರಾಧನಾ ವಿಧಾನವು ಎಷ್ಟು ವೈಭವದಿಂದ ನಡೆದರೂ ತಾತ್ಕಾಲಿಕ ಕಲ್ಪನೆ ಮತ್ತು ಅನುಸಂಧಾನ ಆಧರಿತವಾಗಿರುವುದು ಗಮನಾರ್ಹ .ವರ್ಷಪೂರ್ತಿ ಬೇರೆಬೇರೆ ಸಂದರ್ಭಗಳಲ್ಲಿ ಇಂತಹ ದೇವರುಗಳ ಆಗಮನವಾಗುತ್ತಿರುತ್ತದೆ .ಶ್ರದ್ದೆಯ ಆರಾಧನೆ ನಡೆದು ಆ ದೇವರುಗಳನ್ನು ಬೀಳ್ಕೊಡಲಾಗುತ್ತದೆ . ಜನಪದರ ಆಟಿಯ‌ಅಜ್ಜಿ , ಸೋಣದ ಬಲೀಂದ್ರನತಾಯಿ , ಹೊಸ್ತಿಲಿನ ದೇವರು, ತೆನೆಕಟ್ಟುವ ಆಚರಣೆ , ತುಳುವರ ಪರ್ಬದ ಬಲೀಂದ್ರ , ಕೆಡ್ಡಸದ ಭೂಮಿತಾಯಿ , ಬಿಸುಕಣಿ ಹಾಗೂ ಶಿಷ್ಟದ ಗೌರಿ - ಗಣೇಶ , ನವರಾತ್ರಿಯ ಶಕ್ತಿಪೂಜೆ ,ದೀಪಾವಳಿಯ ಬಲೀಂದ್ರ ಮುಂತಾದ ದೇವರುಗಳು ತಾತ್ಕಾಲಿಕವಾಗಿ ನೆಲೆಗೊಂಡು , ಪೂಜೆಗೊಂಡು ನಿರ್ಗಮಿಸುವಂತವರು .ಈ ಸ್ಥಿರವಲ್ಲದ ಉಪಾಸನೆಗೆ ಮಣ್ಣಿನಮೂರ್ತಿ‌, ಕಲಶ ,ದೀಪ , ಸ್ವಸ್ತಿಕೆ(ಸುತ್ತೆ) ಮುಂತಾದ ಸಂಕೇತಗಳು ಮಾಧ್ಯಮಗಳಾಗುತ್ತವೆ . ಗೌರಿ - ಗಣೇಶರಿಗೆ ಮಣ್ಣಿನ ಮೂರ್ತಿಯಲ್ಲಿ ಪೂಜೆ .ಗಣೇಶನ ಎಷ್ಟೇ ಭೀಮಗಾತ್ರದ ಪ್ರತಿಮೆಯನ್ನಾದರೂ ಮಣ್ಣಿನಲ್ಲೆ ರಚಿಸುವುದು ,ಪೂಜೆಯ ಬಳಿಕ ನೀರಿನಲ್ಲಿ ವಿಸರ್ಜಿಸುವುದು . ನವರಾತ್ರಿಯ ಸಂದರ್ಭ ಕಲಶದಲ್ಲಿ ಆವಾಹನೆ - ಪೂಜೆ , ಸ್ವಸ್ತಿಕೆಯಲ್ಲಿ ಆರಾಧನೆ ಮತ್ತು ಶಾರದೆಯ ಮಣ್ಣಿನ ಮೂರ್ತಿಯ ಪೂಜೆ - ವಿಸರ್ಜನೆ ಇತ್ಯಾದಿ ವಿಶಿಷ್ಟ ವಿಧಾನದಲ್ಲಿ ಉಪಾಸನೆಗಳು ನಡೆದು ಬಂದಿದೆ . ಪೊಲಿ ( ಸಮೃದ್ಧಿ)ಯನ್ನು ತೆನೆಯ ರೂಪದಲ್ಲಿ ಮನೆ ತುಂಬಿಸಿಕೊಳ್ಳುವ ಆಚರಣೆ , ಬಲೀಂದ್ರನನ್ನು ದೀಪದಲ್ಲಿ - ಬೆಳೆಯ ಸಮೃದ್ಧಿಯಲ್ಲಿ ಕಾಣುವುದು , ಮನೆಯಂಗಳದಲ್ಲಿ ಬೂದಿಯಲ್ಲಿ ಬರೆಯುವ ರಂಗವಲ್ಲಿ ಹಾಗೂ ಅದರಲ್ಲಿರಿಸುವ ಮಂಗಳ ದ್ರವ್ಯಗಳಲ್ಲಿ ಕೆಡ್ಡಸದ ಆಚರಣೆಯ ಭೂಮಿತಾಯಿಯನ್ನು ಪೂಜಿಸುವುದು , ಮಂಗಳದ್ರವ್ಯಗಳೊಳಗೊಂಡ 'ವಿಷುಕಣಿ'ಯಲ್ಲಿ ಯುಗಾದಿಯ ಅಥವಾ ಹೊಸ ವರ್ಷದ ಭವಿಷ್ಯದ ದೇವರನ್ನು ಗುರುತಿಸುವುದು ಮುಂತಾದ ಕ್ರಮಗಳೆಲ್ಲ ತಾತ್ಕಾಲಿಕ ನೆಲೆಯಲ್ಲಿ ನೆರವೇರುತ್ತಿವೆ . ಅಂದರೆ ಈ ಸಂದರ್ಭಗಳಲ್ಲಿ ಪೂಜೆಗೊಳ್ಳುವ ನಂಬಿಕೆಗಳೆಲ್ಲ ಬಂದುಹೋಗುವ ಶ್ರದ್ಧೆಗಳಾಗಿವೆ .ಅಂತೆಯೇ ನಮ್ಮ ಗಣಪತಿ ಬಂದು ಹೋಗುವ ದೇವರುಗಳಲ್ಲಿ ಒಬ್ಬ . • ತಾಯಿ ಗೌರಿಯೊಂದಿಗೆ ಪ್ರತಿವರ್ಷ ಆಗಮಿಸಿ ಪೂಜೆಗೊಂಡು ನಿರ್ಗಮಿಸುವ ಗಣಪನ ಆರಾಧನೆಯಲ್ಲಿ ತಾಯಿ ಗೌರಿಗೂ ಪ್ರಾಧಾನ್ಯವಿದೆ .ಮೊದಲು "ಗೌರಿ ತೃತೀಯ , ಬಳಿಕ ಗಣೇಶ ಚತುರ್ಥಿ" ಇದರಿಂದ ಆದಿಪೂಜಿತನಾದರೂ ಮೊದಲು ತಾಯಿಗೆ ಪೂಜೆ . ಇಂದಿನ ಆಡಂಬರದ ವೈಭವೋಪೇತ ಗಣಪತಿ ,ದುರ್ಗೆಯರ ,ಬಲೀಂದ್ರನ ಉಪಾಸನಾ ವಿಧಾನಗಳ ಬಹು ವಿಸ್ತ್ರತ ಅಲಂಕಾರದ ಮರೆಯಲ್ಲಿ ಜನಸಾಮನ್ಯರ ಚಿಂತನೆಗೆ ಆಧಾರಗಳು ದೊರೆಯುತ್ತವೆ. ಸರಳ - ಸುಂದರ ಜನಪದೀಯ ಅನುಸಂಧಾನವು ಅಲ್ಲೆ ನಿಚ್ಚಳವಾಗಿರುತ್ತವೆ. ಏಕೆಂದರೆ ಜನಪದರ ಮನಸ್ಸುಗಳು ಕಲ್ಪಸಿದ ,ಆ ಆಲೋಚನೆಗಳನ್ನೆ ಮೂರ್ತಸ್ವರೂಪಕ್ಕೆ ಇಳಿಸಿದ ಪೂಜಾವಿಧಾನ - ಪ್ರತೀಕಗಳ ಚಿಂತನೆಗಳು ಸುಪ್ತವಾಗಿ ಗಮನ ಸೆಳೆಯುತ್ತಿರುತ್ತವೆ . ಸಹಜ ,ಮುಗ್ಧ ಚಿಂತನೆಯಿಂದ ವೈದಿಕದ ವೈಭವೋಪೇತ ಸೃಷ್ಟಿಯವರೆಗೆ ; ಬೇಟೆ ಸಂಸ್ಕೃತಿಯಿಂದ ಆರಂಭಿಸಿ ಆಧುನಿಕ ಜೀವನ ಶೈಲಿಯ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ ಮಹಾಗಣಪತಿಯ ಸ್ವೀಕಾರ ಮತ್ತು ಪೂಜಾವಿಧಾನಗಳಿಗೆ ರೋಚಕ ಇತಿಹಾಸವಿದೆ. ವಿಶ್ವದಾದ್ಯಂತ ಮಾನ್ಯತೆ ಇದೆ . ಒಂದು ಸಂಸ್ಕೃತಿಯ ಸಂಕೇತವಾಗಿ , ಒಬ್ಬ ಗಣವಾಗಿ , ಬ್ರಹ್ಮಣಸ್ಪತಿಯಾಗಿ , ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹಿಸಲಸಾಧ್ಯ .ಆಸ್ತಿಕ ,ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ ದೇವರು ಗಣಪತಿ .ಜಾತಿ - ಮತ - ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಬರ ಮೂರ್ತಿಯಾಗಿ ಬೆಳೆದದ್ದು ,ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು ಮಾತ್ರ ಸತ್ಯ .

ವಿಘ್ನ ವಿಡ್ಡೂರಗಳು
ಮಾನವ ಬಯಸಿದ್ದೆಲ್ಲ ನಿರಾಯಾಸವಾಗಿ ಪ್ರಾಪ್ತಿಯಾಗಬೇಕು ,ಜೀವನ ಸುಂದರ ಹಾಗೂ ನಿರಾಳವಾಗಬೇಕು , ಬದುಕಿನ ನಿರಂತರತೆಗೆ ಭಂಗ ಬರಬಾರದು , ನಿರ್ವಿಘ್ನವಾಗಿ ಬಾಳಬೇಕು ಎಂದು ಬಯಸಿದಾಗ ಸಹಜವಾಗಿ ವಿಘ್ನಗಳು ಬರುತ್ತವೆ , ಆಗ ಆತಂಕಕ್ಕೊಳಗಾಗುತ್ತೇವೆ. ಕಾರ್ಯಾರಂಭಗಳಿಗೆ ವಿಘ್ನ - ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿದಿರಬೇಕು . ವಿಘ್ನನಿವಾರಕ ದೇವರೊಬ್ಬನ ಚಿಂತನೆ ಬಂದಿರಬಹುದು .ಈ ತಲ್ಲಣ ,ಗೊಂದಲಗಳ ನಿವೃತ್ತಿಗಾಗಿ ವಿಘ್ನನಿವಾರಕ ದೇವರೊಬ್ಬ ಸಾಕಾರಗೊಂಡಿರಬೇಕು . ನಮ್ಮ ವಿಶಾಲ ಮನೋಭಾವದ ಆಧ್ಯಾತ್ಮಿಕ ಬದುಕು , ಸಾಂಸ್ಕೃತಿಕ ವೈಚಾರಿಕ ವೈಶಾಲ್ಯತೆಯಲ್ಲಿ ಗಜಮುಖನಾದರೂ ಸುಮುಖನಾಗಿ ಆದಿಪೂಜಿತನು ಪ್ರಥಮ ಪೂಜೆಗೊಳ್ಳುತ್ತಾನೆ .
ಅಮೂರ್ತವಾದರೂ ಮೂರ್ತ ಚಿಂತನೆ ,ಅಲೌಕಿಕದ ಲೌಕಿಕ ದರ್ಶನ , ಪ್ರತಿಕೃತಿ ಆರಾಧನೆಗಳೆಲ್ಲ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದಾಗಲೂ ನಮ್ಮ ಗಣಪ ಹಲವು ಸ್ಥಿತ್ಯಂತರ - ರೂಪಾಂತರಗಳಿಗೆ ಒಳಗಾದರೂ ಬೆಳೆದದ್ದು ಭವ್ಯವಾಗಿ .ಸಂಸ್ಕೃತಿಯ ಮೂಲದಲ್ಲೆ ಇದ್ದ ಅಥವಾ ಆವಿರ್ಭವಿಸಿದ ಒಂದು ಚಿಂತನೆ ಇದಾದುರಿಂದ ಇದರ ಪರಿಣಾಮ ಇಷ್ಟು ತೀವ್ರವಾಗಿದೆ .ಗಾಢವಾಗಿ ಬೇರೂರಿದೆ . ಅಸಂಗತ ,ಅಸಂಬದ್ದ ಪ್ರತಿಮಾಲಕ್ಷಣ , ಧಾರಣೆ - ವಾಹನಗಳಲ್ಲೂ ವೈರುಧ್ಯ , ಆಯುಧಗಳಲ್ಲೂ ಏನೋ ಒಂದು ಮೂಲದ ನೆನಪು , ಪ್ರತ್ಯಕ್ಷ ವಿರೋಧ - ಪರಸ್ಪರ ವಿರೋಧದ ಗಣಪನ ಭವ್ಯ ಬಿಂಬದಲ್ಲಿ‌ ಪರಿಪೂರ್ಣತೆಯನ್ನು ,ಸುಮುಖತೆಯನ್ನು , ಪ್ರಕೃತಿ - ವಿಕೃತಿಗಳನ್ನು ದಿವ್ಯಸಾನ್ನಿಧ್ಯವನ್ನು ಗುರುತಿಸಿರುವುದು ಅಚ್ಚರಿಯ ಸಂಗತಿ . ಹೊಟ್ಟೆಗೆ ಬಿಗಿದುಕೊಂಡದ್ದು ಸರ್ಪ . ವಾಹನವಾಗಿ ಇಲಿ . ಇಲಿಯನ್ನು ಕಂಡ ಸರ್ಪ ಬೆನ್ನಟ್ಟಿ ಬೇಟೆಯಾಡುವುದು ಲೋಕರೂಢಿ. ಆದರೆ ಅಸಂಬದ್ಧ ಎನಿಸಿದರೂ ಈ ವಿನಾಯಕನ ಪ್ರತಿಮೆಯಲ್ಲಿ ಜಾತಿವೈರಗಳೇ ಇಲ್ಲ .ಅಸಂಗತಗಳೇ ಸುಸಂಗತಗಳಾಗುವ ಪರಿಷ್ಕಾರ ಗಣಪತಿಯ ಬಿಂಬದಲ್ಲಿ ಸ್ಪಷ್ಟ. ಮಾನವ ದೇಹ ,ಆನೆಯ ತಲೆ ಇದು‌ ಒಂದು ರೀತಿಯ ಅಸಂಭವ . ಇಂತಹ ಬೇರೆ ದೇವರುಗಳೂ ನಮ್ಮಲ್ಲಿದ್ದಾರೆ .ಬೇಟೆ ಸಂಸ್ಕೃತಿಯ ಪ್ರತೀಕವಾಗಿ ಆನೆ ಎನ್ನುತ್ತಾ ಆದಿಮದ ಕಲ್ಪನೆಯಿಂದ ಗಜಾನನ ರೂಪವನ್ನು ಸಮರ್ಥಿಸಿದರೆ ಆತ ಬೇಟೆಯಿಂದ ಕೃಷಿ ಸಂಸ್ಕೃತಿಯವರೆಗೂ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಾನೆ . ಜನಪದರೊಂದಿಗೆ ಸ್ಥಾನ ಪಡೆಯುತ್ತಾನೆ .ಮಕ್ಕಳಿಂದ ವೃದ್ಧರವರೆಗೆ ಹೇಗೆ ತನ್ನ ಛಾಪನ್ನು ಒತ್ತಿ ಪ್ರಿಯನಾಗುತ್ತಾನೆಯೋ ಅಂತೆಯೇ ಸಮಷ್ಟಿಯಲ್ಲಿ ಅದ್ಭುತ ಜನಪ್ರಿಯತೆವುಳ್ಳ ದೇವರಾಗುತ್ತಾನೆ . ಈ ಮಂಗಳಮೂರ್ತಿಯ ಪೂಜೆಯ ಅಥವಾ ಉಪಾಸನಾ ಅವಧಿಯಲ್ಲಿ ಆತ್ಮೀಯನಾಗುತ್ತಾ ಗಾಢವಾಗಿ ನಮ್ಮನ್ನು ಅಂದರೆ ಆರಾಧಕರನ್ನು ಆವರಿಸುತ್ತಾನೆ .ಈಗ ಹೇಳಿ ,ಈ ಮೂರ್ತಿ ನಿರ್ಣಯದಲ್ಲಿ ಅಸಂಗತವಿದೆಯೇ ? ಎಂತಹ ದುಷ್ಟ ಮರ್ದನದಲ್ಲೂ ಬಳಸಬಹುದಾದ ಪ್ರಖರವಾದ ಆಯುಧ‌‌ ಧರಿಸಿದ್ದರೂ ಗಣಪತಿ ಮೂರ್ತಿ ಪರಿಪೂರ್ಣವಾಗಬೇಕಿದ್ದರೆ ಒಂದು ಕೈಯಲ್ಲಿ ಮೋದಕ ಇರಲೇ ಬೇಕು .ಇಲ್ಲಿಯೂ ಆಯುಧ - ಆಹಾರದ ಸಾಂಗತ್ಯ ಅಚ್ಚರಿ ಮೂಡಿಸುವಂತಹದ್ದೆ . ಗಾಣಪತೇಯರು ,ಆಧ್ಯಾತ್ಮಿಕ ಚಿಂತಕರು , ವೈದಿಕ ವಿದ್ವಾಂಸರು ಗಣಪನನ್ನು ಪ್ರಣವ ಸ್ವರೂಪನೆಂದೇ ಕೊಂಡಾಡಿದರು . ಮಣ್ಣಿನಿಂದ ತೊಡಗಿ ಬಾನೆತ್ತರಕ್ಕೆ ಹರಡಿಕೊಳ್ಳಬಲ್ಲ ವಿಸ್ತೃತ ವ್ಯಾಖ್ಯಾನ ನೀಡುತ್ತಾ ವಿರಾಟ್ ಗಣಪನನ್ನು ನಮ್ಮ ಮುಂದಿರಿಸಿದರು. ಹೀಗೆ ಗಣಪತಿ ಬಹುಪ್ರೀತ , ಬಹುಮಾನ್ಯ .ಕಿವಿ , ಹೊಟ್ಟೆಗಳ ವೈಶಾಲ್ಯದಲ್ಲಿ ಪ್ರಪಂಚ ವಿಶಾಲತೆಯನ್ನು ಪ್ರಕಟಿಸುತ್ತಾ ಈ ಕಾಲದ ದ್ವಂದ್ವ ಹಾಗೂ ವಿರೋಧಾಭಾಸದ ಪ್ರಾಪಂಚಿಕ ವ್ಯವಹಾರಗಳಿಗೆ ಉತ್ತರ ನೀಡುತ್ತಾನೆ.

ವಿಲಕ್ಷಣ ತಾಯಿ - ಮಗ
ಸ್ತ್ರೀ ತನ್ನ ಬಯಕೆಯನ್ನು ಪುರುಷಾವಲಂಬನೆ ಇಲ್ಲದೆ ನೆರವೇರಿಸಿಕೊಳ್ಳುತ್ತಾಳೆ , ಮಗುವನ್ನು ಪಡೆಯುತ್ತಾಳೆ .ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ .ಅಸೂಯೆಗೊಳ್ಳುತ್ತಾನೆ . ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ .ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ . ಆದರೆ ಪ್ರಕರಣ ಸುಖಾಂತ್ಯವಾಗುತ್ತದೆ . ಕತ್ತರಿಸಲ್ಪಟ್ಟ ತಲೆಗೆ ಆನೆಯ ಮುಖ ಜೋಡಿಸಿ ಮಗು ಗಜಾನನನಾಗುತ್ತಾನೆ.
ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ .ಇದು ಅನಿವಾರ್ಯವಾಗಿ ಅಲ್ಲ , ಪ್ರೀತಿಪೂರ್ವಕವಾಗಿ . ನಿಗ್ರಹಿಸಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ ,ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು .
ಎಷ್ಟೇ ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ ,ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ .ಈ ಪ್ರಪಂಚ ನಿಯಮ‌ ಗಣೇಶನ ಜನನದಲ್ಲಿ‌ ಸಹಜವಾಗಿ ಅನಾವರಣಗೊಳ್ಳುತ್ತದೆ .
ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆ‌ಯ ಸಂಕೇತವಾಗಿ ಗೌರಿ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ . ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೆ 'ಅಕಾಲ'ದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ .ಈ ಘಟನೆ ಭೂಮಿ - ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು-ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ . ಬೇಟೆಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಾನವ ಬದುಕಿನ‌ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ .ಇತಿಹಾಸ ಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ .ಅನಂತರ ಇಲಿಯ ಸಾಂಗತ್ಯ ಸಿಗುತ್ತದೆ . ಆದರೆ ಕೃಷಿಯೇ ಪ್ರಧಾನವಾದಾಗ ಗಣಪ ಬಹುವಾಗಿ ಪೂಜಿಸಲ್ಪಡುತ್ತಾನೆ .ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ - ದಾರುಶಿಲ್ಪಗಳಲ್ಲಿ ಲಭ್ಯ.

"ಸಾರ್ಪತ್ಯ ಆವೊಂದಿಪ್ಪೊಡು"
• ಜನಪದರ ಹೆಣ್ಣು ಮೈಸಗೆಯನ್ನು‌ ಶಿವ ಪ್ರೀತಿಸುವುದು .ತಾವರೆ ಹೂವಾಗುವುದು . ಗುಟ್ಟಿನಲ್ಲಿ ಜೊತೆಯಾಗುವುದು . ಮುಂದುವರಿಯುವ ಕತೆಯಲ್ಲಿ ಭಾಮಕುಮಾರನ ಜನನ .ಈತ ಗಜಮುಖನಾಗುವುದು ಪಾರ್ವತಿ ಮಗುವನ್ನು ಸಾಕುವುದು . ಪಾರ್ವತಿ ಸಹಜವಾಗಿ ಮೈಸಗೆಯನ್ನು ಸ್ವೀಕರಿಸುವುದು .ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು . ಅಲ್ಲೆಲ್ಲ ಗಣಪತಿ "ಸಾರ್ಪತ್ಯ ಆವೊಂದಿಪ್ಪೊಡು" ಎಂಬುದು ಶಿವನ ವರ . ಇದು ಭಾಮಕುಮಾರ ಸಂಧಿಯಲ್ಲಿ ಬರುವ ಕತೆ .
ಗಣಪನ ಹೊಟ್ಟೆ
• ಕಣಜ , ಕಣಜಕ್ಕೆ ಸುತ್ತುವ ಹಗ್ಗ ( ಪೆರ್ಮರಿ) ಇವು ಗಣಪತಿಯ ಹೊಟ್ಟೆ ಮತ್ತು ಹೊಟ್ಟೆಗೆ ಸುತ್ತಿದ ಸರ್ಪವನ್ನು ಸಾಂಕೇತಿಸುತ್ತವೆ . ಅಕ್ಕಿ - ಭತ್ತಕ್ಕೆ ಹಾಗೂ ಇತರ ಬೆಳೆಗಳಿಗೆ ಇಲಿಕಾಟ ಸಹಜ ( ಅರಿಬಾರ್ ಇತ್ತಿನಲ್ಪ ಎಲಿ ಪೆರ್ಗುಡೆ ಕಡಮೆನಾ ) . ಇಂತಹ ಆಹಾರದ ರಕ್ಷಣೆಗಾಗಿ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು . ಹೇಗಿದೆ ಜನಪದರ ಕಲ್ಪನೆ .
ಬೆಣಚುಕಲ್ಲಿನ 'ಬೆನಕ'
• ಗಣಪತಿ ಬೇಟೆ ಸಂಸ್ಕೃತಿಯ ಪ್ರತಿನಿಧಿ‌ : ಗಣಪನ ಮೂರ್ತಿ ಶಿಲ್ಪದಲ್ಲೆ ಪಾಚೀನತೆಯನ್ನು ಗುರುತಿಸುವ ಸಂಶೋಧಕರು ಇವನ ಅಸ್ತಿತ್ವಕ್ಕೆ ಅಥವಾ ಕಲ್ಪನೆಗೆ ಬೇಟೆ ಸಂಸ್ಕೃತಿಯಷ್ಟು ಪಾಚೀನತೆಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ .ಬೇಟೆ , ಬೇಟೆಗೆ ಬಳಸುತ್ತಿದ್ದ ಬೆಣಚುಕಲ್ಲು ಪ್ರಧಾನ ಆಯುಧ . ಇಲ್ಲಿಂದಲೇ ಬೆಣಚುಕಲ್ಲಿನಿಂದ "ಬೆನಕ" ಎಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು . ಈ ಶೈಲಿಯ ಪೂಜೆ ಈಗಲೂ ರೂಢಿಯಲ್ಲಿವೆ .ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ . ಬೇಟೆಯ ಕಾಲಘಟ್ಟದಲ್ಲಿ ಆನೆಯ ಕಲ್ಪನೆ ಬಂದಿರಬಹುದು .
ಶ್ರಮ ಸಂಸ್ಕೃತಿ
• ಶ್ರಮ ಸಂಸ್ಕೃತಿಯ ಸಂಕೇತವಾಗಿ ಗಣಪತಿ ಗುರುತಿಸಲ್ಪಡುವುದಿದೆ .ಶ್ರಮದಿಂದ ಮೈಬೆವರುತ್ತೆ , ಇದೇ ಮೈಯ ಮಣ್ಣಿಗೆ ಕಾರಣವಾಗುತ್ತದೆ .ಪಾರ್ವತಿಯ ಮೈಯ ಮಣ್ಣಿನಿಂದ ಗಣಪನ ಸೃಷ್ಟಿ .ಮಣ್ಣಿನ ಮಗನ ಕಲ್ಪನೆ ಎಷ್ಟು ಸುಂದರ .ಕಪಿಲ ವರ್ಣ , ಕಾವಿಬಣ್ಣ , ಮಣ್ಣಿನ ಬಣ್ಣ ,ಧೂಮ್ರವರ್ಣ , ಕಪ್ಪು - ಕೆಂಪು ಬಣ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೆ .ಇದು ವಿಘ್ನೇಶನ ಮೈ ಬಣ್ಣ . ಕೃಷಿ ಸಂಸ್ಕೃತಿ: "ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ ಪೂಜಿಸಿದರೆ" ಭೂಮಿಯ ಫಲವತ್ತತೆಗಾಗಿ ಸೆಗಣಿ - ಕೃಷಿಗೆ ಪೂರಕವಾಗಿ ಒದಗಿದ ಪಶುಪಾಲನೆ. ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಗಣಪತಿಯ ಕಲ್ಪನೆಯೊಂದಿದೆ . ಕಬ್ಬು ಪ್ರಧಾನವಾಗಿ ಆನೆಮುಖ ಹೊಂದಿರುವ ಸ್ವರೂಪದ ಆರಾಧನೆ . ಇವು ಜನಪದರ ಚಿಂತನೆಗಳು . (ಓದಿದ್ದು)
ಬರಹ :ಕೆ.ಎಲ್.ಕುಂಡಂತಾಯ