ನಡುವಣ ಲೋಕದ ನಡೆ - ಪುಸ್ತಕ ಬಿಡುಗಡೆ
ಕಾಪು : ಜಾನಪದ ಆರಾಧನೆಗಳಲ್ಲಿ ಮರೆಯಾಗುತ್ತಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಸಂಪ್ರದಾಯ ಮತ್ತು ಪರಂಪರೆಗಳನ್ನು ಕಾಪಿಡಲು ಕ್ಷೇತ್ರಕಾರ್ಯ ಆಧರಿತ ಕೆಲಸಗಳು ಇನ್ನಷ್ಟು ನಡೆಯಬೇಕು ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ. ಬಿ.ಜನಾರ್ದನ ಭಟ್ ಹೇಳಿದರು.
ಅವರು ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಜರಗಿದ ಕೆ.ಎಲ್.ಕುಂಡಂತಾಯರ "ನಡುವಣ ಲೋಕದ ನಡೆ - ದೈವಾರಾಧನೆ ನೆಲೆ ಕಲೆ" ಎಂಬ ಪುಸ್ತಕದ ದ್ವಿತೀಯ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳುನಾಡಿನಲ್ಲಿ ಬೆಳೆದಿರುವ ದೇವಾಲಯ ಸಂಸ್ಕೃತಿ, ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ದೈವಾರಾಧನೆ, ನಾಗಾರಾಧನೆ ಮುಂತಾದ ಶ್ರದ್ಧೆಗಳ ವಿಭಾಗಗಳಲ್ಲಿ ಅಧ್ಯಯನ ನಡೆಸಿ ಲೇಖನಗಳನ್ನು ಬರೆಯುತ್ತಿರುವ ಕುಂಡಂತಾಯರ ಕಾರ್ಯವನ್ನು ಭಟ್ ಶ್ಲಾಘಿಸಿದರು.
ಉದ್ಯಮಿ ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು "ನಡುವಣ ಲೋಕದ ನಡೆ" ಪುಸ್ತಕದ ದ್ವಿತೀಯ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.
ಎಲ್ಲೂರು ದೇವಳದ ಮಾಜಿ ಆಡಳಿತೆ ಮೊಕ್ತೇಸರ ಎಲ್ಲೂರು ಗುತ್ತು ಪ್ರಪುಲ್ಲ ಶೆಟ್ಟಿ, ಕುಂಜೂರು ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಗ್ರಾಮಪಂಚಾಯತ್ ಸದಸ್ಯ ಯಶವಂತ ಶೆಟ್ಟಿ, ದೇವಳದ ಪ್ರಬಂಧಕ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ, ಲೇಖಕ, ನಾಟಕಕಾರ ನಿವೃತ್ತ ಪ್ರಾಧ್ಯಾಪಕ ರಾಮದಾಸ ಕುಂಡಂತಾಯ, ನಿವೃತ್ತ ಬ್ಯಾಂಕ್ ಅಧಿಕಾರಿ ವಾಮನ ಕುಂಡಂತಾಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾ ಶಿಕ್ಷಕ ಡಾ.ರಾಧಾಕೃಷ್ಣ ಉಪಾಧ್ಯಾಯ ಮೂಡುಬೆಳ್ಳೆ ಹಾಗೂ ಡಾ. ಜನಾರ್ದನ ಭಟ್ ಅವರನ್ನು ಗೌರವಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್.
ಪ್ರಸ್ತಾವಿಸಿ ಸ್ವಾಗತಿಸಿದರು. ಸತೀಶ ಕುಂಡಂತಾಯ, ಭಾರ್ಗವ ಕುಂಡಂತಾಯ, ಶ್ರೀಕಾಂತ ಕುಂಡಂತಾಯ ಪಾಲ್ಗೊಂಡಿದ್ದರು. ಸತೀಶ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
