ಪುತ್ತಿಗೆ ಶ್ರೀಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ
Thumbnail
ಮಂಗಳೂರು : ಜಗತ್ತಿನೆಲ್ಲೆಡೆ ಕೃಷ್ಣ ಮಂದಿರಗಳನ್ನು ಸ್ಥಾಪಿಸಿ ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಭಕ್ತಿ ಸಿದ್ದಾಂತವನ್ನು ಜಗತ್ತಿನೆಲ್ಲೆಡೆ ಪ್ರಚಾರ ನಡೆಸಿದ ಹಾಗೆಯೇ ವಿಶ್ವ ಧಾರ್ಮಿಕ ನಾಯಕರ ಒಕ್ಕೂಟದ ಅಧ್ಯಕ್ಷರಾಗಿ ಎಲ್ಲಾ ಮತಗಳ ಸಮನ್ವಯತೆಯನ್ನು ಸಾಧಿಸಿದ ಹಿರಿಮೆಯ ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರೂಪುಗೊಳ್ಳುವ ಶಿಕ್ಷಣದಿಂದ ವ್ಯಕ್ತಿ ಯಶಸ್ಸಿ ಬದುಕು ಕಟ್ಟಲು ಸಾಧ್ಯ ಮತ್ತು ಸಚ್ಚಾರಿತ್ಯದಿಂದ ಕೂಡಿದ ಸಮಾಜ ಸಾಕಾರಗೊಳ್ಳುತ್ತದೆ. ಶಿಕ್ಷಣ ಆಧ್ಯಾತ್ಮಿಕ ತಳಹದಿ ಹೊಂದದಿರುವುದು ಇಂದಿನ ಅನೇಕ ಅವಾಂತರಗಳಿಗೆ ಕಾರಣ ಎನ್ನುತ್ತಾ ಶ್ರೀನಿವಾಸನ ಹೆಸರಿನಿಂದ ಬೆಳಗುತ್ತಿರುವ ವಿಶ್ವವಿದ್ಯಾಲಯವು ಮಹತ್ತರ ಸಾಧನೆಯನ್ನು ನಡೆಸುವಂತಾಗಲಿ ಎಂದು ಹರಸಿದರು. ಇನ್ನೋರ್ವ ಗೌರವ ಡಾಕ್ಟರೇಟ್ ಪುರಸ್ಕೃತ ಬೆಂಗಳೂರಿನ ಆಚಾರ್ಯ ಧನ್ವಂತ್ ಸಿಂಗ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಮೌಲ್ಯಗಳನ್ನು ಮೈಗೂಡಿಸಿ ಪ್ರಾಮಾಣಿಕ ಮತ್ತು ಸಮಗ್ರತೆಯ ಆಧಾರದಲ್ಲಿ ಬದುಕು ಕಟ್ಟಬೇಕು ಎಂದರು. ಶ್ರೀನಿವಾಸ ವಿ. ವಿ. ಯ ಉಪಕುಲಪತಿ ಡಾ. ಸಿ.ಎ. ರಾಘವೇಂದ್ರ ರಾವ್ ಪ್ರತಿಜ್ಞಾವಿಧಿ ಭೋಧಿಸಿದರು. ಸಹಕುಲಪತಿ ಡಾ.ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ಕುಲಪತಿ ಡಾ. ಪಿ.ಎಸ್. ಐತಾಳ ವಿ.ವಿ. ಯ ವಾರ್ಷಿಕ ವರದಿ ಮಂಡಿಸಿದರು. ಡಾ. ಶ್ರೀನಿವಾಸ ಮಯ್ಯ ಗೌರವ ಡಾಕ್ಟರೇಟ್ ಪತ್ರ ವಾಚಿಸಿದರು. ಆಡಳಿತ ಮಂಡಳಿಯ ಟ್ರಷ್ಟಿ ವಿಜಯಲಕ್ಷೀ ರಾವ್, ಪ್ರಾ. ಮಿತ್ರಾ ರಾವ್, ಡಾ. ಅಜಯ ಕುಮಾರ್, ಅದಿತ್ಯ ಕುಮಾರ್ ಉಪಸ್ಥಿತರಿದ್ದರು. ಕುಲಸಚಿವ ಡಾ. ಅನಿಲ್ ಕುಮಾರ್ ವಂದಿಸಿದರು. ಶ್ರೀನಿವಾಸ ವಿ. ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ರೋಹನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
18 Apr 2021, 04:17 PM
Category: Kaup
Tags: