ಡಿಸೆಂಬರ್ 10 : 'ಉತ್ತಮ ಶಿಕ್ಷಕರು ಅತ್ಯುತ್ತಮರಾಗುವುದು ಹೇಗೆ?' - ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲಿನಲ್ಲಿ ವಿಶೇಷ ಶೈಕ್ಷಣಿಕ ಉಪನ್ಯಾಸ
Thumbnail
ಕಾಪು : ಶಿಕ್ಷಕ ವೃತ್ತಿಯನ್ನು ಸಮಾಜದ ಶ್ರೇಷ್ಠ ವೃತ್ತಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೇಶದ ಭವಿಷ್ಯದ ಪ್ರಜೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಕೊಂಡೊಯ್ಯುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ. ಪರಿಣಾಮಕಾರಿ ಬೋಧನಾಕಲೆಯೂ ಶಿಕ್ಷಕ ವೃತ್ತಿಯ ಅಗತ್ಯತೆಗಳಲ್ಲೊಂದು. ಶಿಕ್ಷಕರು ಇನ್ನೂ ಒಳ್ಳೆಯ ರೀತಿಯಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧನೆ ಮಾಡುವುದರ ಕುರಿತು ಒಂದು ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮವನ್ನು ಕುತ್ಯಾರಿನ ಸೂರ್ಯ ಚೈತನ್ಯ ವಿದ್ಯಾಸಂಸ್ಥೆ ಡಿಸೆಂಬರ್ 10 ರ ಶುಕ್ರವಾರದಂದು ಹಮ್ಮಿಕೊಂಡಿದ್ದು ಉಪನ್ಯಾಸದ ವಿಷಯವು ' ಉತ್ತಮ ಶಿಕ್ಷಕರು ಅತ್ಯುತ್ತಮರಾಗುವುದು ಹೇಗೆ ' ಆಗಿರುತ್ತದೆ . ತಜ್ಞ ಉಪನ್ಯಾಸಕರಾಗಿ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಚಂದ್ರ ಆಚಾರ್ ಪಾಲ್ಗೊಳ್ಳುವರು. ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಉಪನ್ಯಾಸಕ ಶ್ರೀ ಚಂದ್ರ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸೂರ್ಯಚೈತನ್ಯ ಹೈಸ್ಕೂಲ್ ನ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ, ಶಿಕ್ಷಕವೃಂದ ಮತ್ತು ಪೋಷಕರು,‌ ವಿದ್ಯಾಭಿಮಾನಿಗಳು ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
02 Dec 2021, 10:53 AM
Category: Kaup
Tags: