ಕಾಪು : ಕಾಪು ಕ್ಷೇತ್ರ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ವಿವಿಧೋ ದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಕಾಪು ವೀರಭದ್ರ ದೇವಸ್ಥಾನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುಲೋಚನಾ ಪಾಲನ್ ಮಾತನಾಡಿ, ಸಂಘವು ವರದಿ ಸಾಲಿನಲ್ಲಿ ಸಂಘವು 37,11,600 ರೂ. ಪಾಲು ಬಂಡವಾಳ ಹೊಂದಿದ್ದು 13.65 ಕೋಟಿ ರೂ. ಠೇವಣಿ ಸಂಗ್ರಹಿಸಿ, 4.36 ಕೋಟಿ ರೂ. ಸಾಲ ವಿತರಿಸಿದೆ. 22 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದೆ. ಸಂಘವು ಸತತ ಲಾಭದಲ್ಲಿದ್ದು ಎ ಗ್ರೇಡ್ ಸಾಧನೆಗೈದಿದೆ. ಸಾಧನೆಗೆ ಠೇವಣಿದಾರರು, ನಿರ್ದೇಶಕರು, ಸಿಬಂದಿ ವರ್ಗ ಹಾಗೂ ಪಿಗ್ರಿ ಸಂಗ್ರಾಹಕರು ಮತ್ತು ಸಂಘದ ಸದಸ್ಯರ ಸಹಕಾರವೇ ಕಾರಣವಾಗಿದೆ ಎಂದರು.
ಸದಸ್ಯರಿಗೆ ಶೇ. 10 ಡಿವಿಡೆಂಡ್ ಘೋಷಿಸಲಾಯಿತು. ಸಹಕಾರಿ ಸಂಘಕ್ಕೆ ಅಧಿಕ ಠೇವಣಿ ಇಟ್ಟು ಸಂಘದ ಅಭಿವೃದ್ಧಿಗೆ ಸಹಕರಿಸಿದ ಸದಸ್ಯರಾದ ಅರುಣಾ ಗಂಗಾಧರ, ಜಾನಕಿ ಸದಾನಂದ್ ಅವರನ್ನು ಗೌರವಿಸಲಾಯಿತು. ಮೃತ ಪಟ್ಟಿರುವ ಸಹಕಾರಿ ಸಂಘದ ಮಹಿಳೆಯರ ಮಕ್ಕಳಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು. ಹೊಸದಾಗಿ ರಚನೆಗೊಂಡ ಗುಂಪುಗಳನ್ನು ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.
ಉಪಾಧ್ಯಕ್ಷೆ ಜಯಲಕ್ಷ್ಮೀ ಎಸ್. ಆಳ್ವ ನಿರ್ದೇಶಕರಾದ ಪುಷ್ಪಲತಾ ಗಣೇಶ್, ಅಪ್ಪಿಜೆ. ಕರ್ಕೇರ, ಶಿಲ್ಪಾಜಿ. ಸುವರ್ಣ, ಶೋಭಾ ಸಾಲ್ಯಾನ್, ಸರೋಜಾ ಆನಂದ್, ಮಾಲತಿ ದಿವಾಕರ್, ಸುಶ್ಮಿತಾ ಉಪಸ್ಥಿತರಿದ್ದರು.
ಸಂಘದ ಸಿಇಒ ಸಾವಿತ್ರಿ ಗಣೇಶ್ ಸ್ವಾಗತಿಸಿ, ವರದಿ ವಾಚಿಸಿದರು. ನಿರ್ದೇಶಕಿ ಅರುಣಾ ಕುಮಾರಿ ವಂದಿಸಿದರು.
