ರೋಟರಿ ಕಲ್ಯಾಣಪುರ : ಕರಾವಳಿಯಿಂದ ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಹುಲಿವೇಷದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶಿಸಿದ ಹರ್ಷೆಂದ್ರ ಆಚಾರ್ಯಗೆ ಸನ್ಮಾನ
Thumbnail
ಉಡುಪಿ : ಉಡುಪಿ ಕರಾವಳಿಯಿಂದ ಭಾರತದ ತುತ್ತ ತುದಿಯ ಕಾಶ್ಮೀರದವರೆಗೆ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ, ಅಲ್ಲಿ ಹುಲಿವೇಷದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶನಗೈದು ಮೆಚ್ಚುಗೆ ಗಳಿಸಿದ ವಿಶೇಷ ವ್ಯಕ್ತಿತ್ವದ ಹರ್ಷೆಂದ್ರ ಆಚಾರ್ಯ ಎಮ್ ಜಡ್ಡು ಬ್ರಹ್ಮಾವರ ಇವರನ್ನು ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಇತ್ತೀಚೆಗೆ ಗುರುತಿಸಿ ಅಭಿನಂದಿಸಲಾಯಿತು. ಉಡುಪಿಯಿಂದ ಬಹುತೇಕ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿ ಮಾರ್ಗಗಳ ಮುಖೇನ ದಿನಕ್ಕೆ ಸರಿ ಸುಮಾರು ಬೆಳಗಿನ 6 ಘಂ. ಯಿಂದ ಸಂಜೆ 6. ಘಂಟೆ ಯವರೆಗೆ ಕಾಲ್ನಡಿಗೆಯಲ್ಲಿ ಸಾಗುವ ಮೂಲಕ ಕಾಶ್ಮೀರವನ್ನು ಯಶಸ್ವಿಯಾಗಿ ತಲುಪಿ ಕಿರಿಯ ವಯಸ್ಸಿನ ಇವರ ಸಾಧನೆ ಅತ್ಯಂತ ಶ್ಲಾಘನೀಯ. ಸನ್ಮಾನ ಸ್ವೀಕರಿಸಿದ ಇವರು, ತನ್ನ ಮುಂದಿನ ದಿನಗಳಲ್ಲಿ ರಸ್ತೆ ಮಾರ್ಗವಾಗಿ ಸೈಕ್ಲಿಂಗ್ ಮೂಲಕ ಉಡುಪಿಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವ ಯೋಜನೆಗೆ, ಸಿದ್ದತೆ ಹಾಗೂ ಅಭ್ಯಾಸಕ್ಕೆ ಪ್ರೋತ್ಸಾಹ ಮಾಡುತ್ತಿರುವ ಕ್ಲಬ್ ನ ಸದಸ್ಯರು ಗಳಿಗೆ ಕ್ರತಜ್ಞತೆ ಸಲ್ಲಿಸಿದರು. ಅಧ್ಯಕ್ಷರಾದ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್, ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್, ವಲಯ ಸೇನಾನಿ ಬ್ರಯಾನ್ ಡಿಸೋಜ, ಮಾಜಿ ಸಹಾಯಕ ಗವರ್ನರ್ ಎಮ್ ಮಹೇಶ್ ಕುಮಾರ್ ನಿಯೋಜಿತ ಅಧ್ಯಕ್ಷೆ ಶಾರ್ಲೆಟ್ ಲೂವಿಸ್ ಮತ್ತಿತರ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಲೆನ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.
20 Mar 2022, 09:23 AM
Category: Kaup
Tags: