ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ : ವಾರ್ಷಿಕ ಸಮ್ಮಿಲನ ಮಿನದನ
ಗರಡಿಯ ಧಾರ್ಮಿಕತೆಯಲ್ಲಿ ಹಿರಿಯರು ಕಿರಿಯರನ್ನು ಜೊತೆಗೂಡಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಗತ್ಯ ಎಂದು ಓಟ್ಲ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಧರ್ಮದರ್ಶಿ ಜನಾರ್ದನ ಬಂಗೇರ ಹೇಳಿದರು.
ಪಾಂಗಾಳ ಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ ಇದರ ನಾಲ್ಕನೇ ವರ್ಷದ ವಾರ್ಷಿಕ ಸಮ್ಮಿಲನ ಮಿನದನ 2020- 21 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ಪ್ರಾಚ್ಯವಸ್ತು ಸಂಗ್ರಹಾಲಯದ ಅಧ್ಯಕ್ಷರಾದ ಪ್ರೊ. ತುಕಾರಾಮ ಪೂಜಾರಿ ಯುವಜನರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿಸುವಲ್ಲಿ ಮಾಧ್ಯಮದ ಪಾತ್ರ, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ ಗರಡಿಗಳಲ್ಲಿ ಮಾಯಂದಾಲ್ ಆಚರಣೆ, ಪಾಂಗಾಳ ಗುಡ್ಡೆ ಗರಡಿ ಸುಧಾಕರ ಡಿ. ಅಮೀನ್ ಗರೋಡಿ ಮತ್ತು ಸಮುದಾಯದ ನಡುವೆ ಸಾಮರಸ್ಯ ಮೂಡಿಸುವಲ್ಲಿ ಗುರಿಕಾರರ ಪಾತ್ರದ ಬಗ್ಗೆ ವಿಚಾರ ಮಂಡಿಸಿದರು.
ಸನ್ಮಾನ : ಹಿರಿಯ ಬೈದರ್ಕಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡ, ಚಂದ್ರಕಾಂತ ಯಾನೆ ಕಾಂತು ಪೂಜಾರಿ ಕಲ್ಲುಗುಡ್ಡೆ, ಬೈದರ್ಕಳ ಪೂಜಾ ಪೂಜಾರಿ ವಿಶ್ವನಾಥ್ ಅಮೀನ್ ಕಳತ್ತೂರು, ಸಾಧಕ ಸುರೇಂದ್ರ ಮೋಹನ್ ರನ್ನು ಸನ್ಮಾನಿಸಲಾಯಿತು.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಂಗಾಳ ಗುಡ್ಡೆ ಗರಡಿಯ ಆಡಳಿತ ಮೊಕ್ತೇಸರ ಶೇಖರ ಜಿ. ಅಮೀನ್, ಗರಡಿ ಗುರಿಕಾರ ಜಯ ಡಿ. ಅಮೀನ್, ವಿವಿಧ ಗರಡಿಗಳ ಪ್ರಮುಖರು ಉಪಸ್ಥಿತರಿದ್ದರು.
ಸಂಘಟಕ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಸ್ವಾಗತಿಸಿ, ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಪ್ರಸ್ತಾವನೆಗೈದರು. ಯಶ್ ಅಮೀನ್ ಪಾಂಗಾಳ ಗುಡ್ಡೆ ಗರಡಿ ವಂದಿಸಿ, ಪಾಂಡು ಕೋಟ್ಯಾನ್ ಮತ್ತು ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
