ಸುಳ್ಳು ಆರೋಪ ಹೊರಿಸಿದವರನ್ನು ಸತ್ಯ ಪ್ರಮಾಣಕ್ಕಾಗಿ ಆಹ್ವಾನಿಸಿದ ಶಂಕರ್ ಶಾಂತಿ
Thumbnail
ಬ್ರಹ್ಮಾವರ : ಕಾಳಿಕಾಂಬಾ ದೇವಸ್ಥಾನದೊಳಗೆ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿಲ್ಲ ಎನ್ನುವ ಮೊಕ್ತೇಸರ ಶ್ರೀಧರ ಆಚಾರ್ಯ ಅವರು ಹೇಳಿರುವ ಹೇಳಿಕೆಯನ್ನು ಸಾಮಾಜಿಕ ಕಾರ್ಯಕರ್ತ ಶಂಕರ ಶಾಂತಿ ಅವರು ಸಂಪೂರ್ಣ ಸುಳ್ಳಿನ ಆರೋಪವೆಂದು ಬಲವಾಗಿ ಖಂಡಿಸಿದ್ದು, ಇವಾಗ ಅವರು ಉಡುಪಿ, ದಕ್ಷಿಣ ಕನ್ನಡದ ಕಾರಣಿಕ ಕ್ಷೇತ್ರಗಳ ದೈವ ದೇವರುಗಳಲ್ಲಿ ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ಕಚ್ಚೂರು ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತ ಶಂಕರ್ ಶಾಂತಿ ಯವರಿಗೆ ಕಾಳಿಕಾಂಬಾ ದೇವಸ್ಥಾನದೊಳಗೆ ಹಲ್ಲೆಯಾಗಿದೆ ಎನ್ನುವ ವಿಚಾರ ಹರಿದಾಡುತ್ತಿದ್ದು ಇದು ಆಧಾರ ರಹಿತವಾಗಿದೆ. ಈ ಘಟನೆಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ, ಅನಾವಶ್ಯಕವಾಗಿ ವಿಶ್ವಕರ್ಮ ಸಮಾಜದ ಮೇಲೆ ಆರೋಪ ಮಾಡುತ್ತಿರುವುದು, ನಮ್ಮ ಸಮಾಜದ ಯುವಕರ ಮೇಲೆ ಕೇಸು ದಾಖಲಿಸಿರುವುದು ಸರಿಯಲ್ಲ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಮಾ.5, ರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ಗಾಯಾಳಾಗಿ ಚಿಕಿತ್ಸೆ ಪಡೆಯುತ್ತಿರುವ, ಸಾಮಾಜಿಕ ಕಾರ್ಯಕರ್ತ ಶಂಕರಶಾಂತಿ ಅವರು, ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಹಲ್ಲೆ ನಡೆಸಿ,ನಮ್ಮ ದೇವಸ್ಥಾನದಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ದೇವಸ್ಥಾನದ ಒಂದನೇ ಹಾಗೂ 3 ನೇ ಆಡಳಿತ ಮೊಕ್ತೇಸರ ಸುಳ್ಳು ಹೇಳಿಕೆ ಪತ್ರಿಕೆಗೆ ನೀಡಿರುತ್ತಾರೆ. ಈ ವಿಷಯದಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯಲ್ಲಿ ಇಡೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿಯನ್ನು ಸತ್ಯ ಪ್ರಮಾಣಕ್ಕೆ ಕರೆಯುತ್ತಿದ್ದೇನೆ. ಕಾಳಿಕಾಂಬೆ ಹಾಗೂ ಕಲ್ಕುಡ ಸನ್ನಿಧಿಯಲ್ಲಿ ಸತ್ಯ ಪ್ರಮಾಣ ನಡೆಯಲಿ, ತಾವು ಬಾರದೆ ಇದ್ದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಹಾಗೂ ಶಂಕರನಾರಾಯಣ ಕಲ್ಕುಡ ದೈವದಲ್ಲಿ ಇಡೀ ಕಾಳಿಕಾಂಬ ದೇವಸ್ಥಾನದ ವಿರುದ್ಧ ಹುಯಿಲು (ದೂರು)ಕೊಡುತ್ತೇನೆಂದು ಹೇಳಿದ್ದಾರೆ.
06 Mar 2021, 08:19 PM
Category: Kaup
Tags: