ಕುತ್ಯಾರು : ಜಲಜೀವನ್ ಮಿಷನ್ ವತಿಯಿಂದ ವಿಶೇಷ ಗ್ರಾಮಸಭೆ, ಕಿರುಚಿತ್ರ ಪ್ರದರ್ಶನ, ಜಲಮೂಲ ಸಂರಕ್ಷಣಾ ಕಾರ್ಯಕ್ರಮ
Posted On:
02-07-2021 11:19AM
ಕಾಪು : ನೀರು ಜನರ ಜೀವನದ ಮೂಲ. ನೀರಿದ್ದರೇ ಜೀವನ. ನೀರಿಲ್ಲದ ಭವಣೆ ತೀರಿಸಲೆಂದೇ ಬಂದಿದೆ ಜಲಜೀವನ ಮಿಷನ್ ಎಂದು ಜೆಜೆಎಮ್ ನ ಐಇಸಿ ಎಕ್ಸ್ ಪರ್ಟ್ ನೇತ್ರಾವತಿ ಅವರು ತಿಳಿಸಿದರು.
ಕುತ್ಯಾರು ಗ್ರಾಮಪಂಚಾಯತ್ ನಲ್ಲಿ ಜಲಜೀವನ್ ಮಿಷನ್ ವತಿಯಿಂದ ವಿಶೇಷ ಗ್ರಾಮಸಭೆ, ಕಿರುಚಿತ್ರ ಪ್ರದರ್ಶನ ಹಾಗೂ ಜಲಮೂಲ ಸಂರಕ್ಷಣಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ನೇತ್ರಾವತಿ ಇವರು, ಮನೆ ಮನೆಗೆ ಗಂಗೆ ಕಾರ್ಯಕ್ರಮದ ಮಹತ್ವ , ಅದರ ಉಪಯೋಗಗಳು, ಸಮುದಾಯದ ವಂತಿಗೆ ಕುರಿತಂತೆ ಸವಿವರವಾಗಿ ವಿವರಿಸಿದರು.
ಬಿರುಬೇಸಿಗೆ, ಮಾನವ ನಿರ್ಮಿತ ಪರಿಸ್ಥಿತಿಗಳಿಂದಾಗಿ ಅಂತರ್ಜಲ ಕುಗ್ಗುತ್ತಿದ್ದು, ಹನಿ ಹನಿ ನೀರಿಗೂ ತತ್ವಾರ ಶುರುವಾಗುವಂತಿದೆ. ಜನ, ಜಾನುವಾರು ನೀರಿಗಾಗಿ ಹಾಹಾಕಾರ ಏಳುವ ಮುನ್ನವೇ, ಈ ಸಮಸ್ಯೆಗೆ ಪರಿಹಾರವಾಗಿ ಮನೆಮನೆಗೆ ಗಂಗೆಯನ್ನೇ ಹರಿಸಲು ಜಲಜೀವನ್ ಮಿಷನ್ ಬಂದಿದೆ. ಇದರ ಸದುಪಯೋಗವನ್ನು ಎಲ್ಲಾ ಗ್ರಾಮಸ್ಥರು ಪಡೆದುಕೊಳ್ಳಬೇಕು. ಸಮುದಾಯದ ವಂತಿಗೆಯನ್ನು ಹೊರೆ ಎಂದು ಭಾವಿಸದೇ, ಇದರ ಉಪಯೋಗಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುತ್ಯಾರು ಪಂಚಾಯತ್ ನ ಸರ್ವ ಸದಸ್ಯರು , ಪಿಡಿಓ ಹಾಗೂ ಜೆಜೆಎಮ್ ನ ಅಭಿಯಂತರರಾದ ರಂಜಿತ್ ಪೂಜಾರಿ ಉಪಸ್ಥಿತರಿದ್ದರು.