ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉದ್ಯೋಗ ತರಬೇತಿ ಸಹಯೋಗದ ಪರಸ್ಪರ ಒಡಂಬಡಿಕೆ ಕಾರ್ಯಕ್ರಮ

Posted On: 13-05-2022 08:23PM

ಶಿರ್ವ : ಸಂತ ಮೇರಿಸ್ ಕಾಲೇಜು,ಶಿರ್ವ ಮತ್ತು ಉನ್ನತಿ ಕ್ಯಾರಿಯರ್ ಅಕಾಡೆಮಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಪರಸ್ಪರ ಒಡಂಬಡಿಕೆಯು ಎರಡು ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಿತು.

ನಮ್ಮ ದೇಶದಲ್ಲಿ ಶೇಕಡಾ ೫೦ರಷ್ಟು ಜನರು ೩೫ ವರ್ಷಕ್ಕಿಂತ ಸಣ್ಣವರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಲಭಿಸುವುದು ಕಷ್ಟಸಾಧ್ಯವಾಗಿದೆ. ಯುವಜನರ ಉದ್ಯೋಗದ ಸಾಮಾರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದರೆ ಅಯಾ ಉದ್ಯೋಗಗಳ ಹಿನ್ನಲೆಯಲ್ಲಿ ಸೂಕ್ತ ತರಬೇತಿಯು ಅತ್ಯಂತ ಅಗತ್ಯವಾಗಿದೆ. ತಾಂತ್ರಿಕತೆ ಇಂದು ಎಲ್ಲಾರಂಗಗಳಲ್ಲಿ ವ್ಯಾಪಕವಾಗಿರುವ ಕಾರಣ ಅದರ ಅಗತ್ಯವೂ ಇದೆ ಆದುದರಿಂದ ಈ ಎಲ್ಲಾ ವಿಷಯಗಳನ್ನು ಉನ್ನತಿ ಕ್ಯಾರಿಯರ್ ಅಕಾಡಮಿಯು ಒಬ್ಬ ಅಭ್ಯರ್ಥಿಗೆ ಒದಗಿಸುವಲ್ಲಿ ಉತ್ತಮ ರೀತಿಯ ಪ್ರಯತ್ನವನ್ನು ಮಾಡುತ್ತಾಬಂದಿದೆ ಇದರ ಸದುಪಯೋಗ ವಿದ್ಯಾರ್ಥಿಗಳಿಗೆ ಒದಗುವಂತಾಗಲಿ ಎಂದು ಅಕಾಡೆಮಿಯ ಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೊಂದು ಚಾರಿತ್ರಿಕ ದಾಖಲೆ, ಮುಂದಿನ ದಿನಗಳಲ್ಲಿ ಪದವಿಯ ಜೊತೆಗೆ ವೃತ್ತಿಕೌಶಲ್ಯ ತರಬೇತಿಯೂ ದೇಶ-ವಿದೇಶಗಳಲ್ಲಿ ಅಗತ್ಯವಾಗಿದೆ. ಪ್ರಸ್ತುತ ಉದ್ಯೊಗ ಒಂದು ಪ್ರಾಥಮಿಕ ಅಗತ್ಯವಾಗಿದೆ. ಸಂತ ಮೇರಿ ಕಾಲೇಜಿನ ವಿದ್ಯಾರ್ಥಿಗಳು ಸಮಾಜದಲ್ಲಿ ಯಾವ ಕಾರಣಕ್ಕೆ ಉತ್ತಮರು ಎಂಬ ಪ್ರಶ್ನೆಗೆ ನಮ್ಮ ಕಾಲೇಜಿನಲ್ಲಿ ಸಂಘಟಿಸುವ ತರಬೇತಿ ಕಾರ್ಯಕ್ರಗಳು ಆಗಿವೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಪ್ರಶಂಸೆ ಮಾತುಗಳನ್ನು ಕಾಲೇಜಿನ ಪ್ರಾಶುಂಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ ರವರು ವ್ಯಕ್ತಪಡಿಸಿದರು.

ನವೀನ್ ನಾಯಕ್ ರವರು ಒಡಂಬಡಿಕೆಯ ಮುಖ್ಯಾಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗೂ ಪರಿಪೂರ್ಣ ಮಾಹಿತಿಯನ್ನು ತರಬೇತಿಯ ರೂಪದಲ್ಲಿ ನೀಡಿದರು.ಪ್ರಿಯಾಂಕ ಪ್ರಾರ್ಥಿಸಿ, ಕಾಲೇಜಿನ ಉದ್ಯೋಗ ಮಾಹಿತಿ ಘಟಕದ ಸಂಯೋಜಕಿ ತನುಜಾ ಸುವರ್ಣ ಸ್ವಾಗತಿಸಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ.ಪ್ರವೀಣ್ ಕುಮಾರ್ ಪ್ರಸ್ತಾವನೆಗೈದರು. ಆಕಾಂಕ್ಷ ನಿರೂಪಿಸಿ, ರೊಯ್‌ಸ್ಟನ್ ವಂದಿಸಿದರು.