ಕಾಪು ಶ್ರೀ ಹೊಸಮಾರಿಗುಡಿ : ಸನ್ಮಾನ ಸಮಾರಂಭ
ಕಾಪು : ಇಲ್ಲಿನ ಶ್ರೀ ಹೊಸಮಾರಿಗುಡಿಯ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವಾ ಕರ್ತವ್ಯವನ್ನು ನಿರ್ವಹಿಸುತ್ತಿರುವ ಹತ್ತು ಜನರನ್ನು ವ್ಯವಸ್ಥಾಪನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿಯವರು ಮಾತನಾಡಿ, ಅಮ್ಮನ ಆಲಯದಲ್ಲಿ ಸುಧೀರ್ಘ ಸಮಯದಿಂದ, ಪೌರೋಹಿತ್ಯದಿಂದ ಮೊದಲ್ಗೊಂಡು ಸ್ವಚ್ಛತೆಯ ತನಕದ ಸೇವೆಯಲ್ಲಿ ತೊಡಗಿ, ಮಾರಿಗುಡಿಯನ್ನು ದೇಶದ ಪ್ರಧಾನ ಶ್ರದ್ಧಾ ಕೇಂದ್ರವನ್ನಾಗಿ ರೂಪಿಸುವಲ್ಲಿ ಕಾರಣಕರ್ತರಾಗಿದ್ದೀರಿ, ನಿಮ್ಮ ಕರ್ತವ್ಯ ನಿಷ್ಠೆ ಆದರ್ಶಪ್ರಾಯವಾದುದು ಎಂಬ ಸಂದೇಶವನ್ನು ನೀಡಿದರು.
ಹೊಸಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಯವರು ಮಾತನಾಡಿ, ತಮ್ಮ ನಿಸ್ವಾರ್ಥ ಸೇವೆಗೆ ಅಮ್ಮನ ಅನುಗ್ರಹವಿರಲಿ, ಮುಂದೆಯೂ ಇಂತಹ ಸೇವಾ ಮನೋಭಾವನೆ ತಮ್ಮಲ್ಲಿ ಇರಲಿ. ಅಭಿವೃದ್ಧಿ ಸಮಿತಿಯನ್ನು ಜೊತೆ ಸೇರಿಸಿಕೊಂಡು ಆಯೋಜಿಸಿ ನೀಡಿದ ಈ ಸನ್ಮಾನ ಪ್ರಶಂಸನೀಯವಾದುದು ಎಂದು ಹೇಳಿದರು.
ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ, ಉಚ್ಚಂಗಿ ಗುಡಿಯ ಅರ್ಚಕರಾದ ರಾಘು ಗೌಡ, ಕಾರ್ಯಾಲಯ ಪ್ರಮುಖರಾದ ಗೋವರ್ಧನ ಸೇರಿಗಾರ, ಲಕ್ಷ್ಮಣ ಶೆಟ್ಟಿ, ಸಂತೋಷ ಶೆಟ್ಟಿ, ವಾದನ ಸೇವೆಯಲ್ಲಿ ತೊಡಗಿಕೊಂಡಿರುವ ಲೋಕು ಸೇರಿಗಾರ್, ವಾಸು ಸೇರಿಗಾರ್, ಚಂದ್ರಶೇಖರ ಸೇರಿಗಾರ್, ಸ್ವಚ್ಛತಾ ಸೇವೆಯಲ್ಲಿ ತೊಡಗಿಕೊಂಡಿರುವ ರಾಧಾ ಹಾಗೂ ಮಾರಿಗುಡಿಯ ಗೊಂಬೆ ತಯಾರಕರಾಗಿದ್ದ ವಾಮನ ಆಚಾರ್ಯ ಇವರೆಲ್ಲರೂ ಗೌರವಿಸಲಾಯಿತು.
ಸಮಾರಂಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರು, ಮನೋಹರ ರಾವ್ ಕಲ್ಯಾ, ಜಯಲಕ್ಷ್ಮಿ ಎಸ್.ಶೆಟ್ಟಿ, ಚರಿತ ದೇವಾಡಿಗ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಸಾಂಸ್ಕೃತಿಕ ಸಮಿತಿಯ ನಿರ್ದೇಶಕರಾದ ಮಾಧವ ಆರ್.ಪಾಲನ್ ಸ್ವಾಗತಿಸಿದರು. ದಂಡತೀರ್ಥ ವಿದ್ಯಾಸಂಸ್ಥೆಯ ಶಿಕ್ಷಕ ಶಿವಣ್ಣ ಬಾಯರ್ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು .
