ಉಡುಪಿ : ಅಲೆವೂರು ಗ್ರಾಮ ಪಂಚಾಯತ್ ಕೊರಂಗ್ರಪಾಡಿ ಮೂರನೇ ವಾರ್ಡ್ ನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಪಾಲನ್ ರವರು 67 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು
ಮನೆ ಮನೆ ಭೇಟಿ ಮಾಡಿ ಶತಪ್ರಯತ್ನ ಮಾಡಿದರೂ ಯಶಸ್ವಿಯಾಗಿಲ್ಲ. ನಮ್ಮ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಇದು ಎಲ್ಲ ಕಾಂಗ್ರೆಸ್ಸಿಗರಿಗೆ ಸ್ಪಷ್ಟವಾದ ಸೂಚನೆ ಜನ ಕಾಂಗ್ರೆಸ್ ಪರವಾಗಿಲ್ಲವೆಂಬುದು. ಅಲ್ಲದೆ ಅಲೆವೂರು ಪಂಚಾಯತ್ ಆಡಳಿತ ಎಷ್ಟು ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದು ಇದರಿಂದ ತಿಳಿಯುತ್ತಿದೆ. ಅಲೆವೂರು ಪಂಚಾಯತ್ ಆಡಳಿತ ಜನಮರುಳು ಮಾಡುತ್ತ ವ್ಯರ್ಥ ಕಾಲಹರಣ ಮಾಡುತ್ತಿದೆ. ಜನತೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡೆಸುವುದು ಬಿಟ್ಟು ಜನವಿರೋಧಿ ಆಡಳಿತ ನಡೆಸಿದುದರ ಪರಿಣಾಮವೂ ಈ ಫಲಿತಾಂಶಕ್ಕೆ ಸ್ವಲ್ಪ ಮಟ್ಟಿನ ಕಾರಣವಾಗಿದೆ. ಒಟ್ಟಾರೆ ಕಾಂಗ್ರೆಸ್ ಮುಳುಗುವ ಹಡಗು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ಇದು ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹೇಳಿದ್ದಾರೆ.