ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ರೋಟರಿ ಕ್ಲಬ್ ಪದಗ್ರಹಣ ; ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಗೀತಾ ಅರುಣ್

Posted On: 04-07-2022 07:30PM

ಪಡುಬಿದ್ರಿ : ಸ್ನೇಹ ಮತ್ತು ಏಕತೆಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಆರಂಭಗೊಂಡಿರುವ ರೋಟರಿಯು ಮುಂದೆ ಸೇವೆ ಮತ್ತು ವಿಭಿನ್ನತೆಯಲ್ಲಿ ಏಕತೆಯೊಂದಿಗೆ ಒಗ್ಗೂಡಿ ಮುನ್ನಡೆಯುತ್ತಿದೆ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲೆ ಡಾ| ಪ್ರೀತಿ ಮೋಹನ್ ಹೇಳಿದರು. ಅವರು ಶನಿವಾರ ಪಡುಬಿದ್ರಿಯ ರೋಟರಿ ಕ್ಲಬ್ ಪಡುಬಿದ್ರಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾದ ಗೀತಾ ಅರುಣ್ ಅವರ ಪದಗ್ರಹಣ ಸಮಾರಂಭದ ಪದಪ್ರಧಾನ ಅಧಿಕಾರಿಯಾಗಿ ಮಾತನಾಡಿದ ಅವರು, ಸಮುದಾಯದ ಅವಶ್ಯಕತೆಗಳನ್ನು ಗ್ರಹಿಸಿ ಜನಸೇವೆಗೈಯ್ಯವುದೇ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಧ್ಯೇಯವಾಗಿದೆ ಎಂದರು.

ಸ್ಪಂದನಾ ಗೃಹಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತಾಡಿದ ವಲಯ ಸೇನಾನಿ ವಿಘ್ನೇಶ್ ಶೆಣೈ ನೂತನ ಪಡುಬಿದ್ರಿ ರೋಟರಿ ತಂಡಕ್ಕೆ ಶುಭ ಹಾರೈಸಿದರು. ನೂತನ ಅಧ್ಯಕ್ಷೆಯಾಗಿ ಪದಗ್ರಹಣವನ್ನು ಮಾಡಿದ ಗೀತಾ ಅರುಣ್ ತಮ್ಮ ತಂಡದ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಪಡುಬಿದ್ರಿ ರೋಟರಿ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆಯನ್ನು ವಹಿಸಿ ತನ್ನ ಒಂದು ವರ್ಷದ ಅವಧಿಯಲ್ಲಿ ತನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. ಇಂಟರ್ಯಾಕ್ಟ್ ಕ್ಲಬ್ಬಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ದಿ| ವೈ. ಹಿರಿಯಣ್ಣ ಮತ್ತು ದಿ| ಮೀರಾ ಹಿರಿಯಣ್ಣ ಸ್ಮಾರಕ ರೋಲಿಂಗ್ ಶೀಲ್ಡನ್ನು ಎರ್ಮಾಳು ಬಡಾ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗವು ತನ್ನದಾಗಿಸಿಕೊಂಡಿತು. ಪ್ರತಿಭಾವಂತ ಯುವ ಸಾಧಕರಾಗಿರುವ ರೂಪಾ ವಸುಂಧರ ಆಚಾರ್ಯ, ಸ್ವಾತಿ ಗಣೇಶ್, ವೈಷ್ಣವಿ ರಾವ್, ಸುಶ್ಮಿತಾ ದೇವಾಡಿಗ, ಧನುಷ್ ಸಾಲ್ಯಾನ್, ಯಶಸ್ವಿನಿ ಭಂಡಾರಿ, ಶ್ಲಾಘ ಸಾಲಿಗ್ರಾಮ ಅವರನ್ನು ಸಮ್ಮಾನಿಸಲಾಯಿತು. ಸಂಸ್ಥೆಗೆ ನೂತನ ಸದಸ್ಯರನ್ನಾಗಿ ರಂಜನಿ, ಸುನಿಲ್ ಕುಮಾರ್, ಗಣೇಶ್ ಶೆಟ್ಟಿಗಾರ್ ಹಾಗೂ ದಿನೇಶ್ ಪೂಜಾರಿ ಅವರನ್ನು ಅತಿಥಿಗಳು ಸೇರ್ಪಡೆಗೊಳಿಸಿದರು.

ಮಹಮ್ಮದ್ ನಿಯಾಜ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಬಿ. ಎಸ್. ಆಚಾರ್ಯ ವರದಿ ವಾಚಿಸಿದರು. ಯಶೋದಾ ಹಾಗೂ ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು