ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ಮುನ್ನೆಚ್ಚರಿಕೆ ವಹಿಸಿ, ಅವಘಡ ತಪ್ಪಿಸಿ - ಉಸ್ತುವಾರಿ ಸಚಿವ ಎಸ್.ಅಂಗಾರ

Posted On: 08-07-2022 05:15PM

ಉಡುಪಿ : ಪ್ರಸಕ್ತ ಮಳೆಗಾಲದಲ್ಲಿ ಯಾವುದೇ ಜೀವ ಹಾಗೂ ಜಾನುವಾರು ಹಾನಿಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ ಅವಘಢಗಳು ನಡೆಯದಂತೆ ತಪ್ಪಿಸಬೇಕೆಂದು ಅಧಿಕಾರಿಗಳಿಗೆ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿವೃಷ್ಠಿಯಿಂದಾಗಿ ಮನೆಗಳು ಹಾನಿ ಉಂಟಾದ ಸಂದರ್ಭದಲ್ಲಿ ನಷ್ಠ ಪರಿಹಾರ ಅಂದಾಜಿಸುವಾಗ ಹಾನಿಯ ವಸ್ತುಸ್ಥಿತಿಯನ್ನು ವೈಜ್ಞಾನಿಕವಾಗಿ ಅಂದಾಜಿಸಿ ಗ್ರಾಮ ಲೆಕ್ಕಿಗರು ಪ್ರಾಥಮಿಕ ವರದಿಯನ್ನು ಸಲ್ಲಿಸಬೇಕು. ಅದರ ಆಧಾರದ ಮೇಲೆ ಹಾನಿಯ ಪ್ರಮಾಣವನ್ನು ಇಂಜಿನಿಯರ್ ಗಳು ನಿರ್ಧರಿಸುವುದು ಸೂಕ್ತ ಎಂದರು.

ಕೆಲವೊಮ್ಮೆ ಮಳೆಯ ನೀರಿನಿಂದ ಮನೆಗಳ ತಳಪಾಯಗಳು ಹಾನಿಯಾದಲ್ಲಿ ಅಂತಹ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕಾಗುತ್ತದೆ ಅವು ದುರಸ್ಥಿಗೆ ಯೋಗ್ಯವಾಗಿರುವುದಿಲ್ಲ ಇಂತಹವುಗಳನ್ನು ಅಂದಾಜಿಸುವಾಗ ಹಾನಿಯು ಸೂಕ್ಷ್ಮತೆಯನ್ನು ಆಧರಿಸಿ ವರದಿ ನೀಡಬೇಕಾಗುತ್ತದೆ ಎಂದರು. ಮಳೆಯ ನೀರು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಂತು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ ಈ ರಸ್ತೆಗಳ ಬದಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆಯನ್ನು ಮಾಡಬೇಕು. ರಾತ್ರಿ ವೇಳೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲು ಹೆದ್ದಾರಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿದಿಂದ ಹಲವು ಬಾರಿ, ರಸ್ತೆಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸೂಚನೆಗಳನ್ನು ನೀಡಿದ್ದರೂ ಯಾವುದೇ ಕ್ರಮಗಳು ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ ಸಾರ್ವಜನಿಕರಿಂದ ಈ ಬಗ್ಗೆ ಹೆಚ್ಚಿನ ದೂರುಗಳು ಸಹ ಬರುತ್ತಿವೆ. ಸಭೆಗೆ ಹಾಜರಾಗಲೂ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಹಾಜರಾಗದೇ ಗುತ್ತಿಗೆದಾರರ ಇಂಜಿನಿಯರ್ ಗಳು ಹಾಜರಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಅಸಮರ್ಪಕ ನಿರ್ಮಾಣದಿಂದ ರಸ್ತೆ ಅಪಘಾತಗಳು ಉಂಟಾದಲ್ಲಿ ಸಂಬಂಧಿಸಿದ ಇಂಜಿನಿಯರ್ ಮೇಲೆ ಕಾನೂನು ಪ್ರಕರಣಗಳನ್ನು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಯಾವುದೇ ಕಟ್ಟಡ ಸೇರಿದಂತೆ ಮತ್ತಿತರೆ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನಿರ್ಮಾಣ ಸ್ಥಳದ ವಸ್ತು ಸ್ಥಿತಿಗನುಗುಣವಾಗಿ ನೀಲಿ ನಕ್ಷೆಯನ್ನು ತಯಾರಿಸಿ ಕಾಮಗಾರಿ ಕೈಗೊಂಡಾಗ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಈ ಬಗ್ಗೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾನ್ಸೂನ್ ಮಳೆಗಾಲದಲ್ಲಿ ಕಡಲ ಕೊರೆತ ಉಂಟಾಗಿ ಸಾರ್ವಜನಿಕರು ಜನಪ್ರತಿನಿಧಿಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವುದು ಹಲವು ವರ್ಷಗಳಿಂದ ಸಾಮಾನ್ಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವಾಗಿದ್ದು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಡಕ್ ಫೂಟ್ ಅಥವಾ ಸೀ ವೇವ್ ಬ್ರೇಕ್ ತಂತ್ರಜ್ಞಾನ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆಗೆ ಕರಾವಳಿ ಭಾಗದ ಎಲ್ಲಾ ಸಚಿವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ ಎಂದರು. ಪೂರ್ಣ ಪ್ರಮಾಣದ ಮನೆಹಾನಿಗೊಳಗಾದವರಿಗೆ ಎನ್.ಡಿ.ಆರ್ಎಫ್ ನಿಯಮಾವಳಿಯನ್ವಯ ಪರಿಹಾರದ ಮೊತ್ತದ ಜೊತೆಗೆ ನೂತನ ಗೃಹ ನಿರ್ಮಾಣಕ್ಕೆ ವಸತಿ ಯೋಜನೆಯಡಿ ಸೌಲಭ್ಯವನ್ನು ಒದಗಿಸಿ ಶಾಶ್ವತ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಹೆಚ್ಚಾಗಿ ಸಿಡಿಲು ಪ್ರಕರಣಗಳು ಬಯಲು ಪದೇಶ ಹೊಂದಿರುವ ಕಾರ್ಕಳ ತಾಲೂಕಿನಲ್ಲಿ ಸಂಭವಿಸುತ್ತಿವೆ. ಕಳೆದ 5 ವರ್ಷಗಳಿಂದ ಉಂಟಾಗಿರುವ ಇಂತಹ ಪ್ರಕರಣಗಳ ಮಾಹಿತಿಗಳನ್ನು ಕ್ರೋಢಿಕರಿಸುವುದರೊಂದಿಗೆ ತಜ್ಞರಿಂದ ವರದಿಯನ್ನು ತಯಾರಿಸಿ, ಸಿಡಿಲಿನಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ 2 ಮನೆಗಳು ಪೂರ್ಣ ಪ್ರಮಾಣದಲ್ಲಿ, 48 ಮನೆಗಳು ಭಾಗಶಃ ಹಾನಿಗೊಳಗಾಗಿವೆ . ಜನವರಿಯಿಂದ ಈವರೆಗೆ ಸಿಡಿಲು ಬಡಿತಕ್ಕೆ 1 ಮಾನವ ಜೀವ ಹಾನಿ, 2 ಜಾನುವಾರು ಹಾನಿ, ಪೂರ್ಣ ಪ್ರಮಾಣದ ಮನೆ ಹಾನಿ 10 ಆಗಿದ್ದು, 189 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿರುತ್ತದೆ . ಜಿಲ್ಲೆಯಲ್ಲಿ ಈವರೆಗೆ 10.63 ಕೋಟಿಯಷ್ಟು ಅಂದಾಜು ನಷ್ಠ ವಾಗಿದ್ದು, ಮೂಲ ಸೌಕರ್ಯಗಳಾದ ರಸ್ತೆ, ಸೇತುವೆ, ವಿದ್ಯುತ್ ಸರಬರಾಜು ಪರಿಕರಗಳು,ಸರ್ಕಾರಿ ಕಟ್ಟಡಗಳು ಸೇರಿದಂತೆ ಮತ್ತಿತರೆ ಅಂದಾಜು 11.99 ಕೋಟಿಯಷ್ಟು ನಷ್ಠ ಉಂಟಾಗಿರುತ್ತದೆ.

ಸಭೆಯಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ವಿಷ್ಣುವರ್ಧನ್, ಡಿಎಫ್ಓ ಆಶೀಶ್ ರೆಡ್ಡಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.