ಮೂಳೂರು ಹಿಂದು ರಕ್ಷಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಕಷಾಯ ವಿತರಣೆ ; ಸರ್ವಧರ್ಮೀಯರ ಸಹಿತ ಸುಮಾರು 1,200ಕ್ಕೂ ಅಧಿಕ ಮಂದಿ ಸ್ವೀಕಾರ
Posted On:
28-07-2022 06:27PM
ಕಾಪು : ಮೂಳೂರು ಹಿಂದು ರಕ್ಷಾ ವೆಲ್ ಫೇರ್ ಟ್ರಸ್ಟ್ ನ ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ ಜುಲೈ 28 ರಂದು ಹಾಲೆ ಮರದ ತೊಗಟೆಯ ಕಷಾಯವನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.
ಹಿಂದು ರಕ್ಷಾ ವೆಲ್ಫೇರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ. ಪಿ. ಮಾತನಾಡಿ, ತುಳುನಾಡ ಸಂಸ್ಕೃತಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆಯು ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಅತ್ಯಂತ ಮಹತ್ವವನ್ನು ಪಡೆದಿದೆ. ಆಟಿ ಅಮಾವಾಸ್ಯೆಯ ದಿನ ಹಾಲೆ ಮರದ ತೊಗಟೆಯಲ್ಲಿ ಔಷಧೀಯ ಗುಣಧರ್ಮ ಹೆಚ್ಚಾಗಿರುವದನ್ನು ಸಂಶೋಧನೆಯ ಮೂಲಕ ಧೃಢಪಡಿಸಿದೆ. ಈ ಧಾರ್ಮಿಕ ಆಚರಣೆಯನ್ನು ನಿರಂತರವಾಗಿರಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಆಟಿ ಕಷಾಯ ವಿತರಿಸಿಕೊಂಡು ಬರಲಾಗುತ್ತಿದೆ ಎಂದರು.
ಮೂಳೂರು ಪಡು ಹಳೆ ಭಜನಾ ಮಂದಿರ ಮತ್ತು ಮಹಾಲಕ್ಷ್ಮೀ ನಗರದ ಬಳಿ ಬೆಳಿಗ್ಗೆ 6ರಿಂದ ಕಷಾಯದ ವಿತರಣೆ ಮಾಡಲಾಗಿದ್ದು, ಸರ್ವಧರ್ಮೀಯರ ಸಹಿತ ಸುಮಾರು 1,200ಕ್ಕೂ ಅಧಿಕ ಮಂದಿ ಹಾಳೆ ಮರದ ತೊಗಟೆಯಿಂದ ತಯಾರಿಸಿದ ಮದ್ದನ್ನು ಸ್ವೀಕರಿಸಿದರು. ಕೈಪುಂಜಾಲು, ಕಾಪು, ಪೊಲಿಪು, ಎರ್ಮಾಳು, ಉಚ್ಚಿಲ, ಪಣಿಯೂರು, ಮೂಳೂರು ಮತ್ತಿತರ ಪ್ರದೇಶಗಳಿಂದ ಆಗಮಿಸಿ ಮದ್ದು ಪಡೆದುಕೊಂಡಿದ್ದಾರೆ. ಸ್ಥಳೀಯರಾದ ಸಂಜೀವ ಆರ್ ಅಮೀನ್ ಸಹಕಾರದೊಂದಿಗೆ ಟ್ರಸ್ಟ್ ನ ಸದಸ್ಯರು ಜೊತೆ ಸೇರಿ ಹಾಲೆ ಮರದ ಕೆತ್ತೆಯಿಂದ ಕಷಾಯವನ್ನು ಸಿದ್ಧಪಡಿಸಿದ್ದರು.
ಮೂಳೂರು ಹಿಂದು ರಕ್ಷಾ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಚಂದ್ರಕಾಂತ್ ಕೆ. ಮೆಂಡನ್, ಗೌರವ ಸಲಹೆಗಾರ ಅಶೋಕ್ ಪುತ್ರನ್, ಉಪಾಧ್ಯಕ್ಷ ಪ್ರದೀಪ್ ಎಸ್. ಪುತ್ರನ್, ದಿನೇಶ್ ಪಾನಾರ, ಸಂಜೀವ ಅಮೀನ್, ಸುಖೇಶ್ ಡಿ,. ಪ್ರತೀಕ್ ಸುವರ್ಣ, ನಾಗೇಶ್, ಮಧುಕಿರಣ್ ಶ್ರೀಯಾನ್, , ಸುನಿಲ್ ಕರ್ಕೇರ, ಪತ್ರಕರ್ತರಾದ ಬಾಲಕೃಷ್ಣ ಪೂಜಾರಿ, ವಿಜಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.