ನಿರರ್ಗಳ ವಾಕ್ಚಾತುರ್ಯದ ಮೂಲಕ ಗಮನ ಸೆಳೆಯುವ ಬಾಲ ಪ್ರತಿಭೆ ಜೀವಿಕಾ ವಿಶ್ವನಾಥ್ ಶೆಟ್ಟಿ, ಪೇತ್ರಿ
Posted On:
21-09-2022 11:59PM
ನಾವು ಏನು ಮಾಡಬೇಕೆಂದಿರುತ್ತೇವೆಯೋ ಅದನ್ನು ಕ್ರಮಬದ್ಧವಾಗಿ, ವಿಶಿಷ್ಟವಾಗಿ, ಶಿಸ್ತಿನಿಂದ, ಕ್ರಿಯಾಶೀಲತೆಯಿಂದ ಯಶಸ್ವಿಯಾಗಿ ಮಾಡಿದಾಗಲೇ ಅದು ಸಾಧನೆ ಎನ್ನಿಸಿಕೊಳ್ಳುತ್ತದೆ. ಪ್ರತಿಭೆ ಮತ್ತು ಪ್ರಯತ್ನಗಳು ನಿರಂತರವಾಗಿ ಏಕಮುಖವಾಗಿ ಸಾಗಿದರೆ ಸಾಧನೆ ಸಾಧಿತವಾಗುತ್ತದೆ. ಬದುಕಿಗೆ ಅತ್ಯುಕೃಷ್ಟ ಸಂಸ್ಕಾರ ನೀಡಿ ಸಮಾಜದಲ್ಲಿ ಗೌರವವನ್ನು ತಂದುಕೊಡಬಲ್ಲ ಕಲೆಗಳು ನಮ್ಮ ಬದುಕಿನಲ್ಲಿ ಬೆರೆತಾಗ ಬದುಕಿಗೆ ಮಾನ್ಯತೆ ದೊರಕುತ್ತದೆ. "ಕಲೆಯನ್ನು ಮನುಷ್ಯರ ಆಲೋಚನೆಯ ವಿಶೇಷ ಸಾಮರ್ಥ್ಯವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಕಲೆಯನ್ನು ಯೋಚನೆ ಮತ್ತು ಭಾವನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸೃಜಿಸಲಾಗುತ್ತದೆ" ಎಂದು ದಾರ್ಶನಿಕರು ಅಭಿಪ್ರಾಯ ಪಡುತ್ತಾರೆ. ಯಾವುದೇ ಕಲೆಯು ಕುತೂಹಲದಿಂದ ಆರಂಭವಾಗಿ ಪರಿಣತಿ, ಮತ್ತು ಪರಿಪೂರ್ಣತೆಯೆಡೆಗೆ ಸಾಗುತ್ತದೆ. ಸಂಪೂರ್ಣ ಪರಿಪೂರ್ಣತೆ ಎಂಬುದು ಸಾಧ್ಯವಾಗದಿದ್ದರೂ ಪರಿಪೂರ್ಣತೆಯೆಡೆಗೆ ಸಾಗುವ ಪ್ರಕ್ರಿಯೆಯು ಅಭಿವ್ಯಕ್ತಿಸುವ ಕಲಾವಿದರಿಗೂ ಅನುಭವಿಸುವ ಕಲಾಭಿಮಾನಿಗಳಿಗೂ ಭಾವನ್ಮಾತಕ ಅನುಭೂತಿಯನ್ನೂ, ಭಾವಪರವಶತೆಯನ್ನೂ ತಂದೊಡ್ಡುತ್ತದೆ. ಪ್ರತಿಭೆಗಳು ಅನಾವರಣಗೊಳ್ಳಲು ಅವಕಾಶಗಳು ಲಭಿಸಬೇಕು. ಲಭಿಸಿದ ಅವಕಾಶವನ್ನು ಜಾಣ್ಮೆ, ಪ್ರೌಢಿಮೆ, ನೈಪುಣ್ಯತೆ, ಚಾಕಚಕ್ಯತೆ, ಕಲಾತ್ಮಕತೆ, ಪ್ರತ್ಯುತ್ಪನ್ನಮತಿತ್ವ, ವಾಕ್ಚಾತುರ್ಯದಿಂದ ಬಳಸಿಕೊಳ್ಳಬೇಕು. ಮುಂಬಯಿಯ ಬಾಲಕಿ ಜೀವಿಕಾ ವಿಶ್ವನಾಥ್ ಶೆಟ್ಟಿ ಅವರು ಹೀಗೆ ಸಿಕ್ಕಿದ ಅವಕಾಶಗಳನ್ನು ಚೆನ್ನಾಗಿ, ಸೊಗಸಾಗಿ ಬಳಸಿಕೊಂಡವರು . ಜೀವಿಕಾ ಅವರು ಭಾಷಣ, ಏಕಪಾತ್ರಾಭಿನಯ, ಭಗವದ್ಗೀತಾ ಶ್ಲೋಕ ಪಠಣ, ನಾಟಕಾಭಿನಯ, ಭಾಷಾ ಪರೀಕ್ಷೆ, ನಿರೂಪಣೆ ಇತ್ಯಾದಿಗಳಲ್ಲಿ ಪರಿಣತರು.
ಜೀವಿಕಾ ಅವರು ತಮ್ಮ ಬಾಲ್ಯದಿಂದಲೂ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ತುಳುಕನ್ನಡಿಗರ ಚಿಣ್ಣರ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಅಹೋರಾತ್ರಿ ಶ್ರಮಿಸುತ್ತಿರುವ ಏಕೈಕ ಕಾರ್ಯಪ್ರವೃತ್ತ ಬೃಹತ್ ಸಂಸ್ಥೆ ’ಚಿಣ್ಣರ ಬಿಂಬ’ ಮುಂಬಯಿ. ಜೀವಿಕಾ ಚಿಣ್ಣರ ಬಿಂಬದ ಪ್ರತಿಭಾವಂತ ವಿದ್ಯಾರ್ಥಿ. ಭಾಷಣ ಸ್ಪರ್ಧೆಯಲ್ಲಿ ಏಳು ಸಲ ಪ್ರಥಮ ಮತ್ತು ಎರಡು ಸಾರಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಏಕ ಪಾತ್ರಾಭಿನಯದಲ್ಲಿ ನಾಲ್ಕು ಸಲ ಮೊದಲ ಮತ್ತು ಎರಡು ಸಾರಿ ಎರಡನೆಯ ಬಹುಮಾನ ಗಳಿಸಿದವರು. ಭಗವದ್ಗೀತಾ ವಾಚನದಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡವರು. ಕಿರು ನಾಟಕ ಅಭಿನಯದಲ್ಲಿ ಎರಡು ಸಾರಿ ಪ್ರಥಮ ಹಾಗೂ ಎರಡು ಸಾರಿ ದ್ವಿತೀಯ ಸ್ಥಾನವನ್ನು ಗಳಿಸಿದವರು. ಬೃಹನ್ಮುಂಬಯಿ ಮಹಾನಗರ ಪಾಲಿಕೆ ಆಯೋಜಿತ ಮರಾಠಿ ಭಾಷಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದವರು. ಚಿಣ್ಣರ ಬಿಂಬದ ಪ್ರಥಮ ತರಗತಿಯಲ್ಲಿರುವಾಗಲೇ ದೇಶಭಕ್ತಿಯನ್ನು ಸಾರುವ ’ಅಮರ ವೀರರು’ ನಾಟಕದಲ್ಲಿ ರೊಚ್ಚುಕೆಚ್ಚುಗಳ ಸ್ವಾತಂತ್ಯ ವೀರ, ಆಂಗ್ಲರಿಗೆ ಸಿಂಹಸಪ್ನವಾಗಿದ್ದ ತಾಯಿ ಭಾರತಿಯ ವೀರಗುವರ ಎಂಟೆದೆಯ ಬಂಟ
’ಭಗತ್ ಸಿಂಗ’ರ ಪಾತ್ರದಲ್ಲಿ ಪರಕಾಯ ಪ್ರವೇಶಮಾಡಿದ ಅಭಿನಯವು ನಾಟಕ ರಸಿಕರನ್ನೂ, ಕಿಕ್ಕಿರಿದ ಸಭಿಕರನ್ನು ಮಂತ್ರಮುಗ್ಧಗೊಳಿಸಿತ್ತು. ಈ ಅಭಿನಯನಕ್ಕೆ ಪ್ರಥಮ ಸ್ಥಾನ ದಕ್ಕಿಸಿಕೊಂಡವರು.
ತನ್ನ ಏಳನೆ ವರ್ಷ ಪ್ರಾಯದಲ್ಲಿ ಬಂಟರ ಸಂಘ ಮುಂಬಯಿ ಪ್ರಾಯೋಜಿತ ಮಾಸಿಕ ’ಬಂಟರವಾಣಿ’ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದವರು. ಈ ಭಾಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಮುಕ್ಕಾಲು ಲಕ್ಷ ವೀಕ್ಷಕರು ವೀಕ್ಷಿಸಿ ಪ್ರಶಂಸಿದ್ದಾರೆ. ವಸಾಯಿ ಕರ್ನಾಟಕ ಸಂಘದವರು ಅಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಬಂಟರ ಸಂಘದ ಜೋಗೇಶ್ವರಿ ದಹಿಸರ್ ವಿಭಾಗದವರು ಏರ್ಪಡಿಸಿದ್ದ ಏಕಪಾತ್ರಾಭಿನಯದಲ್ಲಿ ಪ್ರಥಮ. ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ವಿಶ್ವಬಂಟರ ಸಮ್ಮೇಳನದ ನಾಟಕ ಸ್ಪರ್ಧೆಯಲ್ಲಿ ನಟಿಸಿರುವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯಕುಮಾರ್ ಶೆಟ್ಟಿಯವರು ಬರೆದು ನಿರ್ದೇಶಿಸಿರುವ ’ಈ ಬಾಲೆ ನಮ್ಮವು’ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಮುಂಬಯಿ ತುಳುಕನ್ನಡಿಗ ನಾಟಕ ಪ್ರಿಯರ ಮನಸ್ಸು ಗೆದ್ದವರು. ಖ್ಯಾತ ಅರ್ಥಧಾರಿ, ಮೃದು ಮಧುರ, ಮಾತುಗಳ ಸರದಾರ ಕೀರ್ತಿಶೇಷ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರ ಸಂಧಾನದ ಕೃಷ್ಣನ ಪಾತ್ರವನ್ನು ಮರುಸೃಜಿಸಿ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಹಳೆಗನ್ನಡದ ಪದ್ಯಗಳೊಂದಿಗೆ ನಿರರ್ಗಳವಾಗಿ ಅರ್ಧ ಗಂಟೆ ಮಾತಿನ ಮಂಟಪ ಅನಾವರಣಗೊಳಿಸಬಲ್ಲರು ಜೀವಿಕಾ. ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರು ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಜೀವಿಕಾ ಅವರು ಶ್ರೀಮತಿ ಚಿತ್ರಾ ಶೆಟ್ಟಿ ಹಾಗೂ ಪೇತ್ರಿ ವಿಶ್ವನಾಥ ಶೆಟ್ಟಿಯವರ ದ್ವಿತೀಯ ಸುಪುತ್ರಿ. ಇವರ ಅಕ್ಕ ಇಶಿಕಾ ಶೆಟ್ಟಿ. ಪೇತ್ರಿ ವಿಶ್ವನಾಥ ಶೆಟ್ಟಿಯವರು ಮುಂಬಯಿ ಸಾಹಿತ್ಯ ವಲಯದಲ್ಲಿ ಕವಿಯಾಗಿ, ಕತೆಗಾರರಾಗಿ, ಸಂಘಟಕರಾಗಿ, ವಾಗ್ಮಿಯಾಗಿ ಚಿರಪರಿಚಿತರು. ಸಾಹಿತಿ ತಂದೆ, ಕಲಾಭಿಮಾನಿ ತಾಯಿಯವರ ಸ್ಪೂರ್ತಿ, ಪ್ರೇರಣೆ, ಪ್ರೋತ್ಸಾಹ, ಮಾರ್ಗದರ್ಶನಗಳು ಜೀವಿಕಾ ಅವರಿಗೆ ಬಾಲ್ಯದಿಂದ ನಿರಂತರ ದೊರೆಯುತ್ತ ಬಂದಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಜೀವಿಕಾ ಅವರು ಶಾಲಾ ವಿದ್ಯಾಭ್ಯಾಸದಲ್ಲೂ ತಮ್ಮ ಸ್ಥಾನವನ್ನು ಕಾಯ್ದುಕೊಂಡವರು. ಹತ್ತನೆ ತರಗತಿಯಲ್ಲಿ 87% ಅಂಕಗಳನ್ನು ಗಳಿಸಿದ್ದಾರೆ. ತುಳು, ಕನ್ನಡ, ಮರಾಠಿ, ಹಿಂದಿ, ಆಂಗ್ಲ ಭಾಷೆಗಳನ್ನು ನಿರರ್ಗಳವಾಗಿ, ಅರಳು ಹುರಿದಂತೆ ಮಾತನಾಡಬಲ್ಲರು. ಜೀವಿಕಾ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೆ ಸಾಲಿನ ವಿಶೇಷ "ಬಾಲ ಪ್ರತಿಭಾ ಪುರಸ್ಕಾರ" ಲಭಿಸಿದೆ. ಕನ್ನಡ ಕಲಾ ಕೇಂದ್ರ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರಿಂದ ಸುವರ್ಣಶ್ರೀ ಪ್ರಶಸ್ತಿ ಪಡೆದಿದ್ದಾರೆ. ಬಂಟರ ಸಂಘದ ಗೌರವ ಸನ್ಮಾನಕ್ಕೆ ಪಾತ್ರರಾಗಿರುವ ಜೀವಿಕಾ ಅವರ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಸಾಧನೆಗಳ ಹಾದಿಯಲ್ಲಿ ಉಲ್ಲಾಸದ ಹೂಮಳೆ ಸುರಿಯಲಿ. ಭವಿತವ್ಯದ ಬದುಕು ಸರಳ, ಸುಂದರ, ಸುಲಲಿತ, ಸುಮಧುರವಾಗಲಿ.
ಲೇಖನ: ಉದಯ ಶೆಟ್ಟಿ, ಪಂಜಿಮಾರು