ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಹಾಲು ಉತ್ಪಾದಕರ ಸಂಘದ ಮಹಾಸಭೆ, ಸನ್ಮಾನ

Posted On: 24-09-2022 11:09PM

ಇನ್ನಂಜೆ : ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಇನ್ನಂಜೆ ದಾಸ ಭವನದಲ್ಲಿ ಜರಗಿತು. ಈ ಸಂದರ್ಭ ಮಾತನಾಡಿದ ಅವರು ಸದಸ್ಯರು ಉತ್ತಮ ಗುಣ ಮಟ್ಟದ ಮತ್ತು ಹೆಚ್ಚು ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸಿದ್ದರಿಂದ ನಮ್ಮ ಸಂಘವು ಉಡುಪಿ ತಾಲೂಕಿನಲ್ಲಿಯೇ ಅತ್ಯುತ್ತಮ ಸಂಘವಾಗಿ ಮೂಡಿ ಬಂದಿದೆ. ಮುಂದೆಯೂ ಇದೇ ರೀತಿಯ ಬೆಂಬಲದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.

ಒಕ್ಕೂಟದ ಪಶು ವೈದ್ಯಾಧಿಕಾರಿ ಪ್ರಶಾಂತ್ ಮಾತನಾಡಿ ಲಾಭದಾಯಕ ಹೈನುಗಾರಿಕೆ ಬಗ್ಗೆ ರಾಸುವಿನ ಆರೋಗ್ಯದ ದೃಷ್ಟಿಯಲ್ಲಿ ಪ್ರತಿದಿನ ಖನಿಜ ಲವಣ ಮಿಶ್ರಣ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಾಮೂಹಿಕ ಜಂತುಹುಳದ ಔಷಧಿಯನ್ನು ನೀಡಲು, ಸದಸ್ಯರಿಗೆ ತಿಳಿಸಿದರು. ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಅನುದಾನದ ಬಗ್ಗೆ ಹಾಲಿನ ಗುಣಮಟ್ಟದ ಬಗ್ಗೆ ವಿಸ್ತರಣಾಧಿಕಾರಿ ಯಶವಂತ್ ತಿಳಿಸಿದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ, ಕೆ.ಎಂ.ಎಫ್. ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ. ಅಶೋಕ್ ರವರ ಸಮ್ಮುಖದಲ್ಲಿ ಸಂಘದ ಸಕ್ರಿಯ ಹಿರಿಯ ಸದಸ್ಯರಾದ ರಾಘು ಶೆಟ್ಟಿ, ಶ್ರೀನಿವಾಸ ಕೋಟ್ಯಾನ್ ಮತ್ತು ಪ್ರಭಾವತಿ ಪೂಜಾರ್ತಿ ಇವರನ್ನು ಸರ್ವ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ. 85 ಕ್ಕಿಂತ ಅಂಕಗಳಿಸಿದ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘವು 2021-2022 ಸಾಲಿನಲ್ಲಿ ನಿವ್ವಳ ಲಾಭ ರೂ. 7,18,247.40 ಗಳಿಸಿದ್ದು ಶೇ 15 ಡಿವಿಡೆಂಡ್ ಘೋಷಿಸಲಾಯಿತು. ಪ್ರಸಕ್ತ ಸಾಲಿನಲ್ಲ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ರೂ. 3,08, 828.26 ಬೋನಸ್ಸು ಹಾಗೂ ಶೇ 1 ರಂತೆ ರೂ. 91, 288 ಪ್ರೋತ್ಸಾಹಧನ ನೀಡಲಾಯಿತು.

ಅಧಿಕ ಹಾಲು ಸರಬರಾಜು ಮಾಡಿದ ಆಶಾ ಪ್ರಥಮ, ರಾಘವೇಂದ್ರ ಉಪಾಧ್ಯಾಯ ದ್ವಿತೀಯ ಮತ್ತು ಸುನೀತಾ ಶೆಟ್ಟಿ ತೃತೀಯ ಬಹುಮಾನವನ್ನು ಪಡೆದರು. ಸಂಘದ ನಿರ್ದೇಶಕರಾದ ಆರ್.ಎಲ್.ಉಪಾಧ್ಯಾಯ, ರಾಮ ಕೆ. ಶೆಟ್ಟಿ, ನಾಗರಾಜ ಮುಚ್ಚಿನ್ನಾಯ, ಸುಮತಿ ಪಿ.ಅಂಚನ್, ಉದಯ ಜಿ, ಶಿವರಾಮ ಶೆಟ್ಟಿ, ಜಯ ಕೆ. ಪೂಜಾರಿ , ಉಮೇಶ್ ಆಚಾರ್ಯ, ಬೇಬಿ ಎಂ.ಪೂಜಾರಿ ಮತ್ತು ಪದ್ಮ ಮುಖಾರ್ದಿ ಉಪಸ್ಥಿತರಿದ್ದರು. ಸಂಘದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಎಸ್. ಭಟ್‌ ರವರು ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.