ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ ದಸರಾಗೆ ತೆರೆ ; ಹೆಲಿಕಾಪ್ಟರ್ ಪುಷ್ಪವೃಷ್ಟಿ ; ಗಂಗಾರತಿಯೊಂದಿಗೆ ನವದುರ್ಗೆಯರ ಜಲಸ್ಥಂಭನ

Posted On: 06-10-2022 11:10AM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಜರಗಿದ ದಸರಾ - 2022 ಶೋಭಾಯಾತ್ರೆಯು ನವದುರ್ಗೆಯರ ಮೂರ್ತಿ ಸಹಿತ 75ಕ್ಕೂ ಮಿಕ್ಕಿ ಸ್ತಬ್ಧ ಚತ್ರಗಳ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಾವಿರಾರು ಭಕ್ತರು ಈ ವೈಭವದ ಶೋಭಾಯಾತ್ರೆಗೆ ಸಾಕ್ಷಿಯಾದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಮೂಲಕ ದೇವಾಲಯ, ನವದುರ್ಗೆಯರ ಸಹಿತ ಸ್ಥಬ್ದ ಚಿತ್ರಗಳಿಗೆ ಪುಷ್ಪವೃಷ್ಟಿಗೈಯಲಾಯಿತು.

ಶೋಭಾಯಾತ್ರೆಯಲ್ಲಿ ಸ್ತಬ್ಧ ಚಿತ್ರಗಳು, ಹುಲಿವೇಷ ತಂಡಗಳು, ದ್ವಿಚಕ್ರ ವಾಹನದಲ್ಲಿ ಸಾಗಿದ ಯುವಕರು, ಯುವಕರ ನೃತ್ಯದ ಮೂಲಕ ಮೆರುಗು ನೀಡಿತು. ಕೆಲವು ಕಡೆಗಳಲ್ಲಿ ರಸಮಂಜರಿ ಕಾರ್ಯಕ್ರಮದ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಜನರು ಕಾದು ಕುಳಿತಿದ್ದರು.

ಉಚ್ಚಿಲದಿಂದ ಪಡುಬಿದ್ರಿ ಮಾರ್ಗವಾಗಿ ಹೆಜಮಾಡಿ ಟೋಲ್ ಗೇಟಿಗೆ ತಲುಪಿ ಅಲ್ಲಿಂದ ನೇರವಾಗಿ ಕಾಪು ಲೈಟ್ ಹೌಸ್ ಸಮೀಪದ ಕಡಲಕಿನಾರೆಯಲ್ಲಿ ನವದುರ್ಗೆಯರಿಗೆ ಗಂಗಾರತಿ ಸಲ್ಲಿಸಿ ನವದುರ್ಗೆಯರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು.