ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆ - ಉಡುಪಿ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

Posted On: 23-10-2022 06:27PM

ಉಡುಪಿ : ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಯ ಉಡುಪಿ ಜಿಲ್ಲಾ ಕಾರ್ಯಾಲಯ ಸಂತೆಕಟ್ಟೆ ಹಳೆಯ ಡೈಲಿ ನೀಡ್ಸ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಭಾನುವಾರ ಸಮಿತಿಯ ಗೌರವಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಾಲಯವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸಮಾಜಸೇವಕರಾದ ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಬಹಳ ವರ್ಷದಿಂದ ರಾಮ ಮಂದಿರ ಆಗಬೇಕು ಅದನ್ನು ನಾವೆಲ್ಲರೂ ನೋಡಬೇಕು ಎನ್ನುವುದೇ ನಮ್ಮ ಎಲ್ಲರ ಆಶಯ. ಅಲ್ಲಿಗೆ ಹೋಗಲಿಕ್ಕೆ ಆಗದಿದ್ದರೂ ಜಿಲ್ಲೆಗೆ ಬರುವ ದಿಗ್ವಿಜಯ ಯಾತ್ರೆಯಲ್ಲಿ ಭಾಗವಹಿಸುವುದೇ ನಮ್ಮ ಭಾಗ್ಯ ಎಂದರು. ಹಣದ ಹಿಂದೆ ಓಡುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಹೊಸ ಪೀಳಿಗೆಗೆ ಜಾಗೃತಿ ಹುಟ್ಟಿಸುವ ಕೆಲಸ ಆಗಲಿ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಿತಿಯ ಗೌರವಾಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿಯವರು ಮಾತನಾಡಿ ತುಳುನಾಡಿನ ಜನತೆ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ದೈವ ದೇವರುಗಳು ಯಾವುದೇ ಒಂದು ಪಕ್ಷಕ್ಕೆ ಆಗಲಿ ಒಂದು ಜಾತಿಗಾಗಲಿ ಸೀಮಿತ ಅಲ್ಲ. ಎಲ್ಲ ಪಕ್ಷದವರು ಎಲ್ಲಾ ಜಾತಿಯವರು ಒಟ್ಟುಗೂಡಿ ಮಾಡುವಂತಹ ಒಂದು ಶಕ್ತಿ. ಈ ನಿಟ್ಟಿನಲ್ಲಿ ನವೆಂಬರ್ 7‌ನೇ ತಾರೀಕಿನಂದು ನಡೆಯುವ ಶ್ರೀರಾಮನ ದಿಗ್ವಿಜಯ ಯಾತ್ರೆಯಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದರು.

ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಪ್ರಮುಖರಾದ ತಾರ ಉಮೇಶ್ ಆಚಾರ್ಯ, ಮನೋಹರ್ ಶೆಟ್ಟಿ ತೋನ್ಸೆ, ಕೃಷ್ಣ ದೇವಾಡಿಗ ಕಲ್ಯಾಣಪುರ, ಕರುಣಾಕರ್ ಸಾಲ್ಯಾನ್, ಪ್ರಭಾಕರ ಪೂಜಾರಿ, ಗೀತಾ ರವಿ ಶೇಟ್, ಸಂಧ್ಯಾ ರಮೇಶ್, ರಾಮ ಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ರಾಧಕೃಷ್ಣ ಮೆಂಡನ್ ನಿರೂಪಿಸಿದರು.