ಚಂದ್ರನಗರ : ಕಾಪು ತಾಲೂಕಿನ ಕಳತ್ತೂರು ಚಂದನಗರ ಬಟರ್ ಫ್ಲೈ ಗೆಸ್ಟ್ ಹೌಸ್ ವತಿಯಿಂದ ಚಂದ್ರನಗರ ಮೇಲ್ ಪೇಟೆಯಲ್ಲಿ ಸಾರ್ವಜನಿಕರಿಗೋಸ್ಕರ 30,000 ವೆಚ್ಚದಲ್ಲಿ ಸಿ.ಸಿ.ಕ್ಯಾಮರ ಅಳವಡಿಸಿ ಇದನ್ನು ಶಿರ್ವ ಪೋಲಿಸ್ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕಾಪು ಕ್ಷೇತ್ರದಲ್ಲಿ ಪ್ರಖ್ಯಾತ ಸಮಾಜ ಸೇವಕರಾಗಿರುವ ಫಾರೂಕ್ ಚಂದ್ರನಗರ ಮತ್ತು ಅವರ ಸಂಗಡಿಗರು ಸೇರಿಕೊಂಡು ಕೊರೋನಾ ಸಮಯದಲ್ಲಿ ಜನರಿಗೆ ತುಂಬಾ ಸಹಕಾರ ನೀಡಿದ್ದಲ್ಲದೇ, ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿ ಈ ಭಾಗದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದಲ್ಲದೇ ಇಲ್ಲಿ ಕೂಡಾ ಸಿ.ಸಿ.ಕ್ಯಾಮರ ಅಗತ್ಯವಿದ್ದು ಅಪರಾಧ ಕೇಸುಗಳನ್ನು ಪತ್ತೆ ಮಾಡಲು ತುಂಬಾ ಸಹಕಾರಿ ಆಗುತ್ತದೆ ಎಂದರು.
ಈ ಸಮಾರಂಭದಲ್ಲಿ ಬಟರ್ ಫ್ಲೈ ಗೆಸ್ಟ್ ಹೌಸ್ನ ಮಾಲಕ ಮೊಹಮ್ಮದ್ ಫಾರೂಕ್ ಚಂದ್ರನಗರ, ಠಾಣಾ ಪ್ರೊಬೆಷನರಿ ಎಸ್.ಐ ಶಶಿಧರ, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಸಂಚಾಲಕ ದಿವಾಕರ ಡಿ ಶೆಟ್ಟಿ, ಉದ್ಯಮಿ ಉಮರಬ್ಬ ಚಂದ್ರನಗರ, ಶಿರ್ವ ಉದ್ಯಮಿ ಹೆಚ್ ಆರ್ ರೆಸಿಡೆನ್ಸಿ ಮಾಲಕ ಹಸನ್, ಶಿರ್ವ ಪಂಚಾಯತ್ ಸದಸ್ಯೆ ಶಾಂಭವಿ ಕುಲಾಲ್, ಭಾರತಿ ಶೆಟ್ಟಿಗಾರ ಮುಂತಾದವರು ಉಪಸ್ಥಿತರಿದ್ದರು.