ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಸೇವೆಗಳನ್ನು ಒದಗಿಸುವ ಶ್ರೀ ಡಿಜಿಟಲ್ ಸೇವಾ ಸಿಂಧು ಕೇಂದ್ರಗಳು ಪ್ರಮುಖ ಪಾತ್ರವಹಿಸಿರುತ್ತದೆ ಹಾಗೂ ಸಾರ್ವಜನಿಕರಿಗೆ ತಮ್ಮ ಗ್ರಾಮಗಳಲ್ಲೇ ಸರಕಾರಿ ಸೇವೆಗಳು ತಲುಪುವಂತೆ ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಇನ್ನೂ ಅನೇಕ ಸೇವೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಹೇಳಿದರು.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ಮೊದಲ ಅಧಿಕೃತ ಆಧಾರ್ ತಿದ್ದುಪಡಿ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜ ಸೇವಕರು ಹಾಗೂ ಶಿರ್ವ ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಪವನ್ ಕುಮಾರ್ ಶಿರ್ವ ಮಾತನಾಡಿ ಪ್ರಜ್ವಲ್ ಡಿಜಿಟಲ್ ಸೇವಾ ಕೇಂದ್ರ ಕಳೆದ ಮೂರು ವರ್ಷಗಳಿಂದ ಶಿರ್ವದ ಜನತೆಗೆ ಒಂದೇ ವೇದಿಕೆಯಡಿಯಲ್ಲಿ ಎಲ್ಲಾ ಸರಕಾರಿ ಸೌಲಭ್ಯಗಳು ಲಭ್ಯವಾಗುವಂತೆ ಜನಪರ ಕಾಳಜಿಯೊಂದಿಗೆ ಸೇವೆಯನ್ನು ನೀಡುತ್ತಾ ಬಂದಿದ್ದು ಶಿರ್ವ ಗ್ರಾಮದ ಉತ್ತಮ ಸೇವಾ ಸಿಂಧು ಕೇಂದ್ರವೆಂದು ಸಾರ್ವಜನಿಕರಲ್ಲಿ ಮಾನ್ಯತೆ ಪಡೆದಿದೆ ಎಂದರು.
ಈ ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಆಧಾರ್ ಗೆ ಸಂಬಂಧಿಸಿದಂತೆ ಮೊಬೈಲ್ ನಂಬರ್ ಸೇರ್ಪಡೆ, ಹೆಸರು ಬದಲಾವಣೆ, ಜನ್ಮ ದಿನಾಂಕ ಹಾಗೂ ವಿಳಾಸ ಬದಲಾವಣೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಮಾಲಕರಾದ ಪ್ರಜ್ವಲ್ ಬಿ. ಕುಲಾಲ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಸುವರ್ಣ, ನಿವೃತ್ತ ಹೆಡ್ ಕಾನ್ಸ್ಟೇಬಲ್ ಕೆ. ಗಣೇಶ್, ಜಿಲ್ಲಾ ವ್ಯವಸ್ಥಾಪಕರಾದ ನಿತೇಶ್ ಶೆಟ್ಟಿಗಾರ್, ಕಟ್ಟಡ ಮಾಲಿಕರಾದ ಸ್ಟಾನ್ಲಿ ಸಲ್ವೋದರ್ ಡಯಾಸ್, ಉಡುಪಿ ಜಿಲ್ಲ ಸಿಎಸ್ಸಿ ವಿಎಲ್ಇ ಸೊಸೈಟಿ ಅಧ್ಯಕ್ಷರಾದ ರವಿರಾಜ್ ಮಲ್ಪೆ, ಕಾರ್ಯದರ್ಶಿ ಪ್ರಸಾದ್ ಎಚ್, ಮಾಜಿ ಸದಸ್ಯರುಗಳು, ಸಂಸ್ಥೆಯ ಆಡಳಿತ ವರ್ಗ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರವಿರಾಜ್ ಮಲ್ಪೆ ನಿರೂಪಿಸಿ, ವಂದಿಸಿದರು.