ಶಿರ್ವ : ಸಂತ ಮೇರಿ ಕಾಲೇಜಿನಲ್ಲಿ ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನ
Posted On:
11-02-2021 03:40PM
ಫೆಬ್ರವರಿ 11 ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿ ಮಂಗಳೂರಿನ ಪ್ರತಿಷ್ಟಿತ ದಿಯಾ ಸಿಸ್ಟಮ್ ಸಂಸ್ಥೆ (ಗ್ಲೋ ಟಚ್ ಟೆಕ್ನಾಲಾಜಿಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ಕಾಲೇಜಿನ ಗಣಕ ವಿಜ್ಞಾನ ವಿಭಾಗ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶವತಿಯಿಂದ ಏರ್ಪಡಿಸಲಾಯಿತು.
ಈಗಾಗಲೇ ಬಿ.ಸಿ.ಎ., ಡಿಪ್ಲೊಮಾ(ಸಿ.ಎಸ್.), ಬಿ.ಎಸ್ಸಿ (ಸಿ.ಎಸ್.), ಬಿ.ಎಸ್ಸಿ (ಐ.ಟಿ), ಬಿ.ಇ, ಎಂ.ಎಸ್ಸಿ, ಎಂ.ಸಿ.ಎ, ಸ್ನಾತಕೋತ್ತರ ಪದವಿ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.30 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ತಲೀನೊ ಆಡಿಟೋರಿಯಂನಲ್ಲಿ ಮಂಗಳೂರಿನ ದಿಯಾ ಸಿಸ್ಟಮ್ನವರು ಕ್ಯಾಂಪಸ್ ಸಂದರ್ಶನವನ್ನು ನಡೆಸಿಕೊಟ್ಟರು. ನಮ್ಮ ಮುಂದೆ ಪೂರ್ವಯೋಜಿತ ಆಧುನಿಕ ತಾಂತ್ರಿಕತೆ ಇದ್ದರೂ ದೋಷಗಳು ಕಂಡುಬರುವುದು ಸಹಜ. ದೋಷಗಳನ್ನು ಕಂಡುಹಿಡಿದು ಅದಕ್ಕೆ ಸೂಕ್ತವಾದ ಪರಿಹಾರೋಪಾಯಗಳನ್ನು ಕಾಲೇಜಿನ ಕಲಿಕಾ ಸಂದರ್ಭದಲ್ಲಯೇ ಯುವಜನತೆ ತಾಂತ್ರಿಕ ಕೌಶಲ್ಯಗಳನ್ನು ಅರಿತುಕೊಂಡರೆ ಮುಂದೆ ಉದ್ಯೋಗವನ್ನು ಪಡೆದಾಗ ಕಂಪೆನಿಗೆ ಅದರಿಂದ ಮುಂದೆ ಅಭ್ಯರ್ಥಿಗೆ ಮತ್ತು ಕಂಪೆನಿಗೆ ಲಾಭವಾಗುತ್ತದೆ ಎಂದು ದಿಯಾ ಸಿಸ್ಟಮ್ಸ್ ಸೀನಿಯರ್ ಮ್ಯಾನೆಜರ್ ಶ್ರೀಶ್ರೀನಿವಾಸ ಭಟ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಹೆರಾಲ್ಡ್ ಐವನ್ ಮೋನಿಸ್ರವರು ಭವಿಷ್ಯದಲ್ಲಿ ಸೂಕ್ತವಾದ ಉದ್ಯೋಗವನ್ನು ಪಡೆದುಕೊಳ್ಳಲು ಇಂತಹ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿ ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮವನ್ನು ಹಮ್ಮಿಕೊಂಡ ದಿಯಾ ಸಿಸ್ಟಮ್ ಕಂಪೆನಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಅಭ್ಯರ್ಥಿಗಳಿಗೆ ನಡೆದ ಈ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಾದ ಹುಬ್ಬಳ್ಳಿ, ಗದಗ, ಬೆಂಗಳೂರು, ಹಾಸನ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಪರಿಸರದ ಕಾಲೇಜುಗಳ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸುಮಾರು 190 ವಿದ್ಯಾರ್ಥಿಗಳು ನೊಂದಾಯಿಸಿ , ಭಾಗವಹಿಸಿದರು. ಇದರ ಸದುಪಯೋಗವನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ಸ್ ಹಿರಿಯ ನೇಮಕಾತಿ ಕಾರ್ಯನಿರ್ವಾಹಕರಾದ ಶ್ರಿ. ಲಕ್ಷ್ಮಿಶ್ ಬಿ.ಎನ್, ಕು.ಸಮೃಧಿ, ಶ್ರೀರಾಘವೇಂದ್ರ, ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಕು.ಚಂದನಾ ಮತ್ತು ಬಳಗ ಪ್ರಾರ್ಥಿಸಿ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶದ ಸಂಯೋಜಕಿ ತನುಜಾ ಎನ್ ಸುವರ್ಣ ವಂದಿಸಿ, ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿ, ದಿವ್ಯಶ್ರಿ ಕಾರ್ಯಕ್ರಮ ನಿರೂಪಿಸಿದರು.