ಶಿರ್ವ: ಸಂತ ಮೆರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಯನ್ನು ಮಾಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ. ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ದುಶ್ಚ್ಯಟಗಳಿಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ ಆರೋಗ್ಯಪೂರ್ಣ ಜೀವನದ ಕಡೆ ಕೊಂಡೊಯ್ಯುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರು ತಮ್ಮ ಹೆಚ್ಚಿನ ಗಮನವನ್ನು ನೀಡಬೇಕಾದುದು ಅಗತ್ಯ ಎಂದರು. ಕಳೆದ ಬಾರಿ ಗಣಕ ವಿಜ್ಞಾನ ವಿಭಾಗದಲ್ಲಿ ತುಂಬಾ ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ ಮತ್ತು ಉನ್ನತ ವಿದ್ಯಾಬ್ಯಾಸ ಮಾಡುತ್ತಿರುವುದು ವಿಭಾಗಕ್ಕೆ ಒಂದು ಹೆಮ್ಮೆಯ ಗರಿಯಂತೆ ಎಂದು ತಿಳಿಸಿದರು. ಈ ಬಾರಿಯೂ ವಿವಿಧ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳು ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಇಂದಿನ ಸಂಕಷ್ಟದ ಕಾಲದಲ್ಲಿಯೂ ಇರುವುದು ಗಮನಾರ್ಹ ಎಂದು ಪ್ರಶಂಸನೀಯವಾದ ಮಾತುಗಳನ್ನಾಡಿದರು.
ಇದೇ ಸಂಧರ್ಭದಲ್ಲಿ ಹೆತ್ತವರಿಗೆ ವಿದ್ಯಾರ್ಥಿಗಳ ಪ್ರಗತಿ ಪತ್ರದ ಪರಿಶೀಲನೆ ಮತ್ತು ಹಾಜರಾತಿ ವಿವರಗಳನ್ನು ವಿಭಾಗದ ವತಿಯಿಂದ ನೀಡಲಾಯಿತು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನ ಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್, ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರಿ, ಶ್ರೀಮತಿ ಸುಷ್ಮಾ, ಪ್ರಕಾಶ್, ಹೆತ್ತವರು ಹಾಗೂ ಪೋಷಕರು, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಪ್ರಿಯಾಂಕ ಮತ್ತು ಬಳಗದವರು ಪ್ರಾರ್ಥಿಸಿದರು. ಕೃಪಾ ಸ್ವಾಗತಿಸಿ, ಶೋಭಿತ ವಂದಿಸಿ, ದಾಕ್ಷಾಯನಿ ಕಾರ್ಯಕ್ರಮ ನಿರೂಪಿಸಿದರು.