ಸಂತ ಮೇರಿ ಮಹಾವಿದ್ಯಾಲಯದಲ್ಲಿ ಮಿನಿ ಪ್ರಾಜೆಕ್ಟ್ ಅಭಿವೃದ್ದಿ ಕಾರ್ಯಗಾರ
Posted On:
01-03-2021 08:44PM
ಶಿರ್ವ: ಇಂದು ಆಧುನಿಕ ಜಗತ್ತು ಸಂಪೂರ್ಣವಾಗಿ ಡಿಜಿಟಲೀಕರಣವಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ದಿಯು ಹೊಸ ಆಲೋಚನೆಗಳ ಆವಿಷ್ಕಾರಗಳು, ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಐಷಾರಾಮಿ ಜೀವನ ಶೈಲಿಗಳಿಗೆ ಕಾರಣವಾಗಿದೆ. ಇಂಟರ್ನೆಟ್ಗೆ ಸಂಪರ್ಕ ಹೊಂದಿದ ಅನೇಕ ಸಾಧನೆಗಳು ಜೀವನದ ವಿಧಾನವನ್ನು ಬದಲಾಯಿಸಿದೆ ಹಾಗು ಇಂತಹ ತಂತ್ರಜ್ಞಾನದ ಕಲಿಕೆಯು ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಹೆಚ್ಚಲು ಪೂರಕ ಎಂದು ಶಿರ್ವ ಸಂತಮೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ‘ಮಿನಿ ಪ್ರಾಜೆಕ್ಟ್ ಅಭಿವೃದ್ದಿ ಕಾರ್ಯಗಾರದಲ್ಲಿ ಮುಖ್ಯಅಥಿತಿಯಾಗಿ ಆಗಮಿಸಿದ ಬಂಟಕಲ್ ಕಾಲೇಜಿನ ಡಾ| ರಾಘವೇಂದ್ರ ಎಸ್ ರವರು ಮಾತನಾಡಿದರು.
ಪದವಿ ವ್ಯಾಸಂಗ ಮಾಡುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಉಚಿತ ತರಬೇತಿಗಳನ್ನು ನೀಡಿ, ಸೂಕ್ತ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಬಂಟಕಲ್ ಹಾಗೂ ಶಿರ್ವ ಸಂತ ಮೇರಿ ಕಾಲೇಜು ಪರಸ್ಪರ ಒಡಂಬಡಿಕೆಯ ಅನುಸಾರ ಮಾರ್ಚ್ 1 ರಿಂದ 2 ರವರಗೆ ಕಾಲೇಜಿನ ಫಾ.ಹೆನ್ರಿ ಕ್ಯಾಸ್ತಲೀನೊ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟಕಲ್ ಕಾಲೇಜಿನ ಸಹ-ಪ್ರಾಧ್ಯಾಪಕಿ ಶ್ರೀಮತಿ ಸಹನಾರವರು ಮಾತನಾಡಿ ನಮ್ಮ ಜೀವನದ ಪ್ರತಿಯೊಂದು ವಿಚಾರವು ಒಂದಲ್ಲ ಒಂದು ರೀತಿಯಲ್ಲಿ ಕರಕುಶಲ ವಿಜ್ಞಾನಕ್ಕೆ ಸಂಬಂಧಿಸಿದೆ. ಪ್ರತಿ ವರ್ಷಗಳಲ್ಲಿ ತಂತ್ರಜ್ಞಾನವು ವಿಸ್ಮಯಕಾರಿಯಾಗಿ ಉಪಯುಕ್ತ ಸಂಪನ್ಮೂಲಗಳನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ವೆಬ್ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆಯನ್ನು ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ಈ ಕಾರ್ಯಾಗಾರವು ಐಟಿ ಉದ್ಯಮದಲ್ಲಿ ಬಳಸುತ್ತಿರುವ ಹೊಸ ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸುಧಾರಿತ ತಂತ್ರಜ್ಞಾನವನ್ನು ರೂಪಿಸಲು ಸಹಾಯಕಾರಿಯೆಂದು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಈ ಕಾರ್ಯಗಾರದ ಮುಖ್ಯ ಉದ್ಧೇಶ ಗುಣಮಟ್ಟದ ಉಪಕರಣಗಳು ಮತ್ತು ಉದ್ಯಮದ ಯೋಜನೆಗಳಿಗೆ ಒಡ್ಡಿಕೊಳ್ಳುವ ಗುರಿಯನ್ನು ಹೊಂದಿದೆಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಉನ್ನತ್ ಭಾರತ್ ಅಭಿಯಾನ್ ಸಂಯೋಜಕರಾದ ಶರತ್ಕುಮಾರ್ ಉಪನ್ಯಾಸಕರಾದ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಎಲ್ಲಾ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಪ್ರಿಯಾಂಕ ವಂದಿಸಿದರು, ಪ್ರೀತಿಕಾ ಮತ್ತು ಬಳಗ ಪ್ರಾರ್ಥಿಸಿ, ಸೃಷ್ಟಿ ಸ್ವಾಗತಿಸಿದರು. ಫೈಜಾ ಭಾನು ಕಾರ್ಯಕ್ರಮ ನಿರೂಪಿಸಿದರು.