ಉಡುಪಿ : ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ
Thumbnail
ಉಡುಪಿ : ರೋಟರಿ ಕ್ಲಬ್ ಕಲ್ಯಾಣಪುರ, ಜಿಲ್ಲಾ ಆಸ್ಪತ್ರೆ ಉಡುಪಿ, ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ ಮಂಗಳೂರು ತಜ್ಙ ದಂತ ವೈದ್ಯರಿಂದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರವನ್ನು ಉಡುಪಿಯ ಸರ್ಕಾರಿ ದಂತ ಚಿಕಿತ್ಸಾ ಆಸ್ಪತ್ರೆ ವಠಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಡಾಕ್ಟರ್ ನಾಗಭೂಷಣ ಉಡುಪ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಇಂತಹ ಸೇವೆಗಳು ತಾಲೂಕು ಮತ್ತು ಸಮುದಾಯ ಆಸ್ಪತ್ರೆ ಕೇಂದ್ರಗಳ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ದಾನಿಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಲ್ಲಿ ಇನ್ನೂ ಹೆಚ್ಚು ಫಲಾನುಭವಿಗಳಿಗೆ ಸಹಾಯ ಮಾಡಲು ಪ್ರಯತ್ನಿಸುವುದಾಗಿ ನುಡಿದರು. ಡಾಕ್ಟರ್ ಬೀಸು ನಾಯ್ಕ್, ಜಿಲ್ಲಾ ದಂತ ನೋಡಲ್ ಅಧಿಕಾರಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ದಂತ ಆರೋಗ್ಯ ರಕ್ಷಣೆ ಮಹತ್ವದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷರಾದ ಶಂಭು ಶಂಕರ್ ರವರು ಸಂದರ್ಭೋಚಿತವಾಗಿ ಮಾತನಾಡಿ ಫಲಾನುಭವಿಗಳಿಗೆ ಶುಭ ಹಾರೈಸಿದರು. ಡಾಕ್ಟರ್ ಚೇತನ್ ಹೆಗ್ಡೆ, ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ ಮಂಗಳೂರು ಇವರು ಮಾತನಾಡಿ 33 ವರ್ಷಗಳಿಂದ ಜನ ಸಮುದಾಯದ ಶಿಬಿರಗಳಿಗೆ ತಜ್ಞ ವೈದ್ಯಕೀಯ ತಂಡದೊಂದಿಗೆ ತೆರಳಿ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವ್ರತ್ತರಾಗಿರುವ ಸಂಸ್ಥೆಯಾಗಿದ್ದು ಸದಾ ಸೇವೆಗೆ ಲಭ್ಯವಿರುವುದಾಗಿ ತಿಳಿಸಿ ಶಿಬಿರದ ಆಯೋಜಕರಿಗೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾಕ್ಟರ್ ಮಧುಸೂದನ ನಾಯಕ್ ರವರು ಶಿಬಿರಕ್ಕೆ ಅರ್ಹ ಫಲಾನುಭವಿಗಳನ್ನು ಸಂಘಟಿಸಿ , ಪ್ರಯೋಜನವನ್ನು ಪಡೆದುಕೊಳ್ಳಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮೈಸೂರು ವಲಯದ ವಿಭಾಗೀಯ ನೋಡಲ್ ಅಧಿಕಾರಿ ಡಾಕ್ಟರ್ ಸತ್ಯ ಪ್ರಕಾಶ್, ಉಡುಪಿ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಚಂದ್ರಶೇಖರ್ ಅಡಿಗ, ಡಾಕ್ಟರ್ ಸುದೇಶ್ ಕುಮಾರ್, ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಇದರ ಅಧ್ಯಕ್ಷರಾದ ಡಾಕ್ಟರ್ ರೋಶನ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ರೋಟರಿ ಕಾರ್ಯದರ್ಶಿ ಪ್ರಕಾಶ್ ಕುಮಾರ್ ಮತ್ತಿತರ ರೋಟರಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಒಂದು ದಿನದ ಈ ವಿಶೇಷ ಶಿಬಿರದಲ್ಲಿ 50 ಕ್ಕೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಉಚಿತವಾಗಿ ದಂತ ಪಂಕ್ತಿ ಜೋಡಣೆ ಮಾಡುವ ಮೂಲಕ ಯಶಸ್ವಿಯಾಗಿ ನಿರ್ವಹಿಸಲಾಯಿತು.
Additional image
11 Apr 2022, 10:55 PM
Category: Kaup
Tags: