ಅದಮಾರು : ಕಾರ್ಗಿಲ್ ವಿಜಯ ದಿವಸ ಆಚರಣೆ ಮತ್ತು ಯೋಧ ನಮನ ಕಾರ್ಯಕ್ರಮ
ಅದಮಾರು : ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅದಮಾರಿನ ವೀರಯೋಧ ಬಾಲಕೃಷ್ಣ ಟಿ. ಭಂಡಾರಿ ಮಾತನಾಡಿ ಕಾರ್ಗಿಲ್ ಯುದ್ಧವು ದೇಶದ ವೀರತ್ವದ ಸಂಕೇತ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವೈರಿ ಪಡೆಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪ್ರದೇಶವನ್ನು ಮರಳಿ ಪಡೆಯುವಲ್ಲಿ ಭಾರತ ಯಶಸ್ವಿಯಾಗಿತ್ತು. ಇಂದಿನ ಯುವಜನರಲ್ಲೂ ಸೈನ್ಯಕ್ಕೆ ಸೇರುವ ತುಡಿತ ಜಾಗೃತಗೊಳ್ಳಬೇಕಾಗಿದೆ. ಇದೊಂದು ದೇಶ ಸೇವೆಗೆ ಇರುವಂತಹ ಅವಕಾಶ. ಯುವಶಕ್ತಿ ಅಗ್ನಿಪಥ ದ ಮೂಲಕ ಅಗ್ನಿವೀರಾಗಬೇಕೆಂದು ಆಶಿಸಿದರು.
ಯೋಧ ನಮನ ಮತ್ತು ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈ ಮಾತನಾಡಿ ಹಿಂದೆ ತಾವು NCC ಆಫೀಸರ್ ಆಗಿದ್ದಾಗ ಮಿಲಿಟರಿ ಶಿಸ್ತಿನ ಬಗ್ಗೆ ನೆನಪಿಸಿಕೊಂಡರು. ಸೈನ್ಯದಲ್ಲಿರುವ ಶಿಸ್ತು ಜೊತೆಗೆ ಅದರಲ್ಲಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ನಿವೃತ್ತ ಹಿಂದಿ ಉಪನ್ಯಾಸಕರಾದ ಏಕನಾಥ ಡೊಂಗ್ರೆ , ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಡಾ| ಜಯಶಂಕರ್ ಕಂಗಣ್ಣಾರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕೀರ್ತಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಆದಿತ್ಯ ವಂದಿಸಿದರು.
