ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಾಹನ ರ‍್ಯಾಲಿ
Thumbnail
ಉದ್ಯಾವರ : ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ವಾಹನ ರ‍್ಯಾಲಿ ನಡೆಸಿ ಸಂಭ್ರಮಿಸಲಾಯಿತು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಕೆಥೋಲಿಕ್ ಸಭಾ, ಸ್ತ್ರೀ ಸಂಘಟನೆ, ಐಸಿವೈಎಂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ವಾಹನ ರ‍್ಯಾಲಿಯನ್ನು ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ ಮತ್ತು ಉದ್ಯಮಿ, ಆಕರ್ಷಣ್ ಫೂಟ್ ವೇರ್ ಮಾಲಕ ಸಾದಿಕ್ ಅಹ್ಮದ್ ಸಂಘಟನೆಗಳ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮೇರಿ ಡಿಸೋಜ, ವೀರ ಯೋಧರ ಮತ್ತು ರಾಷ್ಟ್ರ ನಾಯಕರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ದೇಶದಲ್ಲಿ ಇರುವಂಥ ನಿರುದ್ಯೋಗ ಮತ್ತು ಬಡತನದಿಂದ ನಾವು ಇನ್ನೂ ಮುಕ್ತಿ ಕಂಡಿಲ್ಲ. ಇಂತಹ ರ‍್ಯಾಲಿಗಳ ಮೂಲಕವಾಗಿ ಸಮಾಜದಲ್ಲಿ ಮತ್ತು ದೇಶದಲ್ಲಿ ಸೌಹಾರ್ದತೆ ಮೂಡಲಿದೆ ಎಂದರು. ಈ ಸಂದರ್ಭದಲ್ಲಿ ಲಯನ್ಸ್ ವಲಯಾಧ್ಯಕ್ಷ ಲ. ಜೋನ್ ಫೆರ್ನಾಂಡಿಸ್, ಕೆಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಐಸಿವೈಎಂ ಅಧ್ಯಕ್ಷ, ಪ್ರಿತೇಶ್ ಪಿಂಟೊ, ಸ್ತ್ರೀ ಸಂಘಟನೆ ಅಧ್ಯಕ್ಷೆ ಐರಿನ್ ಪಿರೇರಾ, ಪ್ರಮುಖರಾದ ಜೆರಾಲ್ಡ್ ಪಿರೇರಾ, ಲೋರೆನ್ಸ್ ಡೇಸಾ, ಟೆರೆನ್ಸ್ ಪಿರೇರಾ, ಜೋನ್ ಗೋಮ್ಸ್, ರೋಯ್ಸ್ ಫೆರ್ನಾಂಡಿಸ್, ವಿಲ್ಫ್ರೆಡ್ ಡಿಸೋಜಾ, ರೊನಾಲ್ಡ್ ಡಿಸೋಜ, ಪ್ರೇಮ್ ಮಿನೇಜಸ್, ಜೂಲಿಯ ಡಿಸೋಜ, ಪ್ರಕಾಶ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಲ. ರೋಶನ್ ಕ್ರಾಸ್ತಾ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಲ. ಮೈಕಲ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು. ವಾಹನ ರ‍್ಯಾಲಿಯು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಿಂದ ಆರಂಭಗೊಂಡು ಗುಡ್ಡೆಯಂಗಡಿ, ಪಿತ್ರೋಡಿ ಉದ್ಯಾವರ ಮೇಲ್ಪೇಟೆ ಮೂಲಕ ಸಾಗಿತು. ರ‍್ಯಾಲಿಗೆ ಮುಂಚಿತವಾಗಿ ಸ್ಥಳೀಯ ಸಂತ ಪಲೋಟ್ಟಿ ಕಾನ್ವೆಂಟ್ ನಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಲಾಯಿತು.
Additional image Additional image
17 Aug 2022, 04:39 PM
Category: Kaup
Tags: