ಜೀರ್ಣಗೊಂಡ ದೇವಾಲಯಗಳ ಉದ್ಧಾರ ಊರಿಗೆ ಶ್ರೇಯಸ್ಕರ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ : ಹಳೆಯ ಬಟ್ಟೆಯನ್ನು ತೊಡೆದು ಹೊಸ ಬಟ್ಟೆಯನ್ನು ಉಡುವುದು ವೈಯುಕ್ತಿಕವಾಗಿ ವ್ಯಕ್ತಿಗೆ ಹೇಗೆ ಶ್ರೇಯಸ್ಕರವೋ, ಹಾಗೇ ಜೀರ್ಣಗೊಂಡ ದೇವಾಲಯಗಳನ್ನು ಉದ್ಧಾರಗೊಳಿಸುವುದು ಊರಿಗೆ ಶ್ರೇಯಸ್ಕರವಾದುದು, ಆದ್ದರಿಂದ ದೇವಾಲಯಗಳ ಜೀರ್ಣೋದ್ಧಾರದಲ್ಲಿ ಊರವರೆಲ್ಲರೂ ಒಮ್ಮನಸ್ಸಿನಿಂದ ಸೇವೆ ಸಲ್ಲಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಸೋಮವಾರ, ಇಲ್ಲಿನ ಪೆರ್ಣಂಕಿಲದ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆ ಪ್ರಾರಂಭದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ದೇವಾಲಯಕ್ಕೆ ಭೂಮಿ, ಮರ, ಧನ ದಾನ ಮಾಡಿದವರನ್ನು ಗೌರವಿಸಿದರು. ಅವದಾನಿ ಗುಂಡಿಬೈಲು ಸುಬ್ರಹಣ್ಯ ಭಟ್ ಊರವರಿಗೆ ದೀಕ್ಷಾಬದ್ಧತೆಯನ್ನು ವಿವರಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೆರ್ಣಂಕಿಲ ಹರಿದಾಸ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಶಾ ನಾಯಕ್, ಮಠದ ದಿವಾಣರಾದ ಸುಬ್ರಹ್ಮಣ್ಯ ಭಟ್, ವಿದ್ವಾನ್ ರಘುರಾಮ ಆಚಾರ್ಯರು ವೇದಿಕೆಯಲ್ಲಿದ್ದರು.
ಉಮೇಶ್ ನಾಯಕ್ ಮತ್ತು ಸದಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ, ಶ್ರೀಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಮಧುಸೂದನ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವರ ಬಿಂಬವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
