ಉದ್ಯಾವರ : ವಿಶ್ವ ಮಹಿಳಾ ದಿನಾಚರಣೆ - ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ
ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ 12 ಅಂಗನವಾಡಿ ಕಾರ್ಯಕರ್ತರಿಗೆ ಸಂಪಿಗೆನಗರದಲ್ಲಿರುವ ಪಲ್ಲೋಟೈನ್ ಸ್ನೇಹಾಲಯದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸ್ತ್ರೀ ಶಕ್ತಿಯ ಮೂಲಕ ಅಂಗನವಾಡಿ ಕಾರ್ಯಕರ್ತರು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. ಪುರುಷ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಾಯಿಯ ಪ್ರೀತಿಯನ್ನು ಯಾವುದೇ ನಿರೀಕ್ಷೆಗಳಿಲ್ಲದೆ ಪುಟ್ಟ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ನೀಡುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವುದು ಕೇವಲ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತ್ರವಲ್ಲದೆ, ಪ್ರತಿದಿನ ಗೌರವಿಸುವಂತಾಗಬೇಕು ಎಂದರು.
ಲಯನ್ಸ್ 317Cಯ ಪ್ರಾಂತೀಯ ಅಧ್ಯಕ್ಷೇ ಲ. ವಿಜಯ ಗೋಪಾಲ ಬಂಗೇರ ಎಂ.ಜೆ.ಎಫ್. ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಮೊದಲ ಬಾರಿಗೆ ಈ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಮೂಲಕ ಸನ್ಮಾನ ದೊರಕುವಂತಾಗಿದೆ. ಅಂಗನವಾಡಿ ಕಾರ್ಯಕರ್ತರ ಸೇವೆ ನಿಜಕ್ಕೂ ದೇವರು ಮೆಚ್ಚುವಂಥದ್ದು ಎಂದರು.
ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ ಒಟ್ಟು 12 ಅಂಗನವಾಡಿ ಕಾರ್ಯಕರ್ತರನ್ನು ಅಭಿನಂದಿಸಿ ಅವರ ಸೇವೆಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂತಿಯ ಅಧ್ಯಕ್ಷೆ ಲ. ವಿಜಯ ಗೋಪಾಲ ಬಂಗೇರ ಮತ್ತು ಪಲ್ಲೋಟೈನ್ ಸ್ನೇಹಲಯದ ಮುಖ್ಯಸ್ಥೆ ಧರ್ಮಭಗಿನಿ ಸಿ. ಲೀನಾ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಲ. ಜಾನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ಅನಿಲ್ ಲೋಬೊ ಸ್ವಾಗತಿಸಿದರೆ, ಕಾರ್ಯಕ್ರಮದ ನಿರ್ದೇಶಕ ಲಯನ್ ಪದ್ಮನಾಭ ಶೈಣೈ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.
