ಉಡುಪಿ : ಮಕ್ಕಳ ಚಲನಚಿತ್ರ ಸ್ಕೂಲ್ ಲೀಡರ್ - ಬಾಲ ಕಲಾವಿದರ ಆಯ್ಕೆ ಪ್ರಕ್ರಿಯೆಗೆ ಚಾಲನೆ
Thumbnail
ಉಡುಪಿ : ಮಕ್ಕಳು ಪ್ರತಿಭಾವಂತರು. ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ತೊಡಗಬೇಕಾಗಿದೆ. ಹಣ ಸಂಪಾದನೆಗಾಗಿ ಚಲನಚಿತ್ರವಾಗಬಾರದು ಸಮಾಜಕ್ಕೆ ಸಂದೇಶ ಕೊಡುವ ಹಿನ್ನೆಲೆಯ ಸದಭಿರುಚಿಯ ಚಿತ್ರವನ್ನು ಮಾಡಬೇಕಾಗಿದೆ. ಆಯ್ಕೆ ಇಂದು ಆಗದಿದ್ದರೂ ನಾಳೆ ಆಗುತ್ತದೆ ಎಂಬ ಭರವಸೆ ನಮ್ಮಲ್ಲಿರಬೇಕು. ಎಂದು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಕ ಬಿ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅವರು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಶೆಟ್ಟಿ ಸಭಾ ಭವನದಲ್ಲಿ ಜರಗಿದ ಸನ್ ಮ್ಯಾಟ್ರಿಕ್ಸ್ ಅರ್ಪಿಸುವ ಫಿಲಂ ವ್ಹೀಲ್ ಸ್ಟುಡಿಯೋಸ್ ಸಹಯೋಗದೊಂದಿಗೆ ಸದ್ಯದಲ್ಲಿ ಚಿತ್ರೀಕರಣಗೊಳ್ಳಲಿರುವ ಸ್ಕೂಲ್ ಲೀಡರ್ ಚಿತ್ರದ ಬಾಲ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂತಾರ ಚಿತ್ರದಲ್ಲಿ ನಟಿಸಿದ ಚಂದ್ರಕಲಾ ರಾವ್ ಮಾತನಾಡಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು. ಚಿತ್ರ ನಿರ್ಮಾಪಕರಾದ ಸತ್ಯೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುದರ್ಶನ್ ಎಸ್ ಪುತ್ತೂರು, ರೂಪದರ್ಶಿ ವಿದ್ಯಾಸರಸ್ವತಿ, ನಟಿಯರಾದ ಚಂದ್ರಕಲಾ ರಾವ್, ರಂಜಿತಾ ಶೇಟ್, ಪತ್ರಕರ್ತ ಶೇಖರ ಅಜೆಕಾರು, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಅಕ್ಷತ್, ಮೋಹನ್ ಪಡ್ರೆ, ಮೈತ್ರಿ, ದೀಪಕ್ ಬೀರ ಉಪಸ್ಥಿತರಿದ್ದರು. ಸಾನ್ವಿ ಎಸ್ ಆಚಾರ್ಯ ಪ್ರಾರ್ಥಿಸಿದರು ರಝಾಕ್ ಪುತ್ತೂರು ಪ್ರಸ್ತಾವನೆಗೈದರು. ಪತ್ರಕರ್ತ ಪ್ರಕಾಶ್ ಸುವರ್ಣ ನಿರೂಪಿಸಿದರು. ರಂಗ ನಟ ನಾಗೇಶ್ ಕಾಮತ್ ವಂದಿಸಿದರು.
01 May 2023, 12:34 PM
Category: Kaup
Tags: