ಕಾರ್ಕಳ : ಇನ್ನಾ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ಪರಿಸರ ದಿನಾಚರಣೆ
Thumbnail
ಕಾರ್ಕಳ : ಇನ್ನಾ ಗ್ರಾಮ ಪಂಚಾಯತ್ ಮತ್ತು ಕಾರ್ಕಳ, ಮೂಡುಬಿದ್ರೆ ತಾಲೂಕು ಅರಣ್ಯ ಇಲಾಖೆಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆಯು ಪಂಚಾಯತನ ಗೋಪಾಲ್ ಭಂಡಾರಿ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷ ಕುಶ ಆರ್ ಮೂಲ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯಾಧಿಕಾರಿ ನಾಗೇಶ್ ಎನ್ ಬಿಲ್ಲವ ಅವರು ಪರಿಸರ ಸರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪರಿಸರದ ಪ್ರೀತಿ ಬಾಲ್ಯದಿಂದಲೂ ಇರಬೇಕು. ಹಸಿರು ಮನೆ, ಹಸಿರು ಶಾಲೆ, ಹಸಿರು ಗ್ರಾಮಗಳು ಇಂದು ನಮ್ಮ ಅಗತ್ಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇನ್ನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಅವರು ಪರಿಸರ ದಿನದ ಸಂದೇಶವನ್ನು ನೀಡಿ ಮಾಲಿನ್ಯವನ್ನು ಉಂಟುಮಾಡುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಅರಿವು ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ರೈತರಿಗೆ, ಶಕ್ತಿ ಸಂಜೀವಿನಿ ಒಕ್ಕೂಟದ ಎಲ್ಲ ಸದಸ್ಯರಿಗೆ, ಶಾಲೆಯ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಹಸಿರು ಗಿಡಗಳನ್ನು ಅರಣ್ಯ ಇಲಾಖೆಯ ವತಿಯಿಂದ ವಿತರಣೆ ಮಾಡಲಾಯಿತು. ಪರಿಸರದ ಬಗ್ಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರತಿಮಾ, ಪಂಚಾಯತ್ ಉಪಾಧ್ಯಕ್ಷೆ ಸರಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ಕಾರ್ಕಳ ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾಲಕ್ಷ್ಮಿ ಪಂಚಾಯತ್ ಸದಸ್ಯರಾದ ವಿಮಲ ಚಂದ್ರಹಾಸ ಶೆಟ್ಟಿ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Additional image
05 Jun 2023, 06:04 PM
Category: Kaup
Tags: