ಅಕ್ಟೋಬರ್ 1 : ಪಡುಬಿದ್ರಿ ಬಂಟರ ಸಂಘದಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ; ವಿದ್ಯಾರ್ಥಿವೇತನ ವಿತರಣಾ ಸಮಾರಂಭ
ಪಡುಬಿದ್ರಿ : ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡಿರುವ ಪಡುಬಿದ್ರಿ ಬಂಟರ ಸಂಘದಿಂದ ಬಂಟ ಸಮಾಜದ ಆರ್ಥಿಕ ದುರ್ಬಲರಿಗೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು ರೂ. 20 ಲಕ್ಷ ಸಹಾಯಧನ ವಿತರಣಾ ಕಾರ್ಯಕ್ರಮ ಅಕ್ಟೋಬರ್ 1, ಆದಿತ್ಯವಾರ ಬೆಳಗ್ಗೆ 10 ಗಂಟೆಗೆ
ಪಡುಬಿದ್ರಿ ಬಂಟರ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.
ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುಮಾರು 350 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆಯ ಜೊತೆಗೆ ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಸಮಾಜದ ವೃದ್ಧರಿಗೆ ಆಶ್ರಯವಾಗಬೇಕೆಂಬ ದೃಷ್ಟಿಯಿಂದ ಸುಮಾರು 6 ಎಕರೆ ಜಾಗದಲ್ಲಿ ಬಂಟಾಶ್ರಯ, ಕುಟುಂಬ ಸೇವಾಶ್ರಮ ವೃದ್ಧಾಶ್ರಮ ನಿರ್ಮಿಸುವ ಯೋಜನೆಗೆ ಚಾಲನೆ ಮತ್ತು ಆರ್ಥಿಕ ಸಬಲೀಕರಣದ ಉದ್ದೇಶದಿಂದ ಎಲ್ಲಾ ಸಮಾಜದವರಿಗೂ ಅನುಕೂಲವಾಗುವಂತೆ ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮವನ್ನು ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ ಆಳ್ವ ಉದ್ಘಾಟಿಸಲಿದ್ದು, ಹೇರಂಬ ಇಂಡಸ್ಟ್ರೀಸ್ ಮಾಲಕರಾದ ಕನ್ಯಾನ ಸದಾಶಿವ ಶೆಟ್ಟಿಯವರು ಕ್ರೆಡಿಟ್ ಕೋ ಆಪರೇಟಿವ್ ಗೆ ಚಾಲನೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಶಕ್ತರಿಗೆ ನೆರವು ವಿತರಣೆ, ಮುಂಬಯಿಯ ಉದ್ಯಮಿ ಎಲ್ಲೂರಿನ ಪ್ರವೀಣ ಭೋಜ ಶೆಟ್ಟಿಯವರಿಂದ ಬಂಟಾಶ್ರಯಕ್ಕೆ ಚಾಲನೆ, ಕೆ.ಎಮ್.ಇಂಡಸ್ಟ್ರೀಸ್ ಮಾಲಕರಾದ ಕೆ.ಎಂ ಶೆಟ್ಟಿಯವರಿಂದ ವಿಧ್ಯಾರ್ಥಿ ವೇತನ ವಿತರಣೆ ನಡೆಯಲಿದೆ.
ಶಾಸಕರಾದ ಗುರ್ಮೆ ಸುರೇಶ ಶೆಟ್ಟಿಯವರಿಗೆ ಸಮಾಜದ ವತಿಯಿಂದ ಅಭಿನಂದನೆ ನಡೆಯಲಿದ್ದು, ಹುಬ್ಬಳ್ಳಿಯ ಉದ್ಯಮಿ ರಾಜೇಂದ್ರ ಶೆಟ್ಟಿಯವರು ವಿವಿಧ ಗಣ್ಯರನ್ನು ಗೌರವಿಸಲಿದ್ದಾರೆ. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮುಂಬೈ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಸಿ.ಎ. ಸುರೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಈ ಸಂದರ್ಭ ಸಿರಿಮುಡಿ ದತ್ತಿ ನಿಧಿ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷರಾದ ಎರ್ಮಾಳು ಶಶಿಧರ ಶೆಟ್ಟಿ,
ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ವಿಭಾಗದ ನವೀನ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.
