ಕಾಪು : ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ - ನಾಪತ್ತೆಯಾಗಿದ್ದ ಸಾಕು ಮಗಳು ಪತ್ತೆ ; ನಾಲ್ವರು ಆರೋಪಿಗಳು ಪೋಲಿಸ್ ವಶಕ್ಕೆ
Thumbnail
ಕಾಪು : ಆತ್ಮಹತ್ಯೆ ಮಾಡಿಕೊಂಡಿದ್ದ ಕಾಪುವಿನ ಸಮಾಜ ಸೇವಕ‌ ಲೀಲಾಧರ ಶೆಟ್ಟಿ ದಂಪತಿಗಳ ನಾಪತ್ತೆಯಾಗಿದ್ದ ಸಾಕು‌ ಮಗಳನ್ನು, ನಾಲ್ವರು ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿ ಕಾಪು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಆಕೆಯ ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20), ಮತ್ತು ನಾಪತ್ತೆಯಾಗಲು ಸಹಕರಿಸಿದವರಾದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಝೀಜ್ ಎಂದು ಗುರುತಿಸಲಾಗಿದೆ. ಲೀಲಾಧರ ಶೆಟ್ಟಿಯವರು 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದದ್ದು ಆಕೆ ಡಿಸೆಂಬರ್ 11 ರಂದು ಮನೆ ಬಿಟ್ಟು ಹೋಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾಕು ಮಗಳು ನಾಪತ್ತೆಯಾಗಿರುವುದರಿಂದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಎಲ್ ಶೆಟ್ಟಿ ರವರು ಸಮಾಜಕ್ಕೆ ಹೆದರಿಕೊಂಡು, ಮರ್ಯಾದೆಗೆ ಅಂಜಿ ಮನನೊಂದು ಮನೆಯ ಮಲಗುವ ಕೋಣೆಯಲ್ಲಿನ ಪಕ್ಕಾಸಿಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಗಿರೀಶ್ ವಿರುದ್ಧ ಫೋಕ್ಸೊ, ಅತ್ಯಾಚಾರ ಹಾಗೂ ಕಿಡ್ನಾಪ್ ಪ್ರಕರಣಗಳನ್ನು ಹಾಗೂ ಇತರ ಮೂವರ ವಿರುದ್ದ ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್ ಕೆ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಟಿ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಇವರ ಮಾರ್ಗದರ್ಶನದಲ್ಲಿ ಕಾಪು ಸಿಪಿಐ ಜಯಶ್ರೀ ಮಾನೆ ನೇತೃತ್ವದಲ್ಲಿ ಕಾಪು ಪಿಎಸ್‌ಐ ಅಬ್ದುಲ್ ಖಾದರ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿದೆ.
18 Dec 2023, 04:11 PM
Category: Kaup
Tags: