ಕಾಪು : ಅಸಂಖ್ಯ ಭಕ್ತರ ಸಮ್ಮುಖ ನೆರವೇರಿದ ದಿವ್ಯ ಸತ್ಸಂಗ
ಕಾಪು : ಕರಾವಳಿಯ ಸೊಬಗಿಗೆ ಮನಸೋತವರಿಲ್ಲ. ಕಾಪು ಬೀಚ್ ಅತ್ಯಂತ ಸುಂದರವಾಗಿದೆ. ಭಾರತದ ಆಧ್ಯಾತ್ಮ, ವಸುದೈವ ಕುಟುಂಬಕಂ ಎಂಬ ನುಡಿ, ಭಾರತದ ಐಟಿ ವಲಯ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆ ಹೆಮ್ಮೆ.
ಸತ್ಸಂಗದೊಂದಿಗೆ ಸತ್ ಚಿಂತನೆ, ಆತ್ಮ ಚಿಂತನೆಯಾಗಲಿ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲೀವಿಂಗ್ನ ಸಂಸ್ಥಾಪಕ, ಪದ್ಮವಿಭೂಷಣ ಗುರುದೇವ್ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಅವರು ಮಂಗಳವಾರ ಕಾಪು ಬೀಚ್ ನ ಮಂಥನ್ ರೆಸಾಟ್೯ ಬಳಿ ಕಡಲ ಕಿನಾರೆಯಲ್ಲಿ ನಡೆದ ಸತ್ಸಂಗದಲ್ಲಿ ಜ್ಞಾನ, ಧ್ಯಾನ ಹಾಗೂ ಭಜನೆಯನ್ನೊಳಗೊಂಡ ದಿವ್ಯ ಸತ್ಸಂಗ ಆನಂದ ಲಹರಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಆಯೋಜಕರಾಗಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ,
ಸನ್ಯಾಸ ಪ್ರದರ್ಶನವಾಗಬಾರದು, ನಿದರ್ಶನವಾಗಬೇಕು ಎನ್ನುವಂತಿರುವ ಮಹನೀಯ ಸಂತ ಶ್ರೀ ರವಿಶಂಕರ್ ಗುರೂಜಿ. ವಿವಿಧ ದೇಶಗಳ ಜನರು ಅನುಯಾಯಿಯಾಗಿರುವ ಅಂತರಾಷ್ಟ್ರೀಯ ಖ್ಯಾತಿಯ ಗುರೂಜಿ ಕಾಪುವಿಗೆ ಆಗಮಿಸಿರುವುದು ಬದುಕಿನ ಅವಿಸ್ಮರಣೀಯ ಘಳಿಗೆ ಎಂದರು.
ಕಿರಿಯರಿಂದ ಹಿರಿಯರಾದಿಯಾಗಿ ಇಳಿ ಸಂಜೆಯಲಿ ಕಡಲ ಕಿನಾರೆಯ ಸೊಬಗಿನ ಜೊತೆಗೆ ಸತ್ಸಂಗ, ಧ್ಯಾನ, ಭಜನೆಯಲಿ ಸಮಯ ಕಳೆದರು.
ಈ ಸಂದರ್ಭ ಗುರ್ಮೆ ಸುರೇಶ್ ಶೆಟ್ಟಿ ಕುಟುಂಬ ವರ್ಗ, ಎಂ. ಆರ್. ಜಿ ಗ್ರೂಪ್ ಮುಖ್ಯಸ್ಥ ಪ್ರಕಾಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಮತ್ತಿತರರು ಉಪಸ್ಥಿತರಿದ್ದರು.
