ಉಡುಪಿ : ಸಾರ್ವಜನಿಕ ಪ್ರದೇಶ, ವಾಣಿಜ್ಯ ಮಳಿಗೆಗಳಲ್ಲಿ ತುಳು ಭಾಷೆಯ ನಾಮಫಲಕ ಅಳವಡಿಸಲು ಮನವಿ
Thumbnail
ಉಡುಪಿ : ತುಳು ಭಾಷೆ ಲಿಪಿಯ ಅಕ್ಷರಗಳನ್ನು ಸಹ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಅಳವಡಿಸಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಆದೇಶ ಹೊರಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಮೊಯಿದೀನ್ ಬಾವ ಹಾಗೂ ಎಲ್ಲಾ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ತುಳುನಾಡಿನ ಜನರ ಪರವಾಗಿ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಯಿತು. ಉಡುಪಿ ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು. ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ 2024 ರಲ್ಲಿ ತಿಳಿಸಿರುವಂತೆ ಕನ್ನಡ ಭಾಷೆಯನ್ನು ಶೇಕಡ 60 ರ ಬದಲಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೌರವಾನ್ವಿತ ನ್ಯಾಯಾಲಯದ ಕನ್ನಡ ನಾಮಫಲಕಗಳಿಗೆ ಕನಿಷ್ಠ ಶೇಕಡ 50 ನ್ನು ನಮೂದಿಸಿ ಹಾಗೂ 2500 ವರ್ಷಗಳ ಇತಿಹಾಸ ಹೊಂದಿರುವ ಸ್ವಂತ ಲಿಪಿ ಹೊಂದಿರುವ ತುಳು ಲಿಪಿಯ ಅಕ್ಷರಗಳಿಗೆ ಶೇಕಡ 30 ರಷ್ಟು ಅವಕಾಶ ನೀಡಬೇಕು ಮತ್ತು ಉಳಿದ ವ್ಯಾವಹಾರಿಕ ಭಾಷೆಗಳಿಗೆ ಶೇಕಡ 20 ರಷ್ಟನ್ನು ತುಳುನಾಡಿನ 2 ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೂಡಲೇ ವಿಶೇಷ ಆದೇಶ ಹೊರಡಿಸಬೇಕೆಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಆಕಾಶ್ ರಾಜ್ ಜೈನ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ತುಳು ಪರ ಹೋರಾಟಗಾರರಾದ ರೋಷನ್ ರೆನೋಲ್ಡ್, ಜೈ ತುಳುನಾಡು ಸಂಘಟನೆ ಅಧ್ಯಕ್ಷರಾದ ವಿಷು ಶ್ರೀಕೆರಾ, ತುಳುನಾಡು ಒಕ್ಕೂಟದ ಪ್ರಮುಖ ಮುಖಂಡರುಗಳು, ಉಡುಪಿ ರಾಜಕೀಯ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಅವರು, ಸೇರಿದಂತೆ ಎಲ್ಲಾ ತುಳು ಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.
Additional image
11 Mar 2024, 02:41 PM
Category: Kaup
Tags: