ಜಾನಪದ ವಿಭೂಷಣ ಪ್ರಶಸ್ತಿಗೆ ಕರುಣಾಕರ ಕೆ. ಕಾಪು ಆಯ್ಕೆ
ಕಾಪು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮಹಾರಾಷ್ಟ್ರ ಘಟಕದ ವಾರ್ಷಿಕ ಜಾನಪದ ವಿಭೂಷಣ ಪ್ರಶಸ್ತಿಗೆ ಮೂಲತಃ ಕಾಪುವಿನ ಪ್ರಸ್ತುತ ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ವಾಸ್ತವ್ಯವಿರುವ ನಾಟಕಕಾರ, ಜಾನಪದ ರಂಗ ನಿರ್ದೇಶಕ ಕರುಣಾಕರ ಕೆ. ಕಾಪು ಆಯ್ಕೆಯಾಗಿದ್ದಾರೆ.
ಮಾ. 24ರಂದು ಅಪರಾಹ್ನ 2ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿರುವ ಸಂಸ್ಥೆಯ 'ಸಾಂಸ್ಕೃತಿಕ ಜಾನಪದ ಸಿರಿ ಸಿಂಚನ' ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇವರು ಕಾಪುವಿನ ಕೃಷ್ಣಪ್ಪ ಸಾಲ್ಯಾನ್ ಮತ್ತು ಗಿರಿಜಾ ಸಾಲ್ಯಾನ್ ದಂಪತಿ ಪುತ್ರರಾಗಿದ್ದು, ಹುಟ್ಟೂರಿ ನಲ್ಲಿಪ್ರಾಥಮಿಕ ಶಿಕ್ಷಣ ಪೂರೈಸಿ, ಮುಂಬಯಿಗೆ ಬಂದು ಹಗಲಿನಲ್ಲಿ ದುಡಿದು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯಲ್ಲಿ ಮುಂದಿನ ಶಿಕ್ಷಣ ಪಡೆದರು. ಶಾಲಾ ಜೀವನದಲ್ಲೇ ರಂಗಕಲೆಯ ವೈವಿಧ್ಯತೆಗೆ ಮಾರು ಹೋಗಿ ಕಲೆಯನ್ನು ಮೈಗೂಡಿಸಿಕೊಂಡು ಮುಂಬಯಿಯಲ್ಲಿ ಸಮಾನ ಮನಸ್ಕರೊಂದಿಗೆ ಅಭಿನಯ ಮಂಟಪ ಸಂಸ್ಥೆ ಸ್ಥಾಪಿಸಿದ ಶ್ರೇಯಸ್ಸು ಇವರದ್ದಾಗಿದೆ. ಉತ್ತಮ ಲೇಖಕ, ರಂಗನಿರ್ದೇಶಕರಾಗಿ ಮುಂಬಯಿ ರಂಗಭೂಮಿಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದ್ದಾರೆ. ಸಮರ್ಥ ಸಂಘಟಕರೂ ಆದ ಅವರು ಜನತಾ ಎಜುಕೇಶನ್ ಸೊಸೈಟಿ ಮುಂಬಯಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗಭೂಮಿಗೆ ಕಲಾ ಕಾಣಿಕೆಯಾಗಿ ಹಲವಾರು ನಾಟಕಗಳನ್ನು ಬರೆದು, ನಿರ್ದೇಶಿಸಿದ್ದಾರೆ.
ಇವರ ಸಾಧನೆಯನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.
