ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ
Thumbnail
ಅದಮಾರು : ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ರವರು, "ಮಾದಕ ವಸ್ತು ಸೇವನೆ ವಿದ್ಯಾರ್ಥಿಗಳ ಬಾಳನ್ನೇ ಹಾಳು ಮಾಡುತ್ತದೆ. ಕೆಲವೊಮ್ಮೆ ಮಾದಕ ವಸ್ತುಗಳ ಮಾರಾಟಗಾರರು ಮಕ್ಕಳ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ದಯವಿಟ್ಟು ಮಾದಕ ವಸ್ತುಗಳಿಗೆ ಬಲಿಯಾಗಬೇಡಿ. ಹಾಗೆಯೇ ತಂಬಾಕು ಉತ್ಪನ್ನ ಗಳನ್ನು ಕೂಡಾ ಸೇವಿಸಬೇಡಿ. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ, ಮುಂದೆ ಏನನ್ನು ಬೇಕಾದರೂ ಸಾಧಿಸಬಹುದು" ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರಾದ ದೇವಿ ಪ್ರಸಾದ್ ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಪ್ರೊಫೆಸರ್ ನಿತ್ಯಾನಂದರವರು ಮಾತನಾಡಿ "ವಿದ್ಯಾರ್ಥಿ ಜೀವನದಲ್ಲಿ ನೀವು ಸರಿಯಾಗಿದ್ದರೆ ಜೀವನದ ಕೊನೆತನಕ ಸರಿಯಾಗಿರುತ್ತೀರಿ. ಯಾವುದೇ ಕಾರಣಕ್ಕೂ ದುಷ್ಚಟಗಳಿಗೆ ಬಲಿಯಾಗಬೇಡಿ. ಸ್ನೇಹದ ಹೆಸರಿನಲ್ಲಿ ಮೋಸ ಮಾಡುವವರಿದ್ದಾರೆ. ಅಂತವರಿಂದ ಆದಷ್ಟು ದೂರವಿರಿ" ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಜೀವ್ ನಾಯಕ್ ರವರು, ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರು. ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ್ ರಾವ್ ರವರು ಉಪಸ್ಥಿತರಿದ್ದರು. ಕು. ಸಿರಿ ಮಹಿದಾಸ್ ಸ್ವಾಗತಿಸಿದರು. ಕು.ಫಾತಿಮಾ ಸಹನ ಧನ್ಯವಾದವಿತ್ತಳು. ಕು. ನಿತೀಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದಳು.
26 Jun 2024, 07:13 PM
Category: Kaup
Tags: