ಕಾಪು ತಾಲ್ಲೂಕಿನಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ; ಜಾಗೃತಿ ಮೂಡಿಸಿದ ತಹಶಿಲ್ದಾರ್
Thumbnail
ಕಾಪು : ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಶುಕ್ರವಾರ "ಡ್ರೈ ಡೇ" ಆಚರಿಸಲು ಸರ್ಕಾರ ಸೂಚಿಸಿದೆ. ಅದರಂತೆ ತಹಶಿಲ್ದಾರ್ ಪ್ರತಿಭಾ ಆರ್ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ ನೇತೃತ್ವದಲ್ಲಿ ಕಾಪು ತಾಲ್ಲೂಕಿನ ಕಟಪಾಡಿ ಪ್ರದೇಶದ ಮನೆಗಳ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಕುರಿತು ಜಾಗೃತಿ ಮೂಡಿಸಲಾಯಿತು. ಮನೆಗಳ ಬಳಿ ಡ್ರಮ್ಗಳಲ್ಲಿ , ಬಕೆಟ್ಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಬೆಳವಣಿಗೆ ಆಗಿರುವುದನ್ನು ಪತ್ತೆ ಹಚ್ಚಲಾಯಿತು. ತಕ್ಷಣ ಆ ನೀರನ್ನು ಖಾಲಿ ಮಾಡಿ ಆ ಮನೆಗಳವರಿಗೆ ಈ ರೀತಿ ನೀರು ಸಂಗ್ರಹಿಸಿಡದಂತೆ ಜಾಗೃತಿ ಮೂಡಿಸಲಾಯಿತು. ಡೆಂಗ್ಯೂ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಕರಪತ್ರಗಳನ್ನು ಹಂಚಲಾಯಿತು. ಗ್ರಾಮ ಪಂಚಾಯತಿ ಮತ್ತು ಪುರಸಭೆ ಸ್ವಚ್ಚತಾ ಸಿಬ್ಬಂದಿಗಳಿಗೆ ಚರಂಡಿ ಮುಂತಾದೆಡೆ ನೀರು ನಿಲ್ಲದಂತೆ ಸ್ವಚ್ಚಗೊಳಿಸಲು ತಿಳಿಸಲಾಗಿದೆ. ತೆಂಗಿನ ಚಿಪ್ಪು, ಹಳೆಯ ಟೈರು, ಪ್ಲಾಸ್ಟಿಕ್ ಡಬ್ಬ ಎಲ್ಲಿಯೂ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ತಹಶಿಲ್ದಾರ್ ಪ್ರತಿಭಾ ಆರ್ ಸೂಚಿಸಿದ್ದಾರೆ. ಯಾವುದೇ ರೀತಿಯ ಜ್ವರ ಬಂದರೂ ತಕ್ಷಣ ವೈದ್ಯರ ಸಲಹೆಪಡೆಯಲು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸುಲ್ವಾ ಸಲಹೆ ನೀಡಿದ್ದಾರೆ. ಒಟ್ಟಾರೆ ಕಾಪು ತಾಲ್ಲೂಕಿನಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕಾಗಿ ಸರ್ವ ಸಿದ್ದತೆ ಮಾಡುಕೊಳ್ಳಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ. ವೈದ್ಯರಾದ ಡಾ.ಶೈನಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಚಂದ್ರಕಲಾ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
06 Jul 2024, 06:20 AM
Category: Kaup
Tags: