ಶಿರ್ವ : ಬ್ಯಾಂಕಿಂಗ್ ವೃತ್ತಿಯಲ್ಲಿ ಸುಮಾರು 40 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ ಗ್ರಾಹಕ ಸ್ನೇಹಿಯಾಗಿ ಜನಮನ್ನಣೆ ಗಳಿಸಿದ ರಮಾನಂದ ಆಚಾರ್ಯ ಉಡುಪಿ ಇವರು ಮಂಗಳವಾರ ಬಂಟಕಲ್ಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ವಯೋನಿವೃತ್ತಿ ಹೊಂದಿದ ಶುಭಾವಸರದಲ್ಲಿ ಬ್ಯಾಂಕ್ ಸಿಬ್ಬಂದಿಗಳು, ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಗ್ರಾಹಕರು, ವಿವಿಧ ಭಾಗದ ಮಾಜಿ ಸಹೋದ್ಯೋಗಿಗಳ ಸಮ್ಮುಖದಲ್ಲಿ ಕರ್ನಾಟಕ ಬ್ಯಾಂಕ್ ಉಡುಪಿ ವಲಯದ ಸಹಾಯಕ ಮಹಾ ಪ್ರಬಂಧಕರಾದ ರಮೇಶ್ ವೈದ್ಯ ಇವರು ಸನ್ಮಾನಿಸಿ ಶುಭ ವಿದಾಯ ಕೋರಿದರು.
ಬ್ಯಾಂಕ್ನ ಮೂಲ ಧ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸಿ ಬ್ಯಾಂಕ್ ಮತ್ತು ಗ್ರಾಹಕರ ಕೊಂಡಿಯಾಗಿ ನೀಡಿದ ಸೇವೆಗೆ ಇಲ್ಲಿ ಸೇರಿದ ಅಪಾರ ಸಂಖ್ಯೆಯ ಗ್ರಾಹಕರೇ ಸಾಕ್ಷಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಿವೃತ್ತರ ಪತ್ನಿ ಅರ್ಚನಾ ಆಚಾರ್ಯ ವೇದಿಕೆಯಲ್ಲಿದ್ದರು.
ನಿವೃತ್ತರ ಸೇವೆಯ ಬಗ್ಗೆ ಗ್ರಾಹಕರಾದ ಕೆ.ರ್.ಪಾಟ್ಕರ್, ಸ್ಯಾಮ್ಸನ್ ನೊರೋನ್ಹಾ, ಪುಂಡಲೀಕ ಮರಾಠೆ, ಸಹೋದ್ಯೋಗಿಗಳಾಗಿದ್ದ ವಾದಿರಾಜ ಆಚಾರ್ಯ, ಉಡುಪಿ ಶಾಖಾಧಿಕಾರಿ ಸುಬ್ರಹ್ಮಣ್ಯ ಬಾರ್ವೆ ಮಾತನಾಡಿದರು.
ಬಂಟಕಲ್ಲು ಶಾಖಾಧಿಕಾರಿ ವಿಘ್ನೇಶ್ವರ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಸಹೋದ್ಯೋಗಿ ದಿವ್ಯಾ ವಂದಿಸಿದರು.
ವಿವಿಧ ಶಾಖೆಗಳಿಂದ ಆಗಮಿಸಿದ ಮಾಜಿ ಸಹೋಗ್ಯೋಗಿಗಳು ರಮಾನಂದ ಆಚಾರ್ಯ ದಂಪತಿಗಳಿಗೆ ಶುಭವಿದಾಯ ಕೋರಿದರು.
