ಕಾಪು : ಯುವಕರಲ್ಲಿ ಬೌದ್ಧಿಕ ಸಾಮರ್ಥ್ಯ, ಏಕಾಗ್ರತೆ ಹಾಗೂ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಚೆಸ್ ಸಹಕಾರಿಯಾಗಲಿದೆ ಎಂದು ಮಂಗಳೂರು ಸಿಎಆರ್ ಡೆಪ್ಯೂಟಿ ಕಮಿಶನರ್ ಆಫ್ ಪೊಲೀಸರಾದ ಉಮೇಶ್ ಪಿ. ಹೇಳಿದರು.
ಅವರು ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ
ಯುವವಾಹಿನಿ ಕಾಪು ಘಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿರುವ ‘ಯುವವಾಹಿನಿ ಟ್ರೋಫಿ–2026’ ಓಪನ್ ಹಾಗೂ ವಯೋಮಿತಿ ಚೆಸ್ ಪಂದ್ಯಾವಳಿಯಲ್ಲಿ ಚೆಸ್ ಕಾಯಿ ಮುನ್ನಡೆಸಿ, ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ ಮಾತನಾಡಿ, ಗ್ರಾಮೀಣ ಪ್ರದೇಶದ ಚೆಸ್ ಪ್ರತಿಭೆಗಳನ್ನು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಲು ಈ ಪಂದ್ಯಾಟ ಸಹಕಾರಿ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳಿಗೆ ಚೆಸ್ ಕ್ರೀಡೆ ಪರ್ಯಾಯವಾಗಲಿದೆ. ಈ ಮೂಲಕ ಕೇಂದ್ರ ಸಮಿತಿ ಅಧೀನದ 35 ಘಟಕಗಳಲ್ಲಿ ಕಾಪು ಯುವವಾಹಿನಿ ಘಟಕವು ಮಾದರಿ ಸಂಸ್ಥೆಯಾಗಿ ಮೂಡಿಬಂದಿದೆ ಎಂದರು.
ಕಾಪು ಬಿಲ್ಲವ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಕಾಪು ಸಿಎ ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉದ್ಯಮಿ ಪ್ರಭಾಕರ ಪೂಜಾರಿ ಕೈಪುಂಜಾಲು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಉಮಾನಾಥ್ ಕಾಪು, ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಉಪಸ್ಥಿತರಿದ್ದರು.
ಯುವವಾಹಿನಿ ಕಾಪು ಘಟಕದ ನಿರ್ದೇಶಕ ರಾಕೇಶ್ ಕುಂಜೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಸುನೀಲ್ ಪೂಜಾರಿ ವಂದಿಸಿದರು. ಉಪನ್ಯಾಸಕ ರಾಕೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಜಿಲ್ಲೆಯಿಂದ ಮತ್ತು ವಿವಿಧ ರಾಜ್ಯಗಳಿಂದ
ಸುಮಾರು 250 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
