ಪಡುಬಿದ್ರಿ : ತುಳುನಾಡ ಕಲಾವಿದರು (ರಿ.) ಪಡುಬಿದ್ರಿ ಇದರ ರಜತ ಸಂಭ್ರಮದ ಪ್ರಯುಕ್ತ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 9, ಶನಿವಾರ ರಾತ್ರಿ 8 ಗಂಟೆಗೆ ದೇವಳದ ವಠಾರದಲ್ಲಿ ‘ತಾಳ-ತರಂಗ-2026 ಸಂಗೀತ ರಸಸಂಜೆ’, ‘ನೃತ್ಯ ವೈಭವ’ ಕಾರ್ಯಕ್ರಮ ಜರಗಲಿದೆ ಎಂದು ತುಳುನಾಡ ಕಲಾವಿದರು ಇದರ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಹೇಳಿದರು.
ಅವರು ಗುರುವಾರ ಕಾಪು ಪತ್ರಿಕಾ ಭವನದಲ್ಲಿಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹರಿಪ್ರಸಾದ್ ರೈ. ಉದ್ಘಾಟಿಸಲಿದ್ದಾರೆ.
ಸಂಸ್ಥೆಯು ಕಳೆದ 25 ವರ್ಷಗಳಿಂದ ಗ್ರಾಮೀಣ ಪ್ರದೇಶದ ಕಲಾ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ, ಕಲಾ ಪ್ರತಿಭೆಗಳನ್ನು ಬೆಳೆಸಿ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರತಿ ವರ್ಷ ಕಲಾ ಕ್ಷೇತ್ರದ ಸಾಧಕರಿಗೆ "ತುಳುನಾಡ ಸಿರಿ" ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಈ ಬಾರಿ 4 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ. ಸಾಮಾಜಿಕ, ಧಾರ್ಮಿಕ, ಕಲಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಿದ್ದೇವೆ. ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸಂಗೀತ ರಸಸಂಜೆಯ ಜೊತೆಗೆ ಓಂಕಾರ್ ಕಲಾಸಂಗಮ ಪಡುಬಿದ್ರಿ ಇವರಿಂದ ನೃತ್ಯ ವೈಭವ ಜರಗಲಿದೆ.
ಸಂಸ್ಥೆಯ ಗೌರವ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಚಂದ್ರಹಾಸ್ ಶೆಟ್ಟಿ ಪೂಲ, ನವೀನ್ ಚಂದ್ರ ಜೆ. ಶೆಟ್ಟಿ, ಗಣೇಶ್ ಆಚಾರ್ಯ ಉಚ್ಚಿಲ, ವಿಜಯ ಮೆಂಡನ್, ಅಶೋಕ್ ಸಾಲ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಚನ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕೆ., ಜೊತೆ ಕಾರ್ಯದರ್ಶಿ ದಿನೇಶ್ ಪಡುಬಿದ್ರಿ ಉಪಸ್ಥಿತರಿದ್ದರು.
