ಇಂದು (ಮೇ 16) : ಕಾಪು ಪಿಲಿ ಕೋಲ
ಕಾಪು : ದ್ವೈವಾರ್ಷಿಕವಾಗಿ ಕಾಪು ಶ್ರೀ ಮುಗ್ಗೇರ್ಕಳ ಹುಲಿ ಚಂಡಿ ದೈವಸ್ಥಾನದಲ್ಲಿ ಜರಗಲಿರುವ "ಪಿಲಿ ಕೋಲ" ಮೇ 16, ಶನಿವಾರ ಜರುಗಲಿದೆ.
ನಲ್ವತ್ತು ವರ್ಷಗಳಿಗೂ ಅಧಿಕ ಕಾಲ ಪಿಲಿ ಕೋಲ ಕಟ್ಟಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಮೂಳೂರು ಗುಡ್ಡ ಪಾಣಾರ ಅವರ ಪುತ್ರ ಸುಧಾಕರ ಪಾಣಾರ ಈ ಬಾರಿ ಅಭಯ ದೊರೆತು ಪಿಲಿ ಕೋಲ ಕಟ್ಟಲಿದ್ದಾರೆ.
ಜನರು ಹುಲಿಯನ್ನು ನೋಡಿ ಹುಲಿಯಿಂದ ತಪ್ಪಿಸಿಕೊಳ್ಳುವ ದೃಶ್ಯ ರೋಚಕವಾಗಿರುತ್ತದೆ. ಹುಲಿಯನ್ನು ಹಗ್ಗದ ಮೂಲಕ ನಿಯಂತ್ರಿಸುವವರೂ ಇರುತ್ತಾರೆ. ಬೇಟೆಯ ವೇಳೆ ಯಾರನ್ನಾದರು ಮುಟ್ಟಿದರೆ ಅವರಿಗೆ ಕಂಟಕವಿದೆ ಎಂಬ ನಂಬಿಕೆಯಿದೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆವ ಕೋಲವನ್ನು ವೀಕ್ಷಿಸಲು ವಿವಿಧ ಭಾಗದಿಂದ ಜನರು ಆಗಮಿಸುತ್ತಾರೆ.
