ಕಾಪು : ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶಿರ್ವ ಸಮೀಪದ ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಭವನದಲ್ಲಿ ಎರಡು ದಿನಗಳ ಪರ್ಯಂತ ಜರುಗುವ ಕಾಪು ಮಂಡಲ ಪ್ರಶಿಕ್ಷಣ ಅಭಿಯಾನಕ್ಕೆ ಶುಕ್ರವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಇವರು ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.
ವೇದಿಕೆಯಲ್ಲಿರುವ ಗಣ್ಯರು ಭಾರತಮಾತೆ, ಪಂ.ದೀನದಯಾಳ್ ಉಪಾಧ್ಯಾಯ,ಶ್ಯಾಮ್ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.
ಉದ್ಘಾಟಕರಾದ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ವ್ಯಕ್ತಿ ನಿರ್ಮಾಣ ದಿಂದ ಸಂಘಟನೆ, ಸಂಘಟನೆಯಿಂದ ರಾಷ್ಟ್ರ ನಿರ್ಮಾಣ ತತ್ವದಡಿಯಲ್ಲಿ ಪ್ರತೀ ಬೂತ್ ಮಟ್ಟದ ಪ್ರಮುಖರಿಗೆ ವೈಚಾರಿಕ ಬದ್ಧತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಶಿಕ್ಷಣ ನೀಡುವ ಮೂಲಕ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 300ಕ್ಕೂ ಅಧಿಕ ಪ್ರಶಿಕ್ಷಣ ವರ್ಗಗಳು ನಡೆಯುತ್ತಿವೆ ಎಂದರು.
ಕಾಪು ಕ್ಷೇತ್ರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇತ್ತೀಚೆಗೆ ನಡೆದ ಚುನಾವಣಾ ಗೆಲುವು ಕಾರ್ಯಕರ್ತರ ಬಲ ದಿಂದ ಆಗಿದೆ. ಜನಸಂಘದ ಕಾಲದಿಂದಲೂ ಪ್ರಮುಖ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದ್ದು, ಬಿಜೆಪಿಯಲ್ಲೂ ಮೇಲ್ಮಟ್ಟದ ನಾಯಕರಿಗೆ,ಕಾರ್ಯಕರ್ತರಿಗೆ ಈ ಕಾರ್ಯಕ್ರಮ ನಡೆಯುತ್ತಿತ್ತು. ಪಕ್ಷ ತಾಯಿ ಇದ್ದಂತೆ. ಈಗ ತಳಮಟ್ಟದ ಕಾರ್ಯಕರ್ತರಿಗೂ ಆತ್ಮವಿಶ್ವಾಸ,ಬದ್ಧತೆ ಬೆಳೆಸುವ ಕಾರ್ಯ ನಡೆಯುತ್ತದೆ. ಜಗತ್ತಿನಲ್ಲಿ ಒಳ್ಳೆಯ ಚರಿತ್ರೆ ಇರುವ ಪಕ್ಷದಲ್ಲಿ ನಾವಿದ್ದೇವೆ ಎಂದರು.
ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶರಣ್ ಕುಮಾರ್ ಮಟ್ಟು, ಉಪಸ್ಥಿತರಿದ್ದರು. ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿದರು. ಪಾಣೇಶ್ ಹೆಜಮಾಡಿ ವಂದೇಮಾತರಮ್ ಗೀತೆ ಹಾಡಿದರು.ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ವಂದಿಸಿದರು.
