ಬೆಳಪು : ಹೆಂಡತಿಯ ಮನೆಯ ಮುಂಭಾಗ ಆತ್ಮಹತ್ಯೆಗೆ ಶರಣಾದ ಗಂಡ
Thumbnail

ಕಾಪು : ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿಯ ಮನೆಯ ಮುಂಭಾಗ ಇರುವ ಮಾವಿನ ಮರದ ಕೊಂಬೆಗೆ  ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನ ಬೆಳಪುವಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

ಜಹಿರ್‌ಅಬ್ದುಲ್‌ ಮಾಂಗಾವಕರ್‌ (42) ಮೃತ ವ್ಯಕ್ತಿ. ಗೋವಾ ಮೂಲದ ಈತ ಬೆಳಪುವಿನ ಯುವತಿಯನ್ನು ಸಂಪ್ರದಾಯದ ಬದ್ಧವಾಗಿ ಮೂಳೂರು ಜುಮ್ಮ ಮಸೀದಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದನು. 

ಇವರಿಗೆ 2 ಗಂಡು ಮಕ್ಕಳಿದ್ದು, ಸಂಸಾರದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿದ್ದು, ಆಗಾಗ ಗಂಡನ ಮನೆಯಿಂದ ಯುವತಿ ಊರಿಗೆ ಬಂದು ನಂತರ ರಾಜಿಯಾಗಿ ಇರುತ್ತಿದ್ದರು ಎನ್ನಲಾಗಿದೆ. 

ಜಹಿರ್‌ ಅಬ್ದುಲ್‌ ಮಾಂಗಾವಕರ್‌ ಒಂದು ಬಾರಿ ಬೆಳಪುವಿನಲ್ಲಿ ಕೂಡಾ ಪಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಕಳೆದ 3 ತಿಂಗಳ ಹಿಂದೆ ಯುವತ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಮಯ ಊರಿಗೆ ಬಂದಿದ್ದಾಳೆ. ನಂತರ ಅವಳನ್ನು ಕರೆಯಲು ಹಲವಾರು ಸಲ ಜಹಿರ್‌ ಅಬ್ದುಲ್‌ ಮಾಂಗಾವಕರ್‌ ರವರು ಬೆಳಪುವಿಗೆ ಬಂದಾಗ ತಾನು ಬರುವುದಿಲ್ಲ ಎಂದು ಹೇಳಿರುತ್ತಾಳೆ. ಒಂದು ಮಗುವನ್ನು ನನಗೆ ಕೊಡು ನಾನು ಓದಿಸುತ್ತೇನೆ ಎಂದು ಜಹಿರ್‌ ಅಬ್ದುಲ್‌ ಮಾಂಗಾವಕರ್‌ ಇವರು ಹೇಳಿದರೂ ಕೇಳದೆ ಗೋವಾದಲ್ಲಿ ಓದುತ್ತಿದ್ದ ಮಗನ ಸ್ಕೂಲ್‌ ಸರ್ಟಿಪಿಕೇಟ್‌ ತಂದಿರುತ್ತಾಳೆ. ಈ ಬಗ್ಗೆ ಜಹಿರ್‌ ಅಬ್ದುಲ್‌ ಮಾಂಗಾವಕರ್‌ ಮಾನಸಿಕವಾಗಿ ನೊಂದಿದ್ದನು. ಮೇ 15 ರಂದು ಗೋವಾದಿಂದ ಹೊರಟು ಮೇ 16 ರಂದು ಬೆಳಿಗ್ಗೆ ಬೆಳಪುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. 

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 May 2026, 06:43 PM
Category: Kaup
Tags: