ಶಿರ್ವ : ಭಗವಂತ ಎಲ್ಲರ ಕಲ್ಯಾಣಕ್ಕಾಗಿ ಭೂಮಿಗೆ ಬಂದಿದ್ದಾರೆ. ಸತ್ಕರ್ಮಗಳನ್ನು ಮಾಡಲು ದೇವರು ನಮ್ಮನ್ನು ಇಲ್ಲಿ ಇಟ್ಟಿದ್ದಾರೆ. ನಮ್ಮ ಸನಾತನ ಸಂಸ್ಕೃತಿ ಅತ್ಯಂತ ಬಲಿಷ್ಟವಾದುದು. ನಮ್ಮೊಳಗೆ ಜಾತಿ,ಮೇಲು,ಕೀಳು ಎಂಬ ಚಿಂತನೆ ಬಂತು.ಮೆಕಾಲೆ ಶಿಕ್ಷಣ ದಿಂದ ನಮ್ಮ ಮನೆಯೊಳಗೂ ವಿಭಜನೆಯ ಕಾನೂನು ಬಂತು. ನಮ್ಮ ಸಂಸ್ಕೃತಿಯನ್ನು ನಾವೇ ಹಾಳು ಮಾಡಿದ್ದೇವೆ. ಹಿಂದುಗಳಲ್ಲಿ ಭೇದಭಾವ ಸಲ್ಲದು. ಹಿಂದುಗಳು ಸದೃಢವಾದರೆ ಮಾತ್ರ ದೇಶ ಸದೃಢವಾಗುತ್ತದೆ. ಮನೆಯ ಸಂಸ್ಕಾರ,ವ್ಯವಸ್ಥೆ ಸದೃಢವಾಗಬೇಕಾದರೆ ನಾವು ಎಚ್ಚರಗೊಳ್ಳಬೇಕು. ಕುಟುಂಬ ಜೀವನ ಗಟ್ಟಿಯಾಗಬೇಕು. ಉಚಿತಗಳು ಸಮಾಜವನ್ನೇ ನಶ್ವರ ಮಾಡುತ್ತಿವೆ. ಹಿಂದೂ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡಬೇಕು.ಹಿಂದುಗಳು ಸಂಘಟಿತರಾದಾಗ ದೇಶ ಬಲಿಷ್ಟಿಗೊಳ್ಳುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ನುಡಿದರು. ಅವರು ರವಿವಾರ ಪಡುಬೆಳ್ಳೆ ಶ್ರೀಮಹಾಲಿಂಗೇಶ್ವರ ದೇವಳದ ಸಭಾಂಗಣದಲ್ಲಿ ವಿಶ್ವಹಿಂದು ಪರಿಷದ್,ಭಜರಂಗದಳ ಪಡುಬೆಳ್ಳೆ ಇದರ ರಜತ ಸಂಭ್ರಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವನ ನೀಡುತ್ತಾ, ಪ್ರತೀಮನೆಗಳಲ್ಲಿಯೂ ಕನಿಷ್ಠ ಮೂರು ಮಕ್ಕಳು ಇರಬೇಕು. ಧನಾತ್ಮಕವಾಗಿ ನೋಡುವ ಮನಸ್ಥಿತಿಯನ್ನು ರೂಢಿಸಿಕೊಳ್ಳಿ. ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ. ಸಮಾಜ ಸಂಘಟನೆಗಳು ಬೆಳೆಯಲು ಮಕ್ಕಳು ಬೇಕು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಡುಬೆಳ್ಳೆ ವಿಶ್ವಹಿಂದು ಪರಿಷದ್ ಸ್ಥಾಪಕ ಅಧ್ಯಕ್ಷ ಬೆಳ್ಳೆ ದೊಡ್ಡಮನೆ ಅಜಿತ್ ಪುಷ್ಕರ ಶೆಟ್ಟಿ ವಹಿಸಿ ಮಾತನಾಡಿ, ಈ ಭಾಗದಲ್ಲಿ ಸಂಘಟನೆಯನ್ನು ಸ್ಥಾಪಿಸಲು ಪ್ರೇರಣೆ,ಮಾರ್ಗದರ್ಶನ ನೀಡಿದ ದಿ.ಕಮಲಾಕ್ಷ ಶೆಣೈ, ಪಾಂಗಾಳ ಪಾಂಡುರಂಗ ಶ್ಯಾನುಭಾಗ್, ಪುಂಡಲೀಕ ಮರಾಠೆ ಸಹಿತ ಅನೇಕ ಹಿರಿಯರು ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಅನೇಕ ಪ್ರತಿರೋಧಗಳನ್ನೂ ಎದುರಿಸಿ, ನಿರಂತರ ಜಾತಿಮತಧರ್ಮಗಳ ಭೇಧವಿಲ್ಲದೆ ಸಮಾಜಮುಖಿಯಾಗಿ ಹತ್ತುಹಲವು ಯೋಜನೆಗಳನ್ನು ರೂಪಿಸಿ ಸಾರ್ವಜನಿಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿದ್ದೇವೆ ಎಂದರು. ಪಡುಬೆಳ್ಳೆ ವಿಹಿಂಪ ಸ್ಥಾಪಕ ಕಾರ್ಯದರ್ಶಿ ಶ್ರೀಶ ಸಾಮಗ ಪ್ರಾಸ್ತಾವಿಕ ಮಾತುಗಳಲ್ಲಿ ಈ ಸಂಘಟನೆ ಬೆಳೆದುಬಂದ ಸನ್ನಿವೇಶವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ವಿಹಿಂಪ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಸಂಘಟನೆಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ಕಟ್ಟಿಂಗೇರಿ ಶ್ರೀಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಕೆ.ದೇವದಾಸ್ ಹೆಬ್ಬಾರ್ ಮಾತನಾಡಿದರು.
ಕಾರ್ಯದರ್ಶಿ ವಿಘ್ನೇಶ್ ದೇವಾಡಿಗ ವರದಿ ವಾಚಿಸಿದರು. ವೇದಿಕೆಯಲ್ಲಿ ಪಡುಬೆಳ್ಳೆ ವಿಶ್ವಹಿಂದು ಪರಿಷದ್ ಅಧ್ಯಕ್ಷ ವಿಕಾಸ್ ಪೂಜಾರಿ, ಉಪಾಧ್ಯಕ್ಷ ಉದಯ ಆಚಾರ್ಯ, ಕೋಶಾಧಿಕಾರಿ ಅವಿನಾಶ್ ಆಚಾರ್ಯ, ಭಜರಂಗದಳದ ಸಂಚಾಲಕ ದಿವಾಕರ ಆಚಾರ್ಯ ಉಪಸ್ಥಿತರಿದ್ದರು.
ಗೌರವ ಅಧ್ಯಕ್ಷ ಬೆಳ್ಳೆ ಮಧ್ವರಾಜ ಭಟ್, ಹಿರಿಯರಾದ ಬೆಳ್ಳೆ ಸದಾನಂದ ಶೆಣೈ,ಗೌರವ ಸಲಹೆಗಾರರಾದ ಪರಶುರಾಮ ಭಟ್, ಸಂತೋಷ್ ಕುಲಾಲ್, ರಾಕೇಶ್ ಆಚಾರ್ಯ ಪಡುಬೆಳ್ಳೆ, ಸಹ ಕಾರ್ಯದರ್ಶಿ ಮಧುಕರ್ ಕುಲಾಲ್, ಭಜರಂಗದಳ ಸಹ ಸಂಚಾಲಕ ಕಿರಣ್ ದೇವಾಡಿಗ,ಸಾಮರಸ್ಯ ಪ್ರಮುಖ್ ರಾಘವೇಂದ್ರ ಶೆಟ್ಟಿ, ಧರ್ಮಪ್ರಸಾರಕ್ ಶಶಿಕಾಂತ್ ಕುಕ್ಯಾನ್, ಮಠ ಮಂದಿರ ಪ್ರಮುಖ್ ಮಹೇಶ್ ಪೂಜಾರಿ, ಗೋರಕ್ಷಕ್ ಪ್ರಮುಖ್ ಸುನಿಲ್ ದೇವಾಡಿಗ, ವಿದ್ಯಾರ್ಥಿ ಪ್ರಮುಖ್ ಸುದೀಪ್ ದೇವಾಡಿಗ, ಉಪಸ್ಥಿತರಿದ್ದರು.
ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ರಾಶಿ ಶೆಟ್ಟಿ ಪ್ರಾರ್ಥಿಸಿದರು. ಬೆಳ್ಳೆ ನಡಿಮನೆ ವಿಶ್ವನಾಥ್ ಶೆಟ್ಟಿ ವಂದಿಸಿದರು.
25ನೇ ವರ್ಷದ "ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ" ಧಾರ್ಮಿಕ ಅನುಷ್ಠಾನಗಳು ವೇದಮೂರ್ತಿ ಮಧ್ವರಾಜ ಭಟ್ ಪಡುಬೆಳ್ಳೆ ಇವರ ನೇತೃತ್ವದಲ್ಲಿ ನಡೆಯಿತು. ಶ್ರೀಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ "ಶ್ರೀದೇವಿ ಅಗ್ನಿ ಕಲ್ಲುರ್ಟಿ" ಯಕ್ಷಗಾನ ಬಯಲಾಟ ಜರುಗಿತು.
ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಶ್ರೀದೇವಳಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ವಿಶ್ವಹಿಂದು ಪರಿಷದ್ ಗೌರವ ಸನ್ಮಾನ ಸ್ವೀಕರಿಸಿ ಶುಭ ಹಾರೈಸಿದರು.
